ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಅನಾಥ ಮಕ್ಕಳಿಗೂ ಜಾತಿ ಪ್ರಮಾಣ ಪತ್ರ ನೀಡಲು ಅನುಕೂಲವಾಗುವಂತಹ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿ, ಅನಾಥರ ಪ್ರತಿನಿಧಿಯಾಗಿ ‘ಕುಂದಾಪುರ ನಮ್ಮಭೂಮಿ’ಯ ರಾಮಾಂಜಿ ಅವರು ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನಿಕಟಪೂರ್ವ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರ ಮೂಲಕ ಮನವಿ ಸಲ್ಲಿಸಿದರು.ಸಮಾಜದಲ್ಲಿ ಅನಾಥರಾಗಿರುವ ಸಾಕಷ್ಟು ಮಂದಿ ಮಕ್ಕಳು ಜಾತಿ ವಿಷಯದಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಜಂಟಿಯಾಗಿ ನೀಡಲಾಗುತ್ತದೆ. ಶಿಕ್ಷಣ, ಉದ್ಯೋಗ ಸಹಿತ ಹಲವಾರು ಅಗತ್ಯಗಳಿಗೆ ಜಾತಿ ಪ್ರಮಾಣ ಪತ್ರ ಅತ್ಯಗತ್ಯವಾಗಿದೆ. ಅನಾಥ ಮಕ್ಕಳು ಶಿಕ್ಷಣ, ಉದ್ಯೋಗಕ್ಕಾಗಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ, ತಹಸೀಲ್ದಾರ್ ಅಥವಾ ಇತರ ಅಧಿಕಾರಿಗಳು ಜಾತಿಯನ್ನು ದೃಢಪಡಿಸುವ ದಾಖಲೆ ಕೇಳುತ್ತಾರೆ. ಆದರೆ ಅನಾಥ ಮಕ್ಕಳಿಗೆ ತಮ್ಮ ಹುಟ್ಟಿದ ಮೂಲವೇ ಗೊತ್ತಿಲ್ಲದಿರುವಾಗ ತಮ್ಮ ಜಾತಿಯ ಪರಿಕಲ್ಪನೆಯೂ ಅವರಿಗಿಲ್ಲದಿರುವಾಗ ದಾಖಲೆಗಳನ್ನು ಎಲ್ಲಿಂದ ಒದಗಿಸಬೇಕು ಎಂದವರು ಮನವಿಯಲ್ಲಿ ಹೇಳಿದ್ದಾರೆ.
ಆದುದರಿಂದ ಅನಾಥ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ಒದಗಿಸಲು ಸರ್ಕಾರ ಮಟ್ಟದಲ್ಲಿ ವಿಶೇಷ ಕ್ರಮವನ್ನು ತೆಗೆದುಕೊಳ್ಳಬೇಕು. ಅನಾಥ ಮಕ್ಕಳ ವಸತಿ, ಶಿಕ್ಷಣ, ಉದ್ಯೋಗ, ಮೀಸಲಾತಿ ಮೊದಲಾದ ವಿಷಯಗಳಲ್ಲಿ ಸರ್ಕಾರ ಸ್ಪಷ್ಟವಾದ ಶಾಸನಾತ್ಮಕ ನಿರ್ಧಾರ ತೆಗೆದು ತೆಗೆದುಕೊಳ್ಳಬೇಕು. ಅದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.* ಅನಾಥರಿಗೂ ಮೀಸಲಾತಿಗೆ ಶಿಫಾರಸುಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ತಾನು ಸರ್ಕಾರಕ್ಕೆ ಸಲ್ಲಿಸಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಅಧ್ಯಯನ ವರದಿಯಲ್ಲಿ, ಹೆತ್ತವರಿಲ್ಲದ ಅನಾಥ ಮಕ್ಕಳನ್ನು ಹಿಂದುಳಿದ ವರ್ಗವೆಂದು ಪರಿಗಣಿಸಬೇಕು. ಅವರ ಹೆತ್ತವರ ಜಾತಿ ತಿಳಿಯದಿದ್ದಲ್ಲಿ ಅವರನ್ನು ಅನಾಥರೆಂದೇ ಪ್ರಮಾಣಪತ್ರ ನೀಡಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿರುವುದಾಗಿ ತಿಳಿಸಿದರು.