ಸಾರಾಂಶ
69ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಗೋಣಿಕೊಪ್ಪ ಲಯನ್ಸ್ ಶಾಲೆಯಲ್ಲಿ ವನ್ಯ ಪ್ರಾಣಿಗಳ ಕುರಿತು ಉಪನ್ಯಾಸ ನಡೆಯಿತು.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ವನ್ಯಪ್ರಾಣಿ ಹಾಗೂ ಪರಿಸರದ ಬಗ್ಗೆ ಕಾಳಜಿಯನ್ನು ಹೊಂದುವುದರಿಂದ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಾಧ್ಯ ಎಂದು ಖ್ಯಾತ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ತಿಳಿಸಿದರು.69ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಗೋಣಿಕೊಪ್ಪ ಲಯನ್ಸ್ ಶಾಲೆಯಲ್ಲಿ ವನ್ಯ ಪ್ರಾಣಿಗಳ ಕುರಿತು ಉಪನ್ಯಾಸ ನೀಡಿದರು.ವನ್ಯ ಪ್ರಾಣಿಗಳು ತಮ್ಮ ಬದುಕನ್ನು ವಿಶೇಷ ರೀತಿಯಲ್ಲಿ ನಡೆಸುತ್ತವೆ. ಅವುಗಳು ಮಾತನಾಡದೆ ಇರುವುದರಿಂದ ಅವುಗಳಲ್ಲಿ ವಿಶೇಷ ಜ್ಞಾನಗಳು ವೃದ್ಧಿಸುತ್ತಿರುತ್ತದೆ. ಅವುಗಳ ಕಾಡಿನ ಬದುಕನ್ನು ಜೀವನದಲ್ಲಿ ಪರಿಪಾಲನೆ ಮಾಡಿಕೊಂಡು ಬಂದಾಗ ನಮ್ಮ ಬದುಕು ಸಹ ಸುಂದರವಾಗಬಲ್ಲದು ಎಂದರು.ನಾವು ಪರಿಸರವನ್ನು ಪ್ರೀತಿಸಿದಾಗ, ಪ್ರಾಣಿಗಳ ಬಗ್ಗೆ ಕಾಳಜಿ ಹೊಂದಿದಾಗ ನಮ್ಮ ಬದುಕು ಬದಲಾವಣೆಯನ್ನ ಕಂಡುಕೊಳ್ಳುತ್ತದೆ. ಒತ್ತಡಗಳನ್ನು ಕಳೆದುಕೊಳ್ಳಲು ಕಾಡುಗಳ ಏಕಾಂತ ಸಂಚಾರ ಬಹು ಮುಖ್ಯ. ಋಷಿಗಳು ಕಾಡಿನಲ್ಲಿ ತಪಸ್ಸು ಮಾಡುವ ಉದ್ದೇಶ ಕಾಡಿನಲ್ಲಿ ಮೌನತೆ ವಿಸ್ತರಿಸಿರುವುದು. ಇದರಿಂದಾಗಿ ತನ್ನನ್ನು ತಾನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬದುಕು ಮೌಲ್ಯಧಾರಿತವಾಗಿ ನಡೆಯಲು ನಾವು ಉತ್ತಮ ಗೆಳೆಯರನ್ನು ಸಂಪಾದಿಸಬೇಕಾಗಿದೆ. ಇಂತಹ ಗೆಳೆಯರ ಸಹವಾಸದಿಂದ ನಾವು ಬಹುದೊಡ್ಡ ಸಾಹಸವನ್ನೇ ಮಾಡಬಹುದು ಈ ಜೀವನದ ಸತ್ಯವನ್ನು ಗುರುತಿಸಿಕೊಳ್ಳಬಹುದು ಎಂದರು.ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಆನೆ, ಹುಲಿ ಇನ್ನಿತರ ಪ್ರಾಣಿಗಳು ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವ ಸ್ವಭಾವಗಳನ್ನು ತಿಳಿಸಿಕೊಟ್ಟರು.ಲಯನ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಬೋಸ್ ಪೆಮ್ಮಯ್ಯ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಸಿ.ಟಿ. ಅಪ್ಪಣ್ಣ, ಉಪಾಧ್ಯಕ್ಷ ಧನು ಉತ್ತಯ್ಯ, ಕಾರ್ಯದರ್ಶಿ ಶ್ರೀಮಂತ್ ಮುತ್ತಣ್ಣ, ಖಜಾಂಜಿ ಎಂ. ಸಚಿನ್ ಬೆಳ್ಯಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲತಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಗಾನ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ತಂಗಮ್ಮ ಇದ್ದರು.