ಪುತ್ತೂರು: ಬಂಟ ಸಮಾಜಕ್ಕೆ ಗುರುಪೀಠ ಇರುವುದು ಶೃಂಗೇರಿಯಲ್ಲಿ. ಈ ಕುರಿತು ಬಂಟ ಸಮಾಜಕ್ಕೆ ಗುರುಪೀಠದ ಮೇಲೆ ಅಪಾರ ಗೌರವವಿದೆ. ಇಂತಹ ಸಂದರ್ಭದಲ್ಲಿ ಶೃಂಗೇರಿ ಶಾರದಾ ಪೀಠಾಧೀಶ್ವರಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಪುತ್ತೂರಿಗೆ ಬರಲಿದ್ದಾರೆ. ಮೇ 7ರಂದು ಸಂಘದ ವತಿಯಿಂದ ಗುರುವಂದನೆ ಮತ್ತು ಪಾದಪೂಜೆ ನಡೆಯಲಿದೆ ಎಂದು ಪುತ್ತೂರು ಬಂಟರ ಸಂಘದ ಅಧ್ಯಕ್ಷರ ನೆಲೆಯಲ್ಲಿ ಗುರುವಂದನಾ ಸಮಿತಿ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.ಅವರು ಮಂಗಳವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೇ 6ಕ್ಕೆ ಪುತ್ತೂರಿಗೆ ಶ್ರೀಗಳು ಆಗಮಿಸಲಿದ್ದಾರೆ. ಅವರಿಗೆ ಭವ್ಯ ಸ್ವಾಗತ ನೀಡಲಾಗುವುದು. ಮೇ 7ರಂದು ಬಪ್ಪಳಿಗೆ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಇದರ ಸದುಪಯೋಗವನ್ನು ಬಂಟ ಸಮಾಜದವರು ಪಡೆಯಬೇಕು ಎಂದರು.
ಬಂಟ ಸಮಾಜದ ಅನೇಕ ತರವಾಡು ಅಥವಾ ಕುಟುಂಬದಲ್ಲಿ ಪ್ರಶ್ನಾ ಚಿಂತನೆ ವೇಳೆ ಮುಖ್ಯವಾಗಿ ಗುರು ಕೋಪ ಅಥವಾ ಗುರುಗಳ ಅಶೀರ್ವಾದ ಪಡೆಯುವ ವಿಚಾರ ಬರುತ್ತದೆ. ಈ ಸಂದರ್ಭ ಶೃಂಗೇರಿ ಕ್ಷೇತ್ರಕ್ಕೆ ಹೋಗಿ ಗುರುಗಳ ಆಶೀರ್ವಾದ ಪಡೆಯಬೇಕಾಗುತ್ತದೆ. ಬಂಟ ಸಮಾಜಕ್ಕೆ ಗುರುಪೀಠ ಇರುವುದು ಶೃಂಗೇರಿ ಗುರುಪೀಠ. ಪುತ್ತೂರಿಗೆ ಶ್ರೀ ಗುರುಗಳು ಆಗಮಿಸುವ ವೇಳೆ ಪುತ್ತೂರು ಬಂಟ ಸಂಘದಿಂದ ಗುರುವಂದನೆ ಮತ್ತು ಪಾದಪೂಜೆ ನಡೆಯಲಿದೆ. ಈ ಅವಕಾಶವನ್ನು ಬಂಟ ಸಮಾಜದವರು ಸದುಪಯೋಗ ಪಡಿಸಿಕೊಂಡು ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿನಂತಿಸುತ್ತೇವೆ ಎಂದರು.ಧರ್ಮಾಭ್ಯುದಯ ತಾಲೂಕು ಸಮಿತಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಶೆಟ್ಟಿ, ನಿರ್ದೇಶಕರಾದ ರವಿಪ್ರಸಾದ್ ಶೆಟ್ಟಿ, ಗಂಗಾಧರ ರೈ ಎಲಿಕ ಉಪಸ್ಥಿತರಿದ್ದರು.