ಕನ್ನಡಪ್ರಭ ವಾರ್ತೆ ರಾಮದುರ್ಗ

ಕೇಂದ್ರ ಸರ್ಕಾರದ ಜನವಿರೋಧಿ ಕಾರ್ಮಿಕ ನೀತಿ ಹಾಗೂ ಎಂಜಿಎನ್‌ಆರ್‌ಇಜಿ ಯೋಜನೆ ಮೊದಲಿನಂತೆ ಮುಂದುವರೆಕೆಗೆ ಒತ್ತಾಯಿಸಿ ಫೆ.12 ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರ ಬೆಂಬಲಿಸಿ ರಾಮದುರ್ಗ ಬಂದ್ ನಡೆಸಲಾಗುವುದು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೈಬು ಜೈನೆಖಾನ ಹೇಳಿದರು.ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಯಲ್ಲಿ ಮೊದಲಿನ 29 ಕಾನೂನು ರದ್ದು ಪಡಿಸಿ 4 ಸಂಹಿತೆಗಳನ್ನಾಗಿಸಿ ದುಡಿಯುವ ವರ್ಗಕ್ಕೆ ದೊರೆಯುವ ಸೌಲಭ್ಯಗಳನ್ನು ಕಸಿದುಕೊಂಡಿದೆ. ಅಲ್ಲದೆ, ಉದ್ಯೋಗ ಖಾತ್ರಿ ಯೋಜನೆಯ ಹೊಸ ಮಾರ್ಗಸೂಚಿಯನ್ವಯ ಜಾರಿಗೆ ಮುಂದಾಗಿದ್ದು, ಗ್ರಾಮೀಣ ಜನರ ದುಡಿಯುವ ಹಕ್ಕು ಕಸಿದುಕೊಂಡು ಮುಂದೊಂದು ದಿನ ಈ ಯೋಜನೆ ರದ್ದು ಪಡಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸಿದೆ. ಇದನ್ನು ಸಿಐಟಿಯು ತೀವ್ರ ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದರು.ಕೇಂದ್ರದ ಪಡಿತರ ಚೀಟಿಗೆ ಹೊಸ ನಿಯಮ ಜಾರಿಗೆ ತಂದಿರುವದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವ ಮುಖಾಂತರ ಬಡವರನ್ನು ಸೌಲಭ್ಯ ವಂಚಿತರನ್ನಾಗಿಸುವ ಸರ್ಕಾರದ ನಿಲುವು ಖಂಡಿಸಿ ನಡೆಯುವ ಬಂದ್‌ನಲ್ಲಿ ತಾಲೂಕಿನ ಸಮಸ್ತ ಜನತೆ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬೆಂಬಲಿಸಿ ಫೆ.12ರ 11 ಗಂಟೆಗೆ ರಾಮದುರ್ಗದ ವೆಂಕಟೇಶ್ವರ ದೇವಸ್ಥಾನದ ಹತ್ತಿರ ಆಗಮಿಸಲು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ತಾಲೂಕಾಧ್ಯಕ್ಷ ನಾಗಪ್ಪ ಸಂಗೊಳ್ಳಿ, ಪಂಚಾಯತ ನೌಕರರ ಸಂಘದ ದಿಲೀಪ ಬೋವಿ, ಅಂಗನವಾಡಿ ನೌಕರರ ಸಂಘದ ಸರಸ್ವತಿ ಮಾಳಶೆಟ್ಟಿ ಮತ್ತು ಅಕ್ಷರ ದಾಸೋಹ ನೌಕರರ ಸಂಘದ ತುಳಸಮ್ಮ ಮಾಳದಕರ ಇದ್ದರು.