ಕನ್ನಡಪ್ರಭ ವಾರ್ತೆ ಶಿರಾ ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ ಕಾಮಗಾರಿ ಶಿರಾ ತಾಲೂಕಿನ ಲಕ್ಷ್ಮಿಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ವಾರಾಳ ಗೊಲ್ಲರಹಟ್ಟಿಯ ಹತ್ತಿರ ನಡೆಯುತ್ತಿದ್ದು, ಕಾಡುಗೊಲ್ಲ ಸಮುದಾಯದ ೧೧ ಮನೆಗಳು ಹಾಗೂ ೧ ದೇವಸ್ಥಾನಕ್ಕೆ ಪರಿಹಾರ ನೀಡದೆ, ತೆರವು ಮಾಡಲು ಮುಂದಾದ ಭೂ ಸ್ವಾದೀನ ಅಧಿಕಾರಿಗಳ ವಿರುದ್ಧ ರೈತರು , ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಗೊಲ್ಲರಹಟ್ಟಿಯ ಕಾಡುಗೊಲ್ಲರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿ ಮಾತನಾಡಿದ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಶಿರಾ ತಾಲೂಕಿನ ದ್ವಾರಾಳ ಗೊಲ್ಲರಹಟ್ಟಿಯ ಮಾರ್ಗವಾಗಿ ತುಮಕೂರು -ದಾವಣಗೆರೆ ರೈಲ್ವೆ ಮಾರ್ಗದ ಕಾಮಗಾರಿ ನಡೆಯುತ್ತಿದೆ. ದ್ವಾರಳ ಗೊಲ್ಲರ ಹಟ್ಟಿಯ ಹಲವಾರು ಜನರಿಗೆ ೨೦೧೯ ರಲ್ಲಿ ನೋಟಿಸ್ ನೀಡಲಾಗಿದ್ದು,ರೈಲ್ವೆ ಕಾಮಗಾರಿಗೆ ನಿಮ್ಮ ಮನೆಗಳು ಬಿಟ್ಟುಕೊಡಬೇಕು ಇದಕ್ಕೆ ಸೂಕ್ತ ಪರಿಹಾರ ಹಾಗೂ ಪುನರ್ ವಸತಿ ಕಲ್ಪಿಸುವುದಾಗಿ ನೋಟಿಸ್‌ ನಲ್ಲಿ ಸೂಚಿಸಲಾಗಿದೆ. ಆದರೆ ರೈಲ್ವೆ ಭೂ ಸ್ವಾಧೀನ ಅಧಿಕಾರಿಗಳು ದ್ವಾರಳ ಗೊಲ್ಲರ ಹಟ್ಟಿಯ ಕಾಡುಗೊಲ್ಲ ಸಮುದಾಯದ ೧೧ ಮನೆಗಳನ್ನು ಜೆಸಿಬಿ ಬಳಸಿ ತೆರವು ಮಾಡಲು ಮುಂದಾಗಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು ಸೂಕ್ತ ಪರಿಹಾರ ನೀಡದೆ ಕಾಡುಗೊಲ್ಲರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ.

ಶತಮಾನಗಳಿಂದ ಇವರು ಸೂರು ಕಟ್ಟಿಕೊಂಡು ನೆಲೆ ಕೊಂಡಿದ್ದಾರೆ. ರೈಲ್ವೆ ಯೋಜನೆಗೆ ಬಿಡುವುದಿಲ್ಲ ಎಂದು ಹೇಳುತ್ತಿಲ್ಲ, ಬದಲಿಗೆ ಸೂಕ್ತ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಿಕೊಡಿ ಎಂದು ಒತ್ತಾಯಿಸಿದ ಅವರು ಜಿಲ್ಲಾಡಳಿತ ತಕ್ಷಣ ಇತ್ತ ಗಮನಹರಿಸಿ ಮನೆಗಳನ್ನು ಕಳೆದುಕೊಳ್ಳುತ್ತಿರುವ ಕಾಡುಗೊಲ್ಲರಿಗೆ ಸೂಕ್ತ ಪರಿಹಾರ ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ಪರಿಹಾರ ನೀಡದೆ ದೌರ್ಜನ್ಯವೆಸಗಿದರೆ ರೈತ ಸಂಘ ನ್ಯಾಯಕ್ಕಾಗಿ ಪ್ರತಿಭಟನೆ ಮಾಡಲಿದೆ ಎಂದರು.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್. ಸಿ. ಮಂಜುನಾಥ್ ಮಾತನಾಡಿ ಭೂ ಸ್ವಾದಿನ ಅಧಿಕಾರಿಗಳು ಕಾಡುಗೊಲ್ಲ ಕುಟುಂಬಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ. ತಾತ ಮುತ್ತಾತನ ಕಾಲದಿಂದ ಮನೆ ಕಟ್ಟಿಕೊಂಡು ಇಲ್ಲಿಯೇ ವಾಸ ಮಾಡುತ್ತಿರುವ ಕುಟುಂಬಗಳಿಗೆ ನಿಮ್ಮ ಭೂಮಿ ಪಡ ಬಿದ್ದಿದೆ, ಪರಿಹಾರ ಸಿಗುವುದಿಲ್ಲ ಎಂದು ಹೇಳುತ್ತಿರುವುದು ಬಡ ಕುಟುಂಬಗಳ ಮೇಲಿನ ದೌರ್ಜನ್ಯವಾಗಿದೆ. ಈ ಬಗ್ಗೆ ರೈಲ್ವೆ ಸಚಿವರಾದ ವಿ. ಸೋಮಣ್ಣ ಹಾಗೂ ಶಿರಾ ಕ್ಷೇತ್ರದ ಶಾಸಕರಾದ ಟಿ.ಬಿ. ಜಯಚಂದ್ರರವರು ಮಧ್ಯ ಪ್ರವೇಶ ಮಾಡಿ ಈ ಕಾಡುಗೊಲ್ಲ ಕುಟುಂಬದ ಮನೆಗಳಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದರು.ಈ ಸಂದರ್ಭದಲ್ಲಿ ಮುಖಂಡ ಸಣ್ಣೀರಪ್ಪ ಲಕ್ಷ್ಮಿ ಸಾಗರ ಗ್ರಾಮ ಪಂಚಾಯತಿ ಮಾಜಿ ಸದಸ್ಯ ವಿವೇಕಾನಂದ ರೈತ ಸಂಘದ ಮುಕುಂದಪ್ಪ, ಮುಖಂಡರಾದ ದೇವರಾಜು, ರಾಮಣ್ಣ, ಮೋಹನ್, ಶಿವಲಿಂಗಣ್ಣ, ಅಟ್ಟಮ್ಮ, ಜುಂಜುಮ್ಮ, ಚಿತ್ತಮ್ಮ, ಸುಶೀಲಮ್ಮ, ರುದ್ರೇಶ್ ಸೇರಿದಂತೆ ಹಲವರು ಇದ್ದರು.