ಸಾರಾಂಶ
ರಾಮನವಮಿ ಪ್ರಯುಕ್ತ ಕೊಡಗು ಜಿಲ್ಲೆಯ ರಾಮ ಹಾಗೂ ಹನುಮ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೆಂಕರ್ಯಗಳು ನಡೆದವು. ಬ್ರಾಹ್ಮಿ ಮುಹೂರ್ತದ ವೇಳೆಗೆ ದೇವಾಲಯಗಳಲ್ಲಿ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಪಂಚಾಮತ ಅಭಿಷೇಕದ ನಂತರ ಅಲಂಕಾರ ಮಾಡಿ, ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ/ಮಡಿಕೇರಿ
ಮರ್ಯಾದ ಪುರುಷ ಶ್ರೀರಾಮನ ಜನ್ಮದಿನವಾದ ಶ್ರೀರಾಮ ನವಮಿಯನ್ನು ಜಿಲ್ಲೆಯಲ್ಲಿ ಸಂಭ್ರಮ ಮತ್ತು ಶ್ರದ್ಧಾ ಭಕ್ತಿಯಿಂದ ಬುಧವಾರ ಆಚರಣೆ ಮಾಡಲಾಯಿತು.ಜಿಲ್ಲೆಯ ರಾಮ ಹಾಗೂ ಹನುಮ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೆಂಕರ್ಯಗಳು ನಡೆದವು. ಬ್ರಾಹ್ಮಿ ಮುಹೂರ್ತದ ವೇಳೆಗೆ ದೇವಾಲಯಗಳಲ್ಲಿ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಪಂಚಾಮತ ಅಭಿಷೇಕದ ನಂತರ ಅಲಂಕಾರ ಮಾಡಿ, ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.ಮಲ್ಲಿಕಾರ್ಜುನ ನಗರದ ಕೋದಂಡರಾಮ ದೇವಾಲಯದಲ್ಲಿ ಬೆಳಗ್ಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಹಾಗೂ ವಸ್ತ್ರಾಲಂಕಾರ ಸೇವೆ ನಡೆಯಿತು. ಮಧ್ಯಾಹ್ನ ವಿಶೇಷ ಮಹಾಪೂಜೆ ಬಳಿಕ ಕೋಸಂಬರಿ, ಪಾನಕ, ಅನ್ನಸಂತರ್ಪಣೆ ನಡೆಯಿತು.ನಗರದ ಆಂಜನೇಯ ಗುಡಿಯಲ್ಲೂ ಶ್ರೀರಾಮ ನವಮಿ ಪ್ರಯುಕ್ತ ಬೆಳಗ್ಗೆ ರಾಮ ತಾರಕ ಹೋಮ, ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಮಾಡಲಾಯಿತು, ಸಾಕಷ್ಟು ಭಕ್ತರು ಪಾಲ್ಗೊಂಡರು.ಪೇಟೆ ರಾಮ ಮಂದಿರದಲ್ಲಿ ಬೆಳಗ್ಗೆಯಿಂದಲೇ ತುಳಸಿ, ವೀಳ್ಯದೆಲೆ, ಹೂ ಮತ್ತು ಹಣ್ಣನ್ನು ಅಲಂಕಾರಕ್ಕೆ ಭಕ್ತರು ಗುಡಿಗೆ ಸಲ್ಲಿಸಿದರು. ಸೀತಾ, ಲಕ್ಷ್ಮಣ, ಆಂಜನೇಯ ಸಮೇತ ಶ್ರೀರಾಮನಿಗೆ ಪಂಚಾಮೃತಾಭಿಷೇಕ, ಅಷ್ಟೋತ್ತರ ಪೂಜೆ ನಡೆಯಿತು. ದೇವಾಲಯಗಳಂತೆ ಮನೆಯಲ್ಲಿಯೂ ರಾಮನವಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಪಾನಕ ಮಜ್ಜಿಗೆ ಹಾಗೂ ಕೋಸಂಬರಿ ಮಾಡಿ, ದೇವರಿಗೆ ನೆವೆದ್ಯ ಸಮರ್ಪಣೆ ಮಾಡಿ ರಾಮಜಪ ಸೇರಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ ಮೂಲಕ ಜನ ಅದ್ದೂರಿಯಾಗಿಯೇ ರಾಮನವಮಿ ಆಚರಣೆ ಮಾಡಿದರು.ಸುಂಟಿಕೊಪ್ಪ ವರದಿ:
ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಕೋದಂಡ ರಾಮ ದೇವಾಲಯದಲ್ಲಿ ಬುಧವಾರ ಶ್ರದ್ಧಾಭಕ್ತಿಯಿಂದ ರಾಮನವಮಿ ಆಚರಿಸಲಾಯಿತು.ಕೊದಂಡ ರಾಮ ಮಂದಿರವನ್ನು ಕೆಸರಿ ಬಣದ ಬಂಟಿಗ್ಸ್, ರಾಮನ ಬಾರಿ ಗಾತ್ರದ ಪ್ಲೆಕ್ಸ್, ವಿದ್ಯುತ್ ದೀಪ, ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು.
