ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬೇಲೂರು-ಚಿಕ್ಕಮಗಳೂರು ರೈಲು ಮಾರ್ಗದ ಕೆಲಸ ಶೀಘ್ರವಾಗಿ ಮಾಡುತ್ತೇವೆ. ಹಾಸನ-ಬೇಲೂರು ನಡುವೆ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಿ ಇನ್ನು ಎರಡೂವರೆ ಮೂರು ವರ್ಷಗಳಲ್ಲಿ ಈ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದರು .ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರೈಲ್ವೆ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ರೈಲ್ವೆ ಇಲಾಖೆಯಲ್ಲಿ ಹೊಸ ಕ್ರಾಂತಿ ಆಗುತ್ತಿದೆ. ಸುಮಾರು 39 ಸಾವಿರ ಕೋಟಿ ರುಪಾಯಿಗಳ ಹಳೆ ಯೋಜನೆ ಜೊತೆಗೆ ಹಿಂದೆ ಯುಪಿಎ ಸರ್ಕಾರ ಇದ್ದಾಗ 850ರಿಂದ 900 ಕೋಟಿ ರು. ಅನುದಾನ ಬರುತಿತ್ತು. ಈಗ ಆರರಿಂದ ಏಳು ಸಾವಿರ ಕೋಟಿ ಅನುದಾನ ಬರುತ್ತಿದೆ. ರಾಜ್ಯ ಕೇಂದ್ರ ಸಹಭಾಗಿತ್ವದ ಯೋಜನೆಗೆ ಸಿದ್ದರಾಮಯ್ಯ ಅವರಿಂದ ಒಳ್ಳೆ ಸಹಕಾರ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೈತಿಕತೆ ಇದೆಯಾ?ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಲಂಚ ಆರೋಪ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರ ಕೇಳಲು ನನಗೆ ಹೇಸಿಗೆ ಆಗುತ್ತದೆ. ಅವರ ಪಕ್ಷದ ಶಾಸಕರೇ ಹೀಗೆ ಹೇಳಿದರೆ ಸರ್ಕಾರಕ್ಕೆ ನೈತಿಕತೆ ಇದೆಯಾ? ನೀವೇ ಯೋಚನೆ ಮಾಡಿ. ಇವರಿಗೆ ನೈತಿಕತೆ ಇದ್ದರೆ ಹೀಗೆ ಆಗುತ್ತಿತ್ತಾ! ನಾನು ವಸತಿ ಸಚಿವರ ಜಮೀರ್ಗೆ ಒಂದು ಮಾತು ಹೇಳ್ತೇನೆ, ಸುತ್ತೋದು ಕಡಿಮೆ ಮಾಡಿ, ಕಚೇರಿಯಲ್ಲಿ ಕೂತು ಸಮಸ್ಯೆ ಆಲಿಸಿ. ಬಡವರ ಇಲಾಖೆ ಇದು. ನಾವು ಎಷ್ಟು ಲಕ್ಷ ಮನೆ ಕಟ್ಟಿದ್ದೇವೆ, ಏನೆಲ್ಲಾ ಮಾಡಿದ್ದೇವೆ. ಅವರಿಗೆ ಅಲ್ಪಸ್ವಲ್ಪ ಗೌರವ ಇದ್ದರೆ ಅವರ ಶಾಸಕರೇ ಹೀಗೆ ಹೇಳಿದಾಗ ನಿಮ್ಮ ನೈತಿಕತೆ ಏನು ಎಂದು ಸಿದ್ದರಾಮಯ್ಯ ಅವರು ಸ್ವಲ್ಪ ಚಿಂತನೆ ಮಾಡಿದರೆ ಅವರಿಗೂ ಗೌರವ ಎಂದು ಸಲಹೆ ನೀಡಿದರು. ಬಿ ಆರ್ ಪಾಟೀಲ್ಗೆ ನಾನು ಅಭಿನಂದನೆ ಹೇಳುತ್ತೇನೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬಡವರ ಹೆಸರೇಳಿ ಏನಾದ್ರು ಮಾಡಿದ್ರೆ ಅವರನ್ನು ಭಗವಂತ ಕ್ಷಮಿಸಲ್ಲ ಎಂದು ಎಚ್ಚರಿಸಿದರು.