ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಶ್ರೇಷ್ಠ ಶಿಕ್ಷಕರು, ತತ್ವಜ್ಞಾನಿಯಾಗಿದ್ದರು. ಅವರ ವೃತ್ತಿ ಧರ್ಮ, ಶಿಸ್ತು, ಬದ್ಧತೆ ಹಾಗೂ ಅಗಾಧವಾದ ಜ್ಞಾನ, ಕಾರ್ಯಕ್ಷಮತೆ, ಸಮಯ ಪ್ರಜ್ಞೆ ಇಂದಿನ ಶಿಕ್ಷಕರಿಗೆ ಅನುಕರಣೀಯ.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯ
ಕನ್ನಡಪ್ರಭ ವಾರ್ತೆ ಗಜೇಂದ್ರಗಡಡಾ. ಸರ್ವಪಲ್ಲಿ ರಾಧಾಕೃಷ್ಣನ್ ಶ್ರೇಷ್ಠ ಶಿಕ್ಷಕರು, ತತ್ವಜ್ಞಾನಿಯಾಗಿದ್ದರು. ಅವರ ವೃತ್ತಿ ಧರ್ಮ, ಶಿಸ್ತು, ಬದ್ಧತೆ ಹಾಗೂ ಅಗಾಧವಾದ ಜ್ಞಾನ, ಕಾರ್ಯಕ್ಷಮತೆ, ಸಮಯ ಪ್ರಜ್ಞೆ ಇಂದಿನ ಶಿಕ್ಷಕರಿಗೆ ಅನುಕರಣೀಯ ಎಂದು ಪ್ರಾಚಾರ್ಯ ಜಿ.ಬಿ. ಗುಡಿಮನಿ ಹೇಳಿದರು.
ಇಲ್ಲಿನ ಎಸ್.ಎಂ. ಭೂಮರಡ್ಡಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಸರಿತಪ್ಪುಗಳ ಜಾಗೃತಿ ಮೂಡಿಸುವ ಜವಾಬ್ದಾರಿ ಶಿಕ್ಷಕರಿಗೆ ಸಮಾಜವು ನೀಡಿದೆ. ಹೀಗಾಗಿ ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ಇರುವ ತರಗತಿಗಳಲ್ಲಿ ಅಡಗಿದ್ದು, ಶಿಕ್ಷಕ ರಾಷ್ಟ್ರ ಕಟ್ಟುವ ಶಿಲ್ಪಿ ಎಂದರು.
ಹಿರಿಯ ಉಪನ್ಯಾಸಕ ಅರವಿಂದ ವಡ್ಡರ ಮಾತನಾಡಿ, ಶಿಕ್ಷಕರ ದಿನಾಚರಣೆ ಕೇವಲ ಒಂದು ಆಚರಣೆಯಲ್ಲ. ವಿದ್ಯಾರ್ಥಿ ಹಾಗೂ ಶಿಕ್ಷಕರ ಮದ್ಯದ ಅನುಸಂಧಾನ. ವಿದ್ಯಾರ್ಥಿಗಳು ಕೇವಲ ಅಕ್ಷರಸ್ತರಾದರೆ ಸಾಲದು ಸಂಸ್ಕಾರವಂತರೂ ಆಗಬೇಕು. ಪ್ರಸ್ತುತ ನಾಡಿನಲ್ಲಿ ವಿದ್ಯಾವಂತರು, ಬುದ್ಧಿವಂತರು ಇದ್ದಾರೆ. ಆದರೆ ಪ್ರಜ್ಞಾವಂತ ನಾಗರಿಕರ ಅಗತ್ಯವಿದ್ದು, ಅಂತಹ ಪ್ರಜ್ಞಾವಂತ ನಾಗರಿಕರನ್ನು ಸಜ್ಜುಗೊಳಿಸುವ ಜವಾಬ್ಧಾರಿಯನ್ನು ಶಿಕ್ಷಕರು ವಹಿಸಿಕೊಳ್ಳಬೇಕಾಗಿದೆ ಎಂದರು.ಇದಕ್ಕೂ ಮುನ್ನ ಪ್ರಾಂಶುಪಾಲರು ಎಲ್ಲಾ ಶಿಕ್ಷರಿಗೆ ಅವರ ಕರ್ತವ್ಯಪ್ರಜ್ಞೆ, ಸಮಯಪ್ರಜ್ಞೆ ವಿದ್ಯಾರ್ಥಿಗಳಿಗೆ ಮಾದರಿಯಾಗಿರುವ ಶಿಸ್ತನ್ನು ಕುರಿತು ಪ್ರತಿಜ್ಞಾ ವಿಧಿ ಭೋದಿಸಿದರು.
ಈ ಸಂದರ್ಭ ಎಸ್.ಎಸ್. ವಾಲಿಕಾರ, ಜ್ಯೋತಿ ಗದಗ, ವೈ.ಆರ್. ಸಕ್ರೋಜಿ, ವಿ.ಎಂ. ಜೂಚನಿ, ಎಲ್.ಕೆ. ಹಿರೇಮಠ, ಎಂ.ಎಲ್. ಕ್ವಾಟಿ, ಆನಂದ ಜೂಚನಿ, ಸಂಗಮೇಶ ಹುನಗುಂದ, ಪ್ರೇಮಾ ಚುಂಚಾ, ರವಿ ಹಲಗಿ, ವೀರೇಶ ಯಲಿಗಾರ, ಬಸವರಾಜ ಸವಣೂರ, ನಬಿಸಾಬ್ ನದಾಫ್, ಎಂ.ಎಸ್. ನಾಗರಾಳ, ಸಹನಾ ಪತ್ತಾರ, ಶ್ರೀಕಾಂತ ಪೂಜಾರ, ಸುನೀಲ್ ಬಂಡಿವಡ್ಡರ, ಗೀತಮ್ಮ ಬದಿ, ರುದ್ರಪ್ಪ ಸೇರಿ ಇತರರು ಇದ್ದರು.