ಭಾರತದಲ್ಲಿ ಮಳೆ ನೀರು ಸಂಗ್ರಹಣೆ ನಿರ್ಣಾಯಕ ಹಂತ ತಲುಪಿದ್ದು, ಪ್ರಾಚೀನ ಸಂಪ್ರದಾಯದಂತೆ ನಿರ್ಮಿಸಿರುವ ಕೆರೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಿ ಅಂತರ್ಜಲ ಸಂಗ್ರಹಿಸಲು ಮುಂದಾಗಬೇಕಾಗಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್ವರಿ ಪುರಾಣಿಕ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಭಾರತದಲ್ಲಿ ಮಳೆ ನೀರು ಸಂಗ್ರಹಣೆ ನಿರ್ಣಾಯಕ ಹಂತ ತಲುಪಿದ್ದು, ಪ್ರಾಚೀನ ಸಂಪ್ರದಾಯದಂತೆ ನಿರ್ಮಿಸಿರುವ ಕೆರೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಿ ಅಂತರ್ಜಲ ಸಂಗ್ರಹಿಸಲು ಮುಂದಾಗಬೇಕಾಗಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್ವರಿ ಪುರಾಣಿಕ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವಜಲ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವದ ಶೇ.18ರಷ್ಟು ಜನಸಂಖ್ಯೆಯ ಭಾರತ ಹೊಂದಿದೆ. ಆದರೆ ನೀರಿನ ಸಂಪನ್ಮೂಲಗಳನ್ನು ಸಂಗ್ರಹಿಸುವಲ್ಲಿ ಕೇವಲ 4% ರಷ್ಟು ಸಾಧನೆ ತೋರಿರುವುದಾಗಿ ಮಾಹಿತಿಗಳಿಂದ ತಿಳಿದುಕೊಳ್ಳಬಹುದಾಗಿದ್ದು, ನೀರನ್ನು ಸಂಗ್ರಹಿಸಲು ಮರುಪೂರಣ ಮಾಡಲು ವಿಶೇಷವಾಗಿ 3 ತಿಂಗಳ ಮಳೆಗಾಲದಲ್ಲಿ ಮಳೆ ನೀರು ಕೊಯ್ಲುನ್ನು ಅವಲಂಬಿಸಬೇಕಾಗಿದೆ ಎಂದರು.

ಮಳೆ ನೀರು ಕೊಯ್ಲು: ಭಾರತವು ಸಾಂಪ್ರದಾಯಿಕ ನೀರಿನ ನಿರ್ವಹಣೆ ಕುರಿತು ಅತ್ಯಂತ ಶ್ರೀಮಂತ ಇತಿಹಾಸ ಹೊಂದಿದೆ. ನಮ್ಮ ಪೂರ್ವಜರು ಬೃಹತ್ ಕೆರೆಗಳನ್ನು ನಿಮಿರ್ಸಿಕೊಟ್ಟಿದ್ದಾರೆ. ಅವುಗಳನ್ನು ಕಾಲಕಾಲಕ್ಕೆ ಅಭಿವೃದ್ಧಿಪಡಿಸಿ ನೀರು ಸಂಗ್ರಹಿಸುವಂತೆ ಸಲಹೆ ನೀಡಿದರು, ಛಾವಣಿಗಳಿಂದ ಮಳೆ ನೀರನ್ನು ಪೈಪ್‌ ಮೂಲಕ ಸಂಗ್ರಹಿಸಿ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಅಥವಾ ಅಂತರ್ಜಲ ಮರುಪೂರಣ ಮಾಡಲು ಬಳಸಲಾಗುತ್ತದೆ, ಸಿಮೆಂಟ್ ನೀರು ಸಂಗ್ರಹಣಾ ಟ್ಯಾಂಕ್‌ಗಳು ಹೆಚ್ಚಿನ ಪ್ರಮಾಣದ ಮಳೆ ನೀರು ಸಂಗ್ರಹಿಸಲು ಭೂಮಿಯಲ್ಲಿ ದೊಡ್ಡಪ್ರಮಾಣದ ತೊಟ್ಟಿಗಳನ್ನು ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ, ಸಹಾಯಕ ಸರ್ಕಾರಿ ಅಭಿಯೋಜಕ ಪ್ರಭು ಶೀಗಿಹಳ್ಳಿ, ಎಂ.ಎನ್. ಲಮಾಣಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರ, ಉಪಾಧ್ಯಕ್ಷ ಜಿ.ಬಿ.ಯಲಗಚ್ಚ, ಕಾರ್ಯದರ್ಶಿ ಎಫ್.ಜಿ.ಮುಳಗುಂದ, ಮಂಜುನಾಥ ಕುಮ್ಮೂರ, ಸುರೇಶ ಕಾಟೇನಹಳ್ಳಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.