ಕೊಪ್ಪಳ: ಬಲ್ಡೋಟ ತೊಲಗಿಸಿ, ಕೊಪ್ಪಳ ಉಳಿಸಿ ಎಂದು ಆಗ್ರಹಿಸಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ೧೦೨ನೇ ದಿನಗಳಾಗಿದ್ದು, ಬಳ್ಳಾರಿ ಹಿರಿಯ ವಕೀಲ ಕೆ. ಕೋಟೇಶ್ವರ ರಾವ್ ಬೆಂಬಲಿಸಿ, ಮಾತನಾಡಿದರು.
ಈ ಕಾರ್ಖಾನೆಗಳು ಯಾವುದೇ ಕಾನೂನು ನಿಯಮಾವಳಿ ಪಾಲಿಸುವುದಿಲ್ಲ. ಪರಿಸರ ಮಾಲಿನ್ಯ, ಹಳ್ಳಿಯ ಕೃಷಿ ನಾಶದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಲಾಭಕ್ಕಾಗಿ ಏನನ್ನಾದರೂ ಮಾಡಲು ಅವರು ಸಿದ್ಧ. ಸರ್ಕಾರದ ಸಡಿಲಿಕೆಯಿಂದಲೇ ಇಷ್ಟೊಂದು ಸಂಖ್ಯೆಯಲ್ಲಿ ಮಾಲಿನ್ಯ ಮಾಡುವ ಕಾರ್ಖಾನೆಗಳು ಕೇಂದ್ರೀಕೃತವಾಗಿವೆ. ಅವರು ಬೇಕಾದರೆ ನೀವೆ ಇಲ್ಲಿಂದ ಎದ್ದು ಹೋಗಿ ಎನ್ನುವಂತಿದೆ. ಈ ಕಾರ್ಖಾನೆಗಳು ಲೆಕ್ಕಕ್ಕೆ ಸಿಗದಷ್ಟು ಪ್ರಮಾಣದಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿ ನೀರು ಬಳಸಿಕೊಳ್ಳುತ್ತಿರುವ ಕಾರಣಕ್ಕೆ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ಜನರ ಲಕ್ಷಗಟ್ಟಲೆ ಎಕರೆಯಲ್ಲಿ ಭತ್ತದ ಒಂದೇ ಬೆಳೆ ಬೆಳೆಯುವಂತಾಗಿದೆ. ಭವಿಷ್ಯದ ಕೃಷಿ ಅಪಾಯಕ್ಕೆ ಸಿಲುಕುತ್ತದೆ. ಇಲ್ಲಿ ಬೃಹತ್ ಗಾತ್ರದ ಬಂಡವಾಳ ಹೂಡಿ, ನಗರಕ್ಕೆ ಹೊಂದಿಕೊಂಡು ಬಲ್ಡೋಟ ವಿಸ್ತರಣೆ ಆದರೆ ನಗರದ ಜನರು ರೋಗಬಾಧೆಗೆ ಒಳಗಾಗುತ್ತಾರೆ. ಇದರ ಮಾಲಿನ್ಯ ನಾವು ಸೇವಿಸುವ ನೀರಿನಲ್ಲಿ, ಗಾಳಿಯಲ್ಲಿ, ಭೂಮಿಯಲ್ಲಿ, ಅಂತರ್ಜಲಕ್ಕೆ ಸೇರಿಸುವುದರಿಂದ ಪುನಶ್ಚೇತನ ಮಾಡಲು ಸಾಧ್ಯವಿಲ್ಲದಷ್ಟು ಹಾನಿ ಮಾಡಿವೆ. ಈ ಹೋರಾಟವನ್ನು ಬಳ್ಳಾರಿ ಜಿಲ್ಲೆಯಿಂದಲೂ ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದರು.ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ರಂಗಕರ್ಮಿ ಶರಣು ಶೆಟ್ಟರ್, ಕೃಷಿ ಬೆಳೆ ಬಾಧಿತ ಲಾಚನಕೇರಿ ರೈತ ನಾಗರಾಜ ಕೆ., ಕ.ರಾ.ನಿ. ನೌಕರರ ಸಂಘ ಕೊಪ್ಪಳ ಜಿಲ್ಲಾಧ್ಯಕ್ಷ ಸಿ.ವಿ. ಜಡಿಯವರ, ರಾಜಶೇಖರ ಏಳುಬಾವಿ, ಶಂಭುಲಿಂಗಪ್ಪ ಹರಗೇರಿ, ರೈತ ಯಲ್ಲಪ್ಪ ಸಿದ್ದರ್, ಮಲ್ಲಿಕಾರ್ಜುನ ನಿಂಗೋಜಿ, ಆಪ್ ಪಕ್ಷದ ಲೋಹಿತ್ ಕುಮಾರ, ರಾಮ್ ಶೆಟ್ಟಿ, ಎಂ.ಡಿ. ಅಮನ್ ಗಾಜಿ, ನಿವೃತ್ತ ಪ್ರಾಚಾರ್ಯರಾದ ಎಸ್.ಬಿ. ರಾಜೂರು, ಬಿ.ಜಿ. ಕರಿಗಾರ, ಮೂಕಪ್ಪ ಮೇಸ್ತಿ ಬಸಾಪುರ, ನಿವೃತ್ತ ಉಪನ್ಯಾಸಕ ಡಾ. ಬಸವರಾಜ ಪೂಜಾರ, ಬಸವರಾಜ ನರೇಗಲ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಾರುತಿ ಬೊಮ್ಮನಾಳ, ಎಸ್. ಮಹಾದೇವಪ್ಪ ಮಾವಿನಮಾಡು, ಗವಿಸಿದ್ದಪ್ಪ ಮಾ.ಪಾ., ಸದಾಶಿವ ಪಾಟೀಲ್, ಪಂಪಣ್ಣ ಚಿಂತಪಲ್ಲಿ, ಶಿವಪ್ಪ ಜಲ್ಲಿ, ನಿವೃತ್ತ ಕಾರ್ಮಿಕ ಅಧಿಕಾರಿ ಶಾಂತಯ್ಯ ಅಂಗಡಿ, ಗಂಗಾಧರ ಖಾನಾಪುರ, ಬಸವರಾಜಪ್ಪ ಶೆಟ್ಟರ್, ಮಖ್ಬುಲ್ ರಾಯಚೂರು, ಶಿಕ್ಷಕ ಶಿವಪ್ಪ ನಿ., ರತ್ನಮ್ಮ ದೊಡ್ಡಮನಿ ಪಾಲ್ಗೊಂಡಿದ್ದರು.