ಅರಣ್ಯ ಪ್ರದೇಶದ ಕಾಡ್ಗಿಚ್ಚು ತಡೆಯಲು ಜಾಗೃತಿ ಮೂಡಿಸಿ

| Published : Mar 10 2025, 12:17 AM IST

ಸಾರಾಂಶ

ಬೇಸಿಗೆ ಹತ್ತಿರವಾಗುತ್ತಿದ್ದು, ಅರಣ್ಯಪ್ರದೇಶಗಳಲ್ಲಿ ಸಂಭವಿಸುವ ಕಾಡ್ಗಿಚ್ಚು ಪ್ರಕರಣಗಳನ್ನು ತಡೆಯಲು ಸಾರ್ವಜನಿಕರಿಗೆ ಅರಣ್ಯ ರಕ್ಷಣೆ ಕುರಿತು ವ್ಯಾಪಕ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧಿಕಾರಿಗಳಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಬೇಸಿಗೆ ಹತ್ತಿರವಾಗುತ್ತಿದ್ದು, ಅರಣ್ಯಪ್ರದೇಶಗಳಲ್ಲಿ ಸಂಭವಿಸುವ ಕಾಡ್ಗಿಚ್ಚು ಪ್ರಕರಣಗಳನ್ನು ತಡೆಯಲು ಸಾರ್ವಜನಿಕರಿಗೆ ಅರಣ್ಯ ರಕ್ಷಣೆ ಕುರಿತು ವ್ಯಾಪಕ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧಿಕಾರಿಗಳಿಗೆ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾವ್ಯಾಪ್ತಿಯ ಮೂರು ಅರಣ್ಯ ವಿಭಾಗಗಳ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ’ಅರಣ್ಯದಲ್ಲಿ ಬೆಂಕಿ ನಿರ್ವಹಣಾ’ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಆಗಾಗ್ಗೆ ಸಂಭವಿಸುವ ಕಾಡ್ಗಿಚ್ಚು ಸಮಯದಲ್ಲಿ ಕಾಡಿನಲ್ಲಿ ವಾಸಿಸುವ ಪ್ರಾಣಿ, ಪಕ್ಷಿಗಳಿಗೆ ಅಪಾಯ ಎದುರಾಗಲಿದೆ. ಪ್ರಾಣಿ ಸಂಪತ್ತು ದೇಶದ ಸಂಪತ್ತು ಆಗಿದೆ. ಪ್ರಾಣಿ ಪಕ್ಷಿಗಳ ರಕ್ಷಣೆಗೆ ಮುಖ್ಯವಾಗಿ ಅರಣ್ಯಗಳನ್ನು ಸಂರಕ್ಷಣೆ ಮಾಡಬೇಕಾದ ಅವಶ್ಯವಿದೆ. ಕಾಡ್ಗಿಚ್ಚು ಸಂದರ್ಭದಲ್ಲಿ ಬೆಂಕಿ ನಂದಿಸುವ ಅರಣ್ಯ ಇಲಾಖೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ತಹಸೀಲ್ದಾರ್, ತಾಲೂಕು ಪಂಚಾಯಿತಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅರಣ್ಯ ರಕ್ಷಣೆಗೆ ಮುಂದಾಗುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು. ಕಳೆದ ಬಾರಿ ಬಿ.ಆರ್.ಟಿ ವಲಯದಲ್ಲಿ ಅರಣ್ಯ ರಕ್ಷಣೆ ಕುರಿತು ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ಏರ್ಪಡಿಸಿ ಅರಿವು ಮೂಡಿಸಿದ ಹಿನ್ನೆಲೆಯಲ್ಲಿ ಕಾಡ್ಗಿಚ್ಚು ಪ್ರಕರಣಗಳು ಕಡಿಮೆಯಾಗಿವೆ. ಹನೂರು ಹಾಗೂ ಕೊಳ್ಳೇಗಾಲ ಭಾಗದ ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ ಕಾಡಂಚಿನ ಜನರಿಗೆ ಇನ್ನೂ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಯಾವುದೇ ಅವಘಡಗಳಾಗದಂತೆ ತಡೆಯಲು ಸಕಲ ಸಿದ್ದತೆಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕು ಎಂದರು. ಜಿಲ್ಲೆಯ ಹನೂರು ಹಾಗೂ ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಬೆಂಕಿ ಪ್ರಕರಣ ಸಂಭವಿಸುವ ೩೮ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಕಾಡಂಚಿನ ಜನರು ಬೀಡಿ, ಸಿಗರೇಟ್ ಸೇದಿ, ಬೆಂಕಿ ನಂದಿಸದೇ ನಿರ್ಲಕ್ಷ್ಯದಿಂದ ಹಾಗೇಯೇ ಎಸೆಯುವುದರಿಂದ ಅರಣ್ಯ ಬೆಂಕಿ ಬೀಳುವ ಹೆಚ್ಚಿನ ಸಾಧ್ಯತೆ ಇದೆ. ಈ ಬಗ್ಗೆ ಕಾಡಂಚಿನ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಹಾಗೂ ಅರಣ್ಯದಲ್ಲಿ ಪ್ರಾಣಿ ಸಂಪತ್ತಿನ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಬೆಂಕಿ ನಿರ್ವಹಣೆ ಕಾರ್ಯದಲ್ಲಿ ಅರಣ್ಯವಾಸಿಗಳನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಗಟ್ಟಲು ಅಧಿಕಾರಿಗಳು ಕಾಡ್ಗಿಚ್ಚು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯ ಸಮುದಾಯದವರಿಗೆ ಎಚ್ಚರಿಕೆಯನ್ನು ನೀಡಬೇಕು. ಅವರ ಮನವೊಲಿಸಬೇಕು. ಅವರಲ್ಲಿ ಸಕಾರಾತ್ಮಕ ಮನೋಭಾವ ಮೂಡಿಸಿ ಅರಣ್ಯ ರಕ್ಷಣೆಯ ಮಹತ್ವವನ್ನು ತಿಳಿ ಹೇಳಬೇಕು. ಕಾಡಂಚಿನ ಗ್ರಾಮಗಳಲ್ಲಿರುವ ಯುವಕರನ್ನು ಒಂದೆಡೆ ಸೇರಿಸಿ ಸಭೆ ಮಾಡಿ ಅರಣ್ಯಕ್ಕೆ ಬೀಳುವ ಬೆಂಕಿ ಆರಿಸಲು ಮಾರ್ಗದರ್ಶನ ಮಾಡಬೇಕು. ಅರಣ್ಯಕ್ಕೆ ಬೆಂಕಿ ಬಿದ್ದ ಕೆಲ ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾಗಲಿದೆ. ಅಂತಹ ವೇಳೆ ವಲಯ ಅರಣ್ಯಾಧಿಕಾರಿಗಳು ಸ್ಥಳೀಯ ಸಾರ್ವಜನಿಕರ ಸಹಕಾರ ಪಡೆದು ಬೆಂಕಿ ನಂದಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಅರಣ್ಯ ಬೆಂಕಿ ಬಿದ್ದ ಸಮಯದಲ್ಲಿ ಆಯಾ ಭಾಗದ ಠಾಣೆಗಳ ಪೊಲೀಸರು ಅರಣ್ಯಾಧಿಕಾರಿಗಳ ಸೂಚನೆಗೆ ಕಾಯದೇ ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಬೇಕಾದ ಅನಿವಾರ್ಯತೆ ಇದೆ. ಅರಣ್ಯ ರಕ್ಷಣೆಯನ್ನು ಆದ್ಯತಾ ವಿಷಯವಾಗಿ ಪರಿಗಣಿಸಲಾಗುವುದು ಎಂದರು. ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಮಾತನಾಡಿ, ಅರಣ್ಯ ಸಂರಕ್ಷಣೆಗೆ ಇತರೆ ಇಲಾಖೆಗಳು ನಮ್ಮೊಡನೆ ಕೈಜೋಡಿಸಬೇಕು. ಆಯಾ ತಾಲೂಕು ತಹಸೀಲ್ದಾರ್ ಹಾಗೂ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಮುಂದಿನ ೩-೪ ದಿನಗಳಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಬೇಕು. ಅರಣ್ಯ ರಕ್ಷಣೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪ ಅರಣ್ಯ ಸಂರಕ್ಷನಾಧಿಕಾರಿ ಶ್ರೀಪತಿ, ಸಾಮಾಜಿಕ ಅರಣ್ಯ ವಿಭಾಗದ ಅರಣ್ಯಾಧಿಕಾರಿ ಸಭ್ಯಶ್ರೀ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಅಗ್ನಿಶಾಮಕ ಆಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.