ಪುತ್ತೂರು: ಸ್ಥಳೀಯ ನೆಲ್ಲಿಕಟ್ಟೆಯ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಆಶ್ರಮದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 10 ದಿನಗಳ ಉಚಿತ ಚಿತ್ರಕಲಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ಈ ಸಂದರ್ಭದಲ್ಲಿ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರಾದ ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹಾಗೂ ಯುವ ವರ್ಣ ಚಿತ್ರ ಕಲಾವಿದ ಯುಧಿಷ್ಠಿರ್ ಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತೂರು ಉಮೇಶ್ ನಾಯಕ್ ಅವರು ಆಟವಾಡುವ ವಯಸ್ಸಿನಲ್ಲಿ ತಾನು ಕಲಿತ ವರ್ಣಚಿತ್ರಕಲೆಯನ್ನು ಯುಧಿಷ್ಠಿರ್ ಗೌಡ ಅವರು ಆಶ್ರಮದ ಪುಟಾಣಿ ಮಕ್ಕಳಿಗೆ ಬೋಧಿಸುತ್ತಿರುವುದು ಶ್ಲಾಘನೀಯವಾಗಿದೆ. ಇದು ಶಿಬಿರವನ್ನು ಆಯೋಜಿಸಿದವರಿಗೂ, ಭಾಗವಹಿಸಿದ ಮಕ್ಕಳಿಗೂ ದೈವಿಕ ಆನಂದವನ್ನು ನೀಡುವ ಸಂಗತಿಯಾಗಿದೆ ಇಲ್ಲಿ ಕಲಿತ ವಿದ್ಯೆ ಮಕ್ಕಳ ಜೀವನದಲ್ಲಿ ಮುಂದಿನ ದಿನಗಳಲ್ಲಿ ಉಪಯೋಗವಾಗಲಿದೆ ಎಂದು ಹೇಳಿದರು.ಸಭಾಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಯುವದ ಅಧ್ಯಕ್ಷ ಕುಸುಮರಾಜ್ ಶುಭ ಹಾರೈಸಿದರು. ಕಾರ್ಯಕ್ರಮದ ಸಂಯೋಜಕರಾದ ರೋಟರಿ ಯುವದ ನಿಯೋಜಿತ ಅಧ್ಯಕ್ಷೆ ವಚನಾ ಜಯರಾಮ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಶಿಬಿರದಲ್ಲಿ ಚಿತ್ರಕಲೆ ಬೋಧನೆಯೊಂದಿಗೆ ಪ್ರತಿದಿನವೂ ಮನರಂಜನಾ ಆಟಗಳು, ಮೌಲಿಕ ವಿಚಾರಗಳ ಪರಿಚಯ ಹಾಗೂ ಮಕ್ಕಳಿಗೆ ಸಿಹಿ ತಿಂಡಿಗಳನ್ನು ನೀಡುವ ಮೂಲಕ ಸಂತೋಷವನ್ನು ಉಂಟುಮಾಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು. ರೋಟರಿ ಯುವ ವತಿಯಿಂದ ರಾಮಕೃಷ್ಣ ಸೇವಾಶ್ರಮಕ್ಕೆ ಐವತ್ತು ಕೆಜಿ ಅಕ್ಕಿಯನ್ನು ದೇಣಿಗೆಯಾಗಿ ನೀಡಲಾಯಿತು. ಕಾರ್ಯದರ್ಶಿ ಅಭಿಶ್ ಕೊಳಕ್ಕೆಮಾರ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಯುವ ಸಂಸ್ಥೆಯ ಸದಸ್ಯರಾದ ಸುದರ್ಶನ್ ಹಾಗೂ ಲಿಖಿತ ಕುಸುಮರಾಜ್, ಹಾಗೂ ರಾಮಕೃಷ್ಣ ಸೇವಾಶ್ರಮದ ಮೇಲ್ವಿಚಾರಕಿ ತೇಜಶ್ರೀ ಉಪಸ್ಥಿತರಿದ್ದರು.