ಪುತ್ತೂರು: ಭಾರತ ದೇಶ ಯಾವಾಗಲೂ ತಾರುಣ್ಯ ರಾಷ್ಟ್ರವಾಗಿರಬೇಕೆಂಬುದು ಸ್ವಾಮಿ ವಿವೇಕಾನಂದರ ಕನಸಾಗಿತ್ತು. ನಾವು ಇಡುವ ಹೆಜ್ಜೆ ಹೇಗಿರಬೇಕೆಂದರೆ ಹಿಂದೆ ತಿರುಗಿ ನೋಡಿದರೂ ಕಾಣುವಂತೆ, ಮರಳುಗಾಡಿನಲ್ಲಿ ನಡೆದರೂ ಹೆಜ್ಜೆ ಗುರುತು ಗೋಚರಿಸುವಂತಿರಬೇಕು ಎಂದು ಎಂದು ಕಾರ್ಕಳದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಹೇಳಿದರು.
ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಹಾಗೂ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಹಯೋಗದಲ್ಲಿ ನಡೆದ ೨೫ನೇ ಸಂಚಿಕೆಯ ವಿವೇಕ ಸ್ಮೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.ಪ್ರತಿಯೊಬ್ಬ ಭಾರತೀಯ ಪ್ರಜೆಯೂ ವಿದ್ಯಾವಂತನಾಗಬೇಕು. ವಿವೇಕಾನಂದರ ನೈತಿಕತೆಯನ್ನು ಬೆಳೆಸಿಕೊಂಡು ಉನ್ನತಮಟ್ಟದ ಗುರಿಯನ್ನು ಹೊಂದಿ ದೇಶವನ್ನೇ ಬೆಳಗುವಂತಾಗಬೇಕು.
ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರವಿನಾರಾಯಣ ಎಂ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ವಿಕಸಿತ ಹಾಗೂ ಆತ್ಮನಿರ್ಭರ ಭಾರತ ಎಂಬ ಎರಡು ಶಬ್ದಗಳನ್ನು ನಾವು ಪದೇ ಪದೇ ಕೇಳುತ್ತಿದ್ದೇವೆ. ವಿವೇಕಾನಂದರೇ ಇದಕ್ಕೆ ಪ್ರೇರಣೆ ಎಂದರೆ ತಪ್ಪಾಗಲಾರದು. ಸ್ವಾಮಿ ವಿವೇಕಾನಂದರು ಪರಕೀಯರ ಆಳ್ವಿಕೆಯಲ್ಲಿದ್ದಾಗಲೇ ಭಾರತೀಯರ ಇರುವಿಕೆಯನ್ನು ಇಡೀ ಪ್ರಪಂಚದೆದುರು ತೆರೆದಿಟ್ಟವರು. ನಾವು ಆಧ್ಯಾತ್ಮ ಭಾರತದ ಚಿಂತನೆಯನ್ನು ಪೂರಕವಾಗಿರಿಸಿಕೊಂಡು ಭವಿಷ್ಯದ ಹೆಜ್ಜೆಯನ್ನಿಟ್ಟರೆ ಭಾರತ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ. ಪ್ರತಿಯೊಬ್ಬರೂ ವಿಕಸಿತ ಭಾರತದ ಚಿಂತನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸೋಣ ಎಂದರು.ವೇದಿಕೆಯಲ್ಲಿ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ರಾಧಾಕೃಷ್ಣ ರೈ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಸ್ವಾಗತಿಸಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಕವಿತಾ ಕೆ ಜಿ ವಂದಿಸಿದರು. ಸ್ನಾತಕೋತ್ತರ ಎಂಕಾಂ ವಿಭಾಗದ ವಿದ್ಯಾರ್ಥಿ ನವೀನ್ ಕೃಷ್ಣ ನಿರೂಪಿಸಿದರು.