ಸಾರಾಂಶ
ಹಿರಿಯೂರು: ಪ್ರಶಿಕ್ಷಣಾರ್ಥಿಗಳಿಗೆ ಗುಣಮಟ್ಟದ ತರಬೇತಿಯ ಅವಶ್ಯಕತೆ ಇದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗದ ಡೀನ್ ಡಾ.ಕೆ.ವೆಂಕಟೇಶ್ ಹೇಳಿದರು.
ನಗರದ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ 2023-24ನೇ ಸಾಲಿನ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೇವಲ ಪದವಿಗಳಿಗೆ ಸಮರ್ಥ ಶಿಕ್ಷಕರಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತರಬೇತಿ ಅವಧಿಯಲ್ಲಿ ಗುಣಮಟ್ಟದ ತರಬೇತಿ ಪಡೆಯುವ ಅವಶ್ಯಕತೆ ಇದೆ. ಭವಿಷ್ಯದಲ್ಲಿ ವೃತ್ತಿ ನಿಭಾಯಿಸಲು ಬೇಕಾದ ಮನೋಭಾವ, ಬೋಧನಾ ಕೌಶಲ್ಯ ಸಾಮರ್ಥ್ಯಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ ಎಂದರು.
ಚಿಂತಕ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ, ಬುದ್ಧನ ಚಿಂತನೆಗಳು ಸಾರ್ವಕಾಲಿಕವಾದವುಗಳಾಗಿದ್ದು, ಬಸವಣ್ಣನವರು ಅರಿವಿನ ಮೂಲಕ ಸಮ ಸಮಾಜ ಕಟ್ಟುವ ಕೈಂಕರ್ಯಕ್ಕೆ ಬುನಾದಿ ಹಾಕಿದರು. ಭವಿಷ್ಯದ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ತರವಾಗಿದ್ದು ಬುದ್ಧ, ಬಸವ, ಅಂಬೇಡ್ಕರ್ ಸಮಗ್ರ ವಿಚಾರಗಳನ್ನು ಮುಂದಿನ ಪರಂಪರೆಗೆ ಕೊಂಡೊಯ್ಯುವಂತಹ ಕೆಲಸವನ್ನು ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದ ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ ಅವಿನಾಶ್, ಪ್ರಾಂಶುಪಾಲ ಎನ್.ಧನಂಜಯ, ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ವಿ.ಬಸವರಾಜ್, ಹಿರಿಯ ಉಪನ್ಯಾಸಕರಾದ ಎಂ,ಬಸವರಾಜ, ಸಂಸ್ಥೆಯ ನಿರ್ದೇಶಕ ಭೀಮಪ್ಪ, ವ್ಯವಸ್ಥಾಪಕ ಕೆ.ದೊರೇಶ್, ಪ್ಯಾರಾ ಮೆಡಿಕಲ್ ವಿಭಾಗದ ಮುಖ್ಯಸ್ಥ ಗಿರೀಶ್, ಉಪನ್ಯಾಸಕರಾದ ರವಿಕುಮಾರ್, ನಾಗೇಶ್, ಅರುಣ ಕುಮಾರಿ, ನಿಂಗರಾಜ್, ಮಾರುತೇಶ್, ನಾಗರತ್ನಮ್ಮ ಮುಂತಾದವರು ಉಪಸ್ಥಿತರಿದ್ದರು.