ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕ ನಿರ್ಮಾಣದ ಹಿಂದೆ ಶತಮಾನದ ಹೋರಾಟವಿದೆ. ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಭಾಷಾ ಆಧಾರದ ಮೇಲೆ 1956 ನವೆಂಬರ್ 1 ರಂದು ರಾಜ್ಯ ಪುನರ್ ರಚನೆ ಆಯೋಗದ ಶಿಫಾರಸಿನ ಮೇರೆಗೆ ಮೈಸೂರು (ಕರ್ನಾಟಕ) ರಾಜ್ಯ ಹುಟ್ಟಿಕೊಂಡಿತು. ಈ ದಿನವು ಕನ್ನಡಿಗರ ಆತ್ಮಸಮ್ಮಾನ, ಏಕತೆ ಹಾಗೂ ಗೌರವದ ದಿನವಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆ ಮಾತನಾಡುವ ಪ್ರದೇಶಗಳಾದ ಮುಂಬೈ, ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಸಂಸ್ಥಾನಗಳಲ್ಲಿ ಹರಡಿಕೊಂಡಿದ್ದ ನಾಡನ್ನು ಒಂದುಗೂಡಿಸಲು ಅಲೂರು ವೆಂಕಟರಾಯರು. ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ ಹಾಗೂ ಸಾವಿರಾರು ಕನ್ನಡಾಭಿಮಾನಿಗಳು ‘ಒಂದು ನಾಡು, ಒಂದು ಭಾಷೆ, ಒಂದು ಕರ್ನಾಟಕ’ ಎಂಬ ಘೋಷಣೆಯನ್ನು ಮೊಳಗಿಸಿ ಏಕೀಕರಣದ ಫಲವಾಗಿ ರಾಜ್ಯ ಉದಯಿಸಿತು. ಇದರ ಫಲವಾಗಿ ಇಂದು ನಾವು 70ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ ಎಂದು ಹೇಳಿದರು.ರಾಜ್ಯಕ್ಕೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆ ಇದ್ದು 1200 ವರ್ಷಗಳಷ್ಟು ಪ್ರಾಚೀನ ಇತಿಹಾಸ ಹೊಂದಿದೆ. ಪಂಪ, ರನ್ನ, ಜನ್ನರಿಂದ ಹಿಡಿದು ಕುವೆಂಪು, ಬೇಂದ್ರೆ, ಗೋವಿಂದ ಪೈ, ಟಿ.ಪಿ.ಕೈಲಾಸಂ, ಕಾರಂತರಿಂದ ಚಂದ್ರಶೇಖರ ಕಂಬಾರ್ ತನಕ. ಬಸವಣ್ಣನ ಅನುಭವ ಮಂಟಪದಿಂದ ಹಿಡಿದು, ಕುವೆಂಪುವಿನ ವಿಶ್ವಮಾನವತೆಯ ಸಂದೇಶದವರೆಗೆ ನಮ್ಮ ನಾಡಿಗೆ ಹೆಮ್ಮೆ ತಂದಿವೆ. ಸಂಗೀತದ ನಾಡು ಕೂಡ ಹೌದು. ತ್ಯಾಗರಾಜ, ಪುರಂದರ ದಾಸ, ಕನಕದಾಸರಿಂದ ಪ್ರಾರಂಭವಾದ ಸಂಪ್ರದಾಯದಿಂದ ಇಂದಿನ ಶಾಸ್ತ್ರೀಯ ಮತ್ತು ಜನಪದ ಸಂಗೀತದವರೆಗೆ ಎಲ್ಲೆಡೆ ಕನ್ನಡದ ಶಬ್ದ, ತಾಳ ಮತ್ತು ಭಾವ ಹರಿದಾಡುತ್ತಿದೆ ಎಂದರು.
ಹೊಯ್ಸಳರ ಕಲೆ, ವಿಜಯನಗರ ಸಾಮ್ರಾಜ್ಯದ ವೈಭವ, ಶರಣರ ತತ್ವ, ಕಾವ್ಯ ಸಂಪ್ರದಾಯ, ಐಟಿ ತಂತ್ರಜ್ಞಾನ, ಎಲ್ಲವೂ ಒಂದೇ ನಾಡಿನಲ್ಲಿ ಒಂದಾಗಿವೆ. ಅಷ್ಟೇ ಅಲ್ಲದೇ ಕರ್ನಾಟಕ ವೈಭವ ಮತ್ತು ವೈವಿಧ್ಯತೆಯಲ್ಲಿಯು ಮುಂದಿದೆ. ಪ್ರಾಕೃತಿಕ ಸಂಪತ್ತು, ಸಾಂಸ್ಕೃತಿಕ ಪರಂಪರೆ ಮತ್ತು ಮಾನವ ಸಂಪನ್ಮೂಲದಿಂದ ಕೂಡಿದ ಶ್ರೀಮಂತ ರಾಜ್ಯ, ಬೆಂಗಳೂರು ಇಂದು ಭಾರತದ ‘ಸಿಲಿಕಾನ್ ವ್ಯಾಲಿ’ ಎಂದು ಖ್ಯಾತಿ ಪಡೆದಿದೆ ಎಂದರು.ಕರ್ನಾಟಕ ಅಭಿವೃದ್ಧಿಯ ಮಾರ್ಗದಲ್ಲಿ ಮುಂದಡಿಯಿಟ್ಟಿದೆ. ಆದರೆ ಇನ್ನೂ ಅಭಿವೃದ್ಧಿ ಆಗಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರು, ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು. ದಾವಣಗೆರೆ ನಗರಕ್ಕೆ ವಿವಿಧ ಐಟಿ, ಬಿಟಿ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ಭರರದಿಂದ ಸಾಗಿದ್ದು, ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಜಿ.ಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲ್ ರಾವ್, ಎಸ್ಪಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಇತರೆ ಗಣ್ಯರು ಭಾಗವಹಿಸಿದ್ದರು. ಕ್ಯಾಪ್ಷನ1ಕೆಡಿವಿಜಿ31: ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೆರವೇರಿಸಿ ಸಂದೇಶ ನೀಡಿದರು.;Resize=(128,128))
;Resize=(128,128))