ಬಿಜೆಪಿಯಲ್ಲಿ ಬಂಡಾಯ ವಿಚಾರ:ಮಾಜಿ ಸಂಸದ ಜಿ ಎಂ ಸಿದ್ದೇಶ್ವರ ಮನೆಯಲ್ಲಿ ಭಿನ್ನಮತರ ಸಭೆ ನಡೆದಿದೆ ಎನ್ನುವುದನ್ನು ಅಲ್ಲಗಳೆದ ಸೋಮಣ್ಣ, ಅವರು ನಾಲ್ಕು ಬಾರಿ ಅವರ ತಂದೆ ಮೂರು ಬಾರಿ ಎಂಪಿಯಾಗಿದ್ದರೂ ಅವರ ಮಗನ ಮದುವೆಗೆ ನಾನು ಹೋಗಲು ಆಗಿರಲಿಲ್ಲ. ಹಾಗಾಗಿ ಅವರ ಮನೆಗೆ ಹೋದರೆ ಅದು ಹೇಗೆ ಭಿನ್ನಮತ. ನನಗೆ ಪಕ್ಷ ಎಂದರೆ ತಾಯಿ ಇದ್ದ ಹಾಗೆ. ಸಿದ್ದೇಶ್ವರ ಅವರು ಭಿನ್ನಮತದ ವ್ಯವಸ್ಥೆಯಲ್ಲಿ ಇರುವವರಲ್ಲ. ನಾನು ಬೇರೆಯವರಂತೆ ಕದ್ದು ಓಡುವವನಲ್ಲ. ಯಾರಾದ್ರು ದೊಡ್ಡ ಮನುಷ್ಯರು ಹಾಗೆ ಹೇಳಿದ್ರೆ ನಾನೇ ಅವರ ಬಳಿ ಮಾತಾಡುತ್ತೇನೆ.ಅವರ ಮನೆಗೆ ಹೋದರೆ ಭಿನ್ನಮತ ಎಂದು ಬಿಂಬಿಸೋದು ಸರಿಯಲ್ಲ. ನಮ್ಮ ನಾಯಕರ ಮನೆಯ ಶುಭ ಕಾರ್ಯಕ್ಕೆ ಹೋಗಬಾರದ ಎಂದು ಪ್ರಶ್ನಿಸಿದರು. ಬಿಜೆಪಿ ರಾಜ್ಯ ಅಧ್ಯಕ್ಷ ರ ಆಯ್ಕೆ ವಿಚಾರವಾಗಿ ಮಾತನಾಡಿ, ಇದು ಕೇಂದ್ರದ ವರಿಷ್ಠರಿಗೆ ಬಿಟ್ಟ ವಿಚಾರ. ಈ ಸರ್ಕಾರ ಒಂದಲ್ಲ ಒಂದು ಹಗರಣ ಮಾಡಿ ಎರಡು ವರ್ಷ ಕಳೆದೇ ಬಿಟ್ಟಿದೆ. ಅಲ್ಪಸಂಖ್ಯಾತರಿಗೆ ಹೆಚ್ಚಿನ ಮೀಸಲಾತಿ ಕೊಡಿ ಅಂತಾ ಇವರನ್ನು ಯಾರಾದ್ರು ಕೇಳಿದ್ದರಾ. ಇವರು ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡಿದ್ದಾರೆ. ಇವರ ಜಾತಿ ಗಣತಿ ಏನಾಯ್ತು ? ಕ್ಯಾಬಿನೆಟ್ ತೀರ್ಮಾನವನ್ನು ಇವರ ಹೈಕಮಾಂಡ್ ರದ್ದು ಮಾಡುತ್ತದೆ. ಈ ಸರ್ಕಾರ ಕಣ್ಣಾಮುಚ್ಚೆ ಆಟ ಆಡ್ತಾ ಜನರ ದಾರಿ ತಪ್ಪಿಸುತ್ತಿದೆ. ಅಭಿವೃದ್ಧಿ ಮಾಡಲು ಹಣ ಇಲ್ಲ ಇಷ್ಟೊಂದು ಮಳೆ ಆದರು ನೆರವು ಸಿಕ್ತಾ ಇಲ್ಲ. ಇದು ಸರ್ಕಾರಕ್ಕೆ ಗೌರವ ತರಲ್ಲ ಎಂದು ಕಿಡಿಕಾರಿದರು.
ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಸಿಮೆಂಟ್ ಮಂಜು, ಎಚ್.ಕೆ. ಸುರೇಶ್, ಬಿಜೆಪಿ ಪಕ್ಷದ ಮುಖಂಡರಾದ ಎಚ್.ಕೆ. ನಾಗೇಶ್, ಯೋಗೇಶ್, ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಇತರರು ಉಪಸ್ಥಿತರಿದ್ದರು.