ಮಂಗಳೂರು: ಜೈನಕಾಶಿ, ವಿದ್ಯಾಕಾಶಿ ಹಾಗೂ ಸಾಂಸ್ಕೃತಿಕ ಪರಂಪರೆಯ ನೆಲೆಯಾಗಿರುವ ಮೂಡುಬಿದಿರೆಯಲ್ಲಿ ಏಪ್ರಿಲ್ 10ರಿಂದ 12ರ ವರೆಗೆ ವೈಭವಮಯ ‘ಬೆದ್ರ ಉತ್ಸವ’ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ. ಈ ಉತ್ಸವದ ಅಂಗವಾಗಿ ನೀಡುವ ಪ್ರತಿಷ್ಠಿತ ‘ಬೆದ್ರ ಮಾಣಿಕ್ಯ’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಅಧ್ಯಕ್ಷರು ಹಾಗೂ ಸಹಕಾರ ಕ್ಷೇತ್ರದ ಅಪ್ರತಿಮ ನಾಯಕ ‘ಸಹಕಾರ ರತ್ನ’ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಬೆದ್ರ ಉತ್ಸವ ಸಮಿತಿ ಆಯ್ಕೆ ಮಾಡಿದೆ.ಸಹಕಾರ ಕ್ಷೇತ್ರದಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಲ್ಲಿಸಿರುವ ಅಪೂರ್ವ ಸೇವೆ, ದೀರ್ಘಕಾಲದ ಬದ್ಧತೆ ಹಾಗೂ ಸಮಾಜಮುಖಿ ನಾಯಕತ್ವವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಬೆದ್ರ ಉತ್ಸವ ಸಮಿತಿ ಆಯ್ಕೆ ಮಾಡಿದೆ.

ಇತ್ತೀಚೆಗೆ ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ (ಎಂಎಂಎ) ವತಿಯಿಂದ ನೀಡಲಾದ ಪ್ರತಿಷ್ಠಿತ 27ನೇ ‘ಎಂಎಂಎ-ಕೆವಿಕೆ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿ’ ಅವರಿಗೆ ದೊರೆತಿದ್ದು, ಅವರ ಆಡಳಿತ ಸಾಮರ್ಥ್ಯಕ್ಕೆ ದೊರೆತ ಮಾನ್ಯತೆ ಆಗಿದೆ.

ಸುಮಾರು ಮೂರು ದಶಕಗಳಿಗಿಂತ ಹೆಚ್ಚು ಕಾಲ (32 ವರ್ಷಗಳು) ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು, ಬ್ಯಾಂಕ್‌ನ್ನು ಶಕ್ತಿಶಾಲಿ ಮತ್ತು ಜನಸ್ನೇಹಿ ಸಂಸ್ಥೆಯಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಅವರ ದೂರದೃಷ್ಟಿ ನಾಯಕತ್ವ , ಶಿಸ್ತು ಮತ್ತು ಪ್ರಾಮಾಣಿಕ ಆಡಳಿತದಿಂದ ಬ್ಯಾಂಕ್ ಇಂದು ರಾಜ್ಯದಲ್ಲೇ ಮಾದರಿಯಾದ ಸಹಕಾರಿ ಬ್ಯಾಂಕ್ ಆಗಿ ಬೆಳೆದಿದೆ. ಇದಲ್ಲದೆ ಅವರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಸಹಕಾರ ಚಳವಳಿಗೆ ಹೊಸ ಚೈತನ್ಯ ತುಂಬಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅವರ ಆಡಳಿತ ಕೌಶಲ್ಯ ಮತ್ತು ನವೀನ ಚಿಂತನೆಗಳು ಅನೇಕ ಸಂಸ್ಥೆಗಳ ಅಭಿವೃದ್ಧಿಗೆ ದಿಕ್ಕು ತೋರಿವೆ.ಕಳೆದ ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲ ಸಹಕಾರ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ .ಎಂ.ಎನ್.ರಾಜೇಂದ್ರ ಕುಮಾರ್ ಅವರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇದರ ಸಂಸ್ಥಾಪಕರು. ನವದೆಹಲಿಯ ಇಪ್ಕೋ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಅನೇಕ ಸಹಕಾರಿ ಸಂಸ್ಥೆಗಳ ಮಾರ್ಗದರ್ಶಕರಾಗಿ, ಅವುಗಳ ಅಭಿವೃದ್ಧಿಗೆ ಸಕ್ರಿಯವಾಗಿ ಕೈಜೋಡಿಸಿದ್ದಾರೆ. ಅವರ ಸಮಾಜಮುಖಿ ಸೇವೆ ಮತ್ತು ನಿಷ್ಠೆಯ ಪರಿಕಲ್ಪನೆಗೆ ಮಾನ್ಯತೆ ನೀಡುವಂತೆ ಅವರಿಗೆ ಎರಡು ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುವುದು ಗಮನಾರ್ಹ.ಮೂಡುಬಿದಿರೆಯ ಬೆದ್ರ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುವ ಮೂರು ದಿನಗಳ ವೈಭವಮಯ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ‘ಬೆದ್ರ ಮಾಣಿಕ್ಯ’ ಪ್ರಶಸ್ತಿಯನ್ನು ಸ್ವೀಕರಿಸಲಿರುವರು.