ಭದ್ರಾ ನದಿಯಲ್ಲಿ ದಿನವೂ ನೀರಿನ ಏರಿಳಿತ
ಕನ್ನಡಪ್ರಭ ವಾರ್ತೆ ಕಳಸಕಳಸದಲ್ಲಿ ಮುಂಜಾನೆಯಿಂದಲೇ ಸಣ್ಣ ಮಳೆಯಾಗುತ್ತಿದ್ದರೂ ರೈತರು ಮಾತ್ರ ಇನ್ನೂ ಗೊಂದಲದಲ್ಲಿದ್ದಾರೆ.
ಈ ವೇಳೆ ಗಾಗಲೇ ಭತ್ತ ಕೃಷಿ ಕಾರ್ಯ ನಡೆಯಬೇಕಿತ್ತು. ಮಳೆಯ ಅನಿಶ್ಚಿತತೆ ಕಾರಣ ಅಗೆ ಹಾಕುವ ಕಾರ್ಯವೇ ಸರಿಯಾಗಿ ಪೂರ್ಣಗೊಳಿಸಲಾಗಿಲ್ಲ. ಭದ್ರಾ ನದಿ ಕಳೆದ 2 ದಿನಗಳ ಹಿಂದೆ ಬರದ ನಾಡಿನ ಪರಿಸ್ಥಿತಿ ಹೇಳುವಂತೆ, ಬರಿದಾಗಿ ಹರಿಯುತ್ತಿದ್ದು, 2 ದಿನದ ಸಣ್ಣ ಮಳೆಯಿಂದ ತುಂಬಿ ಹರಿಯಲು ಪ್ರಾರಂಭಿಸಿದೆ. ವಾಡಿಕೆ ಮಳೆಯಾಗದೆ ಈ ಬಾರಿ ಮುಂಗಾರು ಹಂಗಾಮಿನ ಭತ್ತದ ಬೆಳೆ ಬಹುತೇಕ ಕೈ ತಪ್ಪಿದಂತಾಗಿದೆ. ಈಗ ಉಳಿದಿರುವ ಭರವಸೆ ಆಶ್ಲೇಷಾ ಮಳೆ ಮಾತ್ರ.ಭದ್ರಾ ನದಿಯೇ ಆಸರೆಯಾಗಿರುವ ಭದ್ರಾ ಜಲಾಶಯದ ನೀರಿನ ಮಟ್ಟ 150 ಅಡಿ ದಾಟಿದ್ದು, ಈ ವರ್ಷ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಆತಂಕವಿಲ್ಲದಾಗಿದೆ. ಉತ್ತಮ ಮಳೆಯಾದರೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು, ಬೇಸಿಗೆ ಹಂಗಾಮಿನ ಭತ್ತ ಹಾಗೂ ತೋಟಗಾರಿಕೆ ಬೆಳೆಗಳಿಗೆ ನೀರು ಪೂರೈಸುವ ಅವಕಾಶ ಸಿಗಲಿದೆ ಎಂದು ರೈತರು ಕಾಯುತ್ತಿದ್ದಾರೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಭದ್ರಾ ಜಲಾಶಯದ ನೀರಿನ ಮಟ್ಟ 180 ಅಡಿಗೆ ತಲುಪಿದ್ದು, ಸುಮಾರು 9,198 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಆದರೆ ಈ ಬಾರಿ ಎಲ್ನೋ ಪರಿಣಾಮದಿಂದ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ನೀರು ಹರಿದು ಬಂದಿಲ್ಲ. ಸುಮಾರು 15 ದಿನಗಳ ಹಿಂದೆ ಕೆಲ ಭಾಗಗಳಲ್ಲಿ ಸುರಿದ ಮಳೆಯಿಂದ ಜು. 8ರಂದು 17,818 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಇದೇ ಈ ಮುಂಗಾರಿನ ಗರಿಷ್ಠ ಒಳಹರಿವು.
ಉತ್ತಮ ಮಳೆಯಧರೆ ಭದ್ರಾ ಜಲಾಶಯಕ್ಕೆ ಒಂದು ಲಕ್ಷ ಕ್ಯೂಸೆಕ್ವರೆಗೆ ಒಳಹರಿವು ದಾಖಲಾದ ಉದಾಹರಣೆಗಳಿವೆ. ಆದರೆ ಈ ಬಾರಿ 40 ಸಾವಿರ ಕ್ಯೂಸೆಕ್ ಗೂ ತಲುಪಿಲ್ಲ. ಕಳಸ ಭಾಗದ ಬಹುತೇಕ ರೈತರು ಗದ್ದೆ ಹದ ಮಾಡಿಲ್ಲ. ಕೆಲವರು ಸಸಿ ಮಡಿ ತಯಾರಿಕೆಯಲ್ಲಿದ್ದರೂ ಮಳೆಯ ಅನಿಶ್ಚಿತತೆ ಎಲ್ಲರನ್ನೂ ಕಂಗಾಲಾಗಿಸಿದೆ. ಈ ವರ್ಷ ಬೆಳೆ ಬೆಳೆಯದೆ ಹೋದರೆ, ಬರುವ ವರ್ಷಕ್ಕೆ ಏನು ಎಂಬ ಆತಂಕ ಕಾಡಿದೆ.ಕಲ್ಮಕ್ಕಿಯಲ್ಲಿ ಸಾಕಷ್ಟು ಜನ ಗದ್ದೆ ಮಾಡುವುದಿಲ್ಲ ಎಂದೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.