: ಮುಂದಿನ ೫೦ ವರ್ಷಗಳ ಗುರಿಯೊಂದಿಗೆ ಪುತ್ತೂರು- ಉಪ್ಪಿನಂಗಡಿ ರಸ್ತೆಯ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಜೊತೆಗೆ ನಗರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ರಸ್ತೆಗೆ ಸರ್ಕಲ್ ಮತ್ತು ವಿದ್ಯುದೀಕರಣ ಮಾಡಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು: ಮುಂದಿನ ೫೦ ವರ್ಷಗಳ ಗುರಿಯೊಂದಿಗೆ ಪುತ್ತೂರು- ಉಪ್ಪಿನಂಗಡಿ ರಸ್ತೆಯ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಜೊತೆಗೆ ನಗರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ರಸ್ತೆಗೆ ಸರ್ಕಲ್ ಮತ್ತು ವಿದ್ಯುದೀಕರಣ ಮಾಡಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಶನಿವಾರ ಪುತ್ತೂರು ನಗರ ಯೋಜನಾ ಪ್ರಾಧಿಕಾರ(ಪುಡಾ)ದ ವತಿಯಿಂದ ನಗರದ ಬೊಳುವಾರು ಆಂಜನೇಯ ದೇವಸ್ಥಾನದ ಬಳಿ ಪುತ್ತೂರು- ಉಪ್ಪಿನಂಗಡಿ ರಸ್ತೆಗೆ ರು. ೨೫ ಲಕ್ಷ ವೆಚ್ಚದಲ್ಲಿ ಸರ್ಕಲ್ ಮತ್ತು ರು. ೨೪ ಲಕ್ಷ ವೆಚ್ಚದಲ್ಲಿ ಬಸ್ಸು ತಂಗುದಾಣ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಪುತ್ತೂರು-ಉಪ್ಪಿನಂಗಡಿ ರಸ್ತೆಯ ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕೆ ರು. ೮ ಕೋಟಿ, ನೆಕ್ಕಿಲಾಡಿ-ಉಪ್ಪಿನಂಗಡಿ ತನಕ ರಸ್ತೆಗೆ ರು. ೧೩.೫ಕೋಟಿ, ಕೋಡಿಂಬಾಡಿ ರಸ್ತೆಗೆ ರು. ೨.೫ಕೋಟಿ ಅನುದಾನ ಇರಿಸಲಾಗಿದೆ. ಅಲ್ಲದೆ ಈ ರಸ್ತೆಯಲ್ಲಿನ ವಿದ್ಯುತ್ ದೀಪ ಅಳವಡಿಕೆಗೆ ರು. ೫.೫ ಕೋಟಿ ಮೀಸಲಿರಿಸಲಾಗಿದೆ. ಈ ರಸ್ತೆಯಲ್ಲಿ ೫ ಕಡೆ ಹೈಮಾಸ್ಟ್ ದೀಪ ಅಳವಡಿಸಲಾಗುವುದು ಎಂದರು.

ತುಳು ಭಾಷೆಗೆ ೨ನೇ ಸ್ಥಾನಮಾನ ನೀಡುವ ಮೂಲಕ ಮುಖ್ಯಮಂತ್ರಿಗಳು ತುಳುವರ ಭಾವನೆಗಳಿಗೆ ಬೆಲೆ ನೀಡುವ ಕೆಲಸ ಮಾಡಿದ್ದಾರೆ. ತುಳು ಭಾಷೆಗೆ ೨ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ತಾನು ಕಳೆದ ೩ ವರ್ಷಗಳಿಂದ ಪ್ರಯತ್ನ ನಡೆಸಿದ್ದೇನೆ. ಇದೀಗ ಅದಕ್ಕೆ ಪ್ರತಿಫಲ ದೊರಕಿದೆ. ಜೊತೆಗೆ ಪುತ್ತೂರಿನ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ರು. ೫೧೯.೭೯ ಕೋಟಿ, ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ರೂ. ೫ ಕೋಟಿ ವಿಶೇಷ ಅನುದಾನ ಘೋಷಣೆಯಾಗಿದೆ. ರಾಜ್ಯದ ಮಠ, ಮಂದಿರ, ಮಸೀದಿ, ಚರ್ಚ್ ಗಳಿಗೆ ತಲಾ ರು. ೧ ಕೋಟಿ ಅನುದಾನ ಲಭಿಸಿದೆ. ಇದೆಲ್ಲವನ್ನು ನೋಡಿ ಬಿಜೆಪಿಗರಿಗೆ ಚಳಿ ಹುಟ್ಟಿದೆ ಎಂದರು.

ಮುಂದಿನ ಒಂದು ತಿಂಗಳ ಒಳಗಾಗಿ ದ.ಕ. ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಲಾಗುವುದು ಎಂದರು.

ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡಿರುವುದು ಕೇಂದ್ರ ಸರ್ಕಾರ. ಆದರೆ ಬಿಜೆಪಿಯವರು ಕಾಂಗ್ರೆಸ್‌ನ ಮೇಲೆ ಆರೋಪಿಸುತ್ತಿದ್ದಾರೆ ಎಂದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ನಗರಸಭಾ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಕೆಪಿಸಿಸಿ ಸಂಯೋಜಕ ಅಮಳ ರಾಮಚಂದ್ರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಆಳ್ವ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು.ಟಿ. ತೌಸೀಫ್, ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುಡಾ ಸದಸ್ಯರಾದ ಅನ್ವರ್ ಖಾಸಿಂ, ನಿಹಾಲ್ ಶೆಟ್ಟಿ ಉಪಸ್ಥಿತರಿದ್ದರು.

ಪುಡಾ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿದರು. ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನ್ಹಸ್ ನಿರೂಪಿಸಿದರು.ಫೋಟೋ : ಬೊಳುವಾರು ಬಳಿ ಬಸ್ಸು ತಂಗುದಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಶಾಸಕ ಅಶೋಕ್ ರೈ ಮಾತನಾಡಿದರು.