ನಾವು ಇಂದು ನೆಟ್ಟ ಗಿಡವನ್ನು ಪೋಷಣೆ ಮಾಡುವ ಗುರುತರ ಜವಾಬ್ದಾರಿಯನ್ನು ವಹಿಸಿ ಕೊಂಡು ನೋಡಿದಾಗ ಆ ಗಿಡ ದೊಡ್ಡ ಮರವಾಗಿ ಬಹುಕಾಲ ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಕಾಲಕಾಲಕ್ಕೆ ಮಳೆ ಹಾಗೂ ಪರಿಸರದ ಸ್ವಚ್ಛಂದತೆ ನೀಡಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇಂದಿನ ಜಾಗತಿಕ ಯುಗದಲ್ಲಿ ವಿಶ್ವ ಗಾಳಿ ದಿನ ಬಹಳ ಮಹತ್ವ ಪಡೆಯಲಿದೆ. ಶುದ್ಧ ಗಾಳಿಗಾಗಿ ನಾವು ಮುಂದೊಂದು ದಿನ ಪರಿತಪಿಸುವಂತಹ ವಾತಾವರಣ ನಿರ್ಮಾಣ ಆಗಬಾರದು ಎನ್ನುವ ದಿಶೆಯಲ್ಲಿ ಗಾಳಿ ಶಕ್ತಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಜೂನ್ 15 ರಂದು ವಿಶ್ವ ಗಾಳಿ ದಿನ ಹಾಗೂ ಪರಿಸರ ದಿನ ಆಚರಿಸಲಾಗುತ್ತಿದೆ ಎಂದು ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿ ಬಳಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆವರಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ವಕೀಲರ ಸಂಘ ಅರಣ್ಯ ಇಲಾಖೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಗ್ರಾಮ ಪಂಚಾಯಿತಿ ಮುದ್ದೇನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗಾಳಿ ದಿನ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಹಸಿರು ಮತ್ತು ಸ್ವಚ್ಛ ಚಿಕ್ಕಬಳ್ಳಾಪುರ ಅಭಿಯಾನ ಅಡಿಯಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಾಳಿಯ ಪ್ರಾಮುಖ್ಯತೆ ಅರಿಯಿರಿ

ಪ್ರತಿಯೊಬ್ಬರಲ್ಲೂ ಪರಿಸರ ಜಾಗೃತಿ ಮೂಡಿಸಿ ಹಸಿರು ಮತ್ತು ಸ್ವಚ್ಛತೆಗೆ ಹೆಚ್ಚು ಮಹತ್ವ ತಿಳಿಸಬೇಕು. ವರ್ಲ್ಡ್ ವಿಂಡ್ ಡೇ ಅಥವಾ ಗ್ಲೋಬಲ್ ವಿಂಡ್ ಡೇ ಎಂಬುದು ಜೂನ್ 15 ರಂದು ಆಚರಿಸಲಾಗುವ ವಾರ್ಷಿಕ ಕಾರ್ಯಕ್ರಮ. ಗಾಳಿಯ ಪ್ರಾಮುಖ್ಯತೆ ಮತ್ತು ಅದರ ಮಹತ್ವವನ್ನು ಪ್ರತಿಯೊಬ್ಬರೂ ತಿಳಿಯುವ ನಿಟ್ಟಿನಲ್ಲಿ ಆಯಾ ದಿನಗಳಲ್ಲಿ ಬರುವ ವಿಶೇಷ ಕಾರ್ಯಕ್ರಮಗಳ ಮಹತ್ವವನ್ನು ಪ್ರತಿಯೊಬ್ಬರೂ ತಿಳಿಯಬೇಕು ಎಂದು ಹೇಳಿದರು.

ಕಾಟಾಚಾರದ ಕಾರ್ಯಕ್ರಮ ಬೇಡ

ನಾವು ಇಂದು ನೆಟ್ಟ ಗಿಡವನ್ನು ಪೋಷಣೆ ಮಾಡುವ ಗುರುತರ ಜವಾಬ್ದಾರಿಯನ್ನು ವಹಿಸಿ ಕೊಂಡು ನೋಡಿದಾಗ ಆ ಗಿಡ ದೊಡ್ಡ ಮರವಾಗಿ ಬಹುಕಾಲ ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಕಾಲಕಾಲಕ್ಕೆ ಮಳೆ ಹಾಗೂ ಪರಿಸರದ ಸ್ವಚ್ಛಂದತೆ ನೀಡಲಿದೆ. ಕೇವಲ ಕಾಟಾಚಾರಕ್ಕೆ ಎಂಬಂತೆ ಇಂತಹ ಕಾರ್ಯಕ್ರಮಗಳು ನಡೆಯಬಾರದು ಬದಲಿಗೆ ಜವಾಬ್ದಾರಿಯಿಂದ ಮುಂದಾಲೋಚನೆ ಇಟ್ಟು ಈ ಕೆಲಸಗಳನ್ನ ಮಾಡಬೇಕು ಎಂದು ಹೇಳಿದರು.

ಮುದ್ದೇನಹಳ್ಳಿಯ ಬೆಳಗಾವಿ ವಿಟಿಯು ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್ ಮಾತನಾಡಿ, ಪರಿಸರವನ್ನ ಕಾಪಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಕೇವಲ ಇಂದು ಇಲ್ಲಿ ಮಾತ್ರವಲ್ಲದೆ, ನಾವು ಪ್ರತಿಯೊಬ್ಬರಲ್ಲೂ ಪರಿಸರ ಕಾಪಾಡುವ ದೆಸೆಯಲ್ಲಿ ಹಚ್ಚ ಹಸಿರಿನ ವಾತಾವರಣ ನಿರ್ಮಾಣ ಮಾಡುವ ಗುರುತರ ಜವಾಬ್ದಾರಿಯನ್ನು ನಾವು ಹೊಂದಬೇಕು ಎಂದರು.

ಸಮಾಜಕ್ಕೆ ಪೂರಕವಾಗಿರಲಿ

ಈ ಕಾರ್ಯಕ್ರಮ ಇಂದು ಪ್ರಾರಂಭ ಮತ್ತು ಅಂತ್ಯಕ್ಕೆ ಮಾತ್ರ ಸೀಮಿತವಾಗಿರದೆ ನಮ್ಮ ಜೀವನದ ಉದ್ದಕ್ಕೂ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಪೂರಕವಾಗಿ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆ ಎಂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಕೆ.ಉಮೇಶ್ , ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್.ರಮೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ , ಪ್ರಧಾನ ಕಾರ್ಯದರ್ಶಿ ಮುರಳಿ ಮೋಹನ್, ನ್ಯಾಯವಾದಿಗಳಾದ ಮಂಜುನಾಥ್ ಗೌಡ ಸೌಜನ್ಯ ಗಾಂಧಿ ಮತ್ತಿತರರು ಇದ್ದರು.