ಸಾರಾಂಶ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವರ್ತನೆ ದೇಶ ವಿರೋಧಿಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದೆ.
ಶಿರಸಿ: ದೇಶ, ರಾಷ್ಟ್ರ, ಜನವಿರೋಧಿ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದ್ದು, ನಾಗಮಂಗಲದಲ್ಲಿ ಮುಸ್ಲಿಮರು ಗಣೇಶನ ಮೆರವಣಿಗೆ ಮೇಲೆ ದಾಳಿ ನಡೆಸಿ, ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಶೀಘ್ರ ಪ್ರತಿ ಜಿಲ್ಲೆಯಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವರ್ತನೆ ದೇಶ ವಿರೋಧಿಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ರಾಹುಲ್ ಗಾಂಧಿ ದೇಶದ ಒಳಗೆ ಮತ್ತು ಹೊರಗಡೆ ಅಖಂಡತೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಒಳಗೆ ಮತೀಯವಾದಿ ವಿಭಜಕ, ನಕ್ಸಲ್ವಾದಿ ಧೋರಣೆ ಹಾಗೂ ವಿದೇಶದಲ್ಲಿ ಭಾರತದ ಕುರಿತಾಗಿ ನಕಾರಾತ್ಮಕ ಧೋರಣೆ ಬೆಳೆಯುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಮೆರಿಕ ಯುನಿವರ್ಸಿಟಿಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷ ಮೀಸಲಾತಿ ಸ್ಥಗಿತಗೊಳಿಸುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಈ ರೀತಿ ಹೇಳಿಕೆ ಇದೇ ಮೊದಲಲ್ಲ, ಬಹಳಷ್ಟು ಬಾರಿ ಹೇಳಿದೆ. ರಾಹುಲ್ ಗಾಂಧಿ ಹೇಳಿರುವ ಮೀಸಲಾತಿ ವಿರೋಧಿ ಹೇಳಿಕೆ ಖಂಡಿಸಿ, ರಾಷ್ಟ್ರವ್ಯಾಪಿ ಹೋರಾಟಕ್ಕೆ ಮುಂದಾಗಿದ್ದೇವೆ. ಭಾರತದ ಚುನಾವಣಾ ವ್ಯವಸ್ಥೆ ಸರಿಯಿಲ್ಲ ಎಂದು ವಿದೇಶಿ ನೆಲದಲ್ಲಿ ಹೇಳುತ್ತಾರೆ. ಇದರಿಂದ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದರು.ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮುಸ್ಲಿಂ ಮತಾಂಧರು ಗಣೇಶನ ಮೆರವಣಿಗೆ ಮೇಲೆ ದಾಳಿ ನಡೆಸಿ, ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್ ಆಳ್ವಿಕೆಯಿಂದ ಈ ರೀತಿ ಘಟನೆ ಮರುಕಳಿಸುತ್ತಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಮಂಡಳಾಧ್ಯಕ್ಷ ಆನಂದ ಸಾಲೇರ, ಎಸ್ಟಿ ಮೋರ್ಚಾ ಘಟಕದ ಅಧ್ಯಕ್ಷ ಶ್ರೀಕಾಂತ ಬಳ್ಳಾರಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಸಾಮಾಜಿಕ ಜಾಲತಾಣದ ಸಂಚಾಲಕ ರವಿಕುಮಾರ ಶೆಟ್ಟಿ ಇದ್ದರು.