ಕೋದಂಡ ರಾಮ ಮಂದಿರದಲ್ಲಿ ಬೆಳಗ್ಗೆ ರಾಮ,ಸೀತೆ, ಲಕ್ಷ್ಮಣ, ಆಂಜನೇಯ ಸ್ವಾಮಿಗೆ ಬೆಳ್ಳಿಯ ಕವಚ ಅಳವಡಿಸಿ ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಿ ಪೂಜಾ ಕೈಂಕರ್ಯವನ್ನು ದೇವಾಲಯದ ಮುಖ್ಯ ಅರ್ಚಕ ಜಯಂತ್ ಭಟ್ ನೇತೃತ್ವದಲ್ಲಿ ನೆರವೇರಿಸಿದರು.ನಂತರ ರಾಮನಿಗೆ ಪಂಚಾಮೃತ ಅಭಿಷೇಕ, ರಾಮತಾರಕ ಹೋಮ ನಡೆದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಹಾಮಂಗಳಾರತಿ 1 ಗಂಟೆಗೆ ತೀರ್ಥ ಪ್ರಸಾದ ವಿತರಿಸಲಾಯಿತು. ನಂತರ ನೆರೆದಿದ್ದ ಭಕ್ತರಿಗೆ ಪಾನಕ, ಕೋಸಂಬರಿ, ಪಾಯಸ ರೂಪದಲ್ಲಿ ಪ್ರಸಾದ ವಿತರಿಸಲಾಯಿತು.
ದಿನದ ಪೂಜಾ ವಿಧಿ ವಿಧಾನಗಳನ್ನು ಅರ್ಚಕರಾದ ಗಣೇಶ್ ಉಪಾಧ್ಯಯ, ಮಂಜುನಾಥ್ ಭಟ್, ಮಂಜುನಾಥ್ ಉಡುಪ,ಗಣೇಶ್ ಭಟ್ ನೆರವೇರಿಸಿದರು.ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಘ್ನೇಶ್, ಪದಾಧಿಕಾರಿಗಳು, ಗೌರಿ ಗಣೇಶೋತ್ಸವ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಬಿ.ಎಂ.ಸುರೇಶ್, ನಿಕಟಪೂರ್ವ ಕಾರ್ಯದರ್ಶಿ ಸುರೇಶ್ ಗೋಪಿ, ಮುಖಂಡರಾದ ಪಿ.ಆರ್.ಸುನಿಲ್ಕುಮಾರ್, ಧನು ಕಾವೇರಪ್ಪ, ಶಾಂತರಾಮ್ ಕಾಮತ್, ರಾಮ ಸೇವಾ ಸಮಿತಿಯ ಅಶೋಕ್ ಶೇಟ್, ಪ್ರೀತಂ ಪ್ರಭಾಕರ್, ವಿಜಯ ಮತ್ತಿತರರು ಇದ್ದರು.