ಸಾರಾಂಶ
ಮಳೆಯಿಂದ ಹಾನಿಗೊಳಗಾದ ಯಾದಗಿರಿ ನಗರದ ವಿವಿಧ ವಾರ್ಡ್ ಗಳಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಭೇಟಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಗುರುವಾರ ಸಂಜೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು, ಈ ಹಿನ್ನೆಲೆ ಹಾನಿಗೊಳಗಾದ ನಗರದ ವಿವಿಧ ವಾರ್ಡ್ ಗಳಿಗೆ ಶುಕ್ರವಾರ ಬೆಳಗ್ಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಭೇಟಿ ನೀಡಿ, ಪರಿಶೀಲಿಸಿದರು.ಇಲ್ಲಿನ ಲಕ್ಷ್ಮಿ ನಗರ, ಬಸವೇಶ್ವರ ನಗರ, ಹೊಸಳ್ಳಿ ಕ್ರಾಸ್, ಫಿಲ್ಟರ್ ಬೆಡ್ ಏರಿಯಾ, ಅಜೀಜ್ ಕಾಲೊನಿ, ಗಂಜ್ ಏರಿಯಾ, ಶಶಿಧರ ಕಾಲೊನಿ, ಹೊಸ ಬಸ್ನಿಲ್ದಾಣ ಪ್ರದೇಶಗಳಿಗೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡಿಸಿದರು.
ಈ ವೇಳೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತ್ವರಿತವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಹಾನಿಗೊಳಗಾದ ರಸ್ತೆ, ಚರಂಡಿ, ವಿದ್ಯತ್ ಕಂಬ, ನಲ್ಲಿ ಸಂಪರ್ಕಗಳನ್ನು ಸರಿಪಡಿಸಿ ಜನತೆಗೆ ಅನುಕೂಲ ಮಾಡಿಕೊಡಲು ತಿಳಿಸಿದ್ದಾರೆ.ಹಾನಿಗೊಳಗಾದ ಪ್ರದೇಶಗಳಲ್ಲಿ ನಗರಸಭೆ ಹಾಗೂ ಜೆಸ್ಕಾಂ ಸಿಬ್ಬಂಧಿಗಳು ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರಿಂದ ಕುಂದು ಕೊರತೆಗಳು ಬಂದಲ್ಲಿ ತಕ್ಷಣ ನಿವಾರಿಸಲು ಅಧಿಕಾರಿಗಳು ಮುಂದಾಗಲು ತಿಳಿಸಿದ ಅವರು ಮುಂಬರುವ ಮಳೆ ಹಾನಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ವೇಳೆ ನಗರಸಭೆ ಸದಸ್ಯರಾದ ಗಣೇಶ ದುಪ್ಪಲ್ಲಿ, ಚನ್ನಕೇಶವಗೌಡ, ಶರಣಗೌಡ ಮಾಲಿ ಪಾಟೀಲ್, ಆರ್ಎಫ್ ಲಕ್ಷ್ಮಿಕಾಂತ, ಜೆಇ ಚಂದ್ರಕಾಂತ, ಎಇಇ ರಜನೀಕಾಂತ, ಅಂಬರೀಶ ಜಾಕಾ, ಪ್ರಭಾಕರ್ ಇತರರಿದ್ದರು.