ದೊಡ್ಡಬಳ್ಳಾಪುರ: ವರನಟ ಡಾ.ರಾಜ್ ಕುಮಾರ್ ಸಮಾಧಿಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಎರಡೂವರೆ ಎಕರೆ ಸರ್ಕಾರಿ ಜಾಗವನ್ನು ನೀಡಿರುವ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ನಟ ಚೇತನ್‌ ಅಹಿಂಸಾ ವಿರುದ್ದ ದೊಡ್ಡಬಳ್ಳಾಪುರದಲ್ಲಿ ಸೋಮವಾರ ಪ್ರತಿಭಟಿಸಿ, ನಗರ ಠಾಣೆಗೆ ದೂರು ಸಲ್ಲಿಸಲಾಯಿತು.

ದೊಡ್ಡಬಳ್ಳಾಪುರ ತಾಲೂಕು ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಡಿಕ್ರಾಸ್‌ನ ಡಾ.ರಾಜ್‌ಕುಮಾರ್‌ ವೃತ್ತದಲ್ಲಿರುವ ಪುನಿತ್‌ರಾಜ್‌ಕುಮಾರ್‌ ಪುತ್ಥಳಿ ಮುಂದೆ ಧರಣಿ ನಡೆಸಿದ ಕನ್ನಡಪರ ಕಾರ್ಯಕರ್ತರು, ಚೇತನ್‌ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ, ದೊಡ್ಡಬಳ್ಳಾಪುರ ನಗರ ಠಾಣೆಗೆ ತೆರಳಿದ ಪ್ರತಿಭಟನಾಕಾರರು, ಚೇತನ್‌ ಅಹಿಂಸಾ ನಾಡಿನ ಅಸ್ಮಿತೆಯ ಸಂಕೇತವಾಗಿರುವ ಡಾ.ರಾಜ್‌ಕುಮಾರ್ ಅವರ ಘನತೆಗೆ ಕುಂದು ಬರುವಂತೆ ನೀಡಿರುವ ಹೇಳಿಕೆ ಖಂಡನೀಯವಾಗಿದೆ. ಕನ್ನಡ ಸಂಘಟನೆಗಳ ಪ್ರತಿಭಟನೆಯ ಹಿನ್ನಲೆಯಲ್ಲಿ ಕ್ಷಮೆ ಕೋರಿದ್ದ ಅವರು, ಬಳಿಕವೂ ಆಕ್ಷೇಪಾರ್ಹ ಎಂದು ಪರಿಗಣಿಸಲಾದ ತಮ್ಮ ಹೇಳಿಕೆಗೆ ಬದ್ದವಿರುವುದಾಗಿ ಹೇಳುವ ಮೂಲಕ ಎಡಬಿಡಂಗಿತನ ಪ್ರದರ್ಶಿಸಿದ್ದಾರೆ. ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಅವರ ಹೇಳಿಕೆ ಮತ್ತು ನಂತರದ ಸಮರ್ಥನೆಯನ್ನು ಉದ್ದೇಶಪೂರ್ವಕ ಪ್ರಚೋದನೆ ಎಂದು ಪರಿಗಣಿಸಿ ಅವರನ್ನು ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಚೇತನ್‌ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ, ಅವರನ್ನು ಕೂಡಲೇ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿ ಹಲವು ಕನ್ನಡ ಸಂಘಟನೆಗಳ ಸಹಿಯೊಂದಿಗೆ ಪೋಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು.

ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ಉಪಾಧ್ಯಕ್ಷ ವಿ.ಪರಮೇಶ್, ಕನ್ನಡ ಪಕ್ಷದ ಸಂಜೀವನಾಯಕ್, ಡಿ.ಪಿ.ಆಂಜನೇಯ, ವಿವಿಧ ಸಂಘಟನೆಗಳ ಮುಖಂಡರಾದ ರಾಜಘಟ್ಟ ರವಿ, ಡಿ.ಸಿ.ಚೌಡರಾಜು, ಜೆ.ಆರ್.ರಮೇಶ್, ಮುನಿಪಾಪಯ್ಯ, ಗುರುರಾಜ್, ಜನಪರ ಮಂಜು, ಪ್ರಮೀಳಾ ಮಹದೇವ್, ಮರುಳಾರಾಧ್ಯ, ಮಂಜುನಾಥ್, ವೆಂಕಟೇಶ್ ಸೂರಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.


28ಕೆಡಿಬಿಪಿ5-

ದೊಡ್ಡಬಳ್ಳಾಪುರದಲ್ಲಿ ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘ, ಕನ್ನಡ ಸಂಘಟನೆಗಳಿಂದ ನಟ ಚೇತನ್‌ ಅಹಿಂಸಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಯಿತು.