ಸಾರಾಂಶ
ಕೊಪ್ಪಳ: ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಮಹಾಗ್ರಂಥವು ಇಡೀ ಮನುಕುಲಕ್ಕೆ ನೀಡಿದ ಅದ್ಭುತ ಮಹಾಕಾವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜರುಗಿದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಗೆ ಮಹಾನ್ ಯುಗಪುರುಷರು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಮಹಾಪುರುಷರ ಇತಿಹಾಸದ ಬಗ್ಗೆ ತಿಳಿಸುವುದಕ್ಕಾಗಿ ಸರ್ಕಾರದಿಂದ ಮಹರ್ಷಿ ವಾಲ್ಮೀಕಿ ರವರಂತವರ ಮಹನೀಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಸಮಾಜದ ಎಲ್ಲ ಬಂಧುಗಳ ಒಂದು ಕಡೆ ಸೇರಬೇಕು. ಇತಿಹಾಸದ ಮಹಾ ಪುರುಷರನ್ನು ನೆನಪು ಮಾಡಿಕೊಳ್ಳಬೇಕು ಮತ್ತು ಅವರು ಮಾಡಿದ ಕಾರ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ದೃಷ್ಟಿ ಕೋನ ಇಟ್ಟುಕೊಂಡು ಮಹಾಪುರುಷರ ಜಯಂತಿ ಆಚರಿಸಲಾಗುತ್ತದೆ ಎಂದರು.ನಮ್ಮ ಜಿಲ್ಲೆಯಲ್ಲಿ ನಾಯಕ ಸಮಾಜದ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಜಿಲ್ಲೆಯಲ್ಲಿನ ನಾಯಕ ಸಮಾಜದ ವಿದ್ಯಾರ್ಥಿಗಳಿಗೆ ಸ್ವಲ್ಪ ಹಾಸ್ಟೆಲ್ ಕೊರತೆ ಇದೆ, ಅದನ್ನು ಆದಷ್ಟು ಬೇಗನೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಕೊರತೆ ನೀಗಿಸುವ ಕೆಲಸ ಮಾಡುತ್ತೇನೆ ಎಂದರು.
ಏಕಲವ್ಯ ವಸತಿ ಶಾಲೆ ಚಾಮರಾಜನಗರದಲ್ಲಿ ಮಾತ್ರ ಇದೆ, ಹಾಗಾಗಿ ಕರ್ನಾಟಕದಲ್ಲಿ ಅತೀ ಹೆಚ್ಚು ವಾಲ್ಮೀಕಿ ಜನಾಂಗದರು ಇರುವ ನಮ್ಮ ಕೊಪ್ಪಳ ಜಿಲ್ಲೆಗೂ ಕೂಡ, ಏಕಲವ್ಯ ವಸತಿ ಶಾಲೆ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ನಮ್ಮ ಜಿಲ್ಲೆಗೆ ಆಗಬೇಕಾಗಿದ್ದು, ಅದಕ್ಕೂ ಕೂಡಾ ನಾನು ಪ್ರಸ್ತಾವನೆ ನೀಡಿದ್ದೇನೆ. ಇದಕ್ಕೆ ಮುಖ್ಯಮಂತ್ರಿಗಳು ಇನ್ನು ಎರಡೂ-ಮೂರು ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಮಾಡುವುದಿದೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಕೂಡ ಇದೆ ಎನ್ನುವಂತ ಮಾತನ್ನು ಹೇಳಿದ್ದಾರೆ ಎಂದರು.ಕೊಪ್ಪಳ ನಗರದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಅವಶ್ಯಕತೆ ಇದ್ದು, ನಗರದಲ್ಲಿ ಸಂಚರಿಸುವಾಗ ಇಂತಹ ಪುಣ್ಯಾತ್ಮರ ದರ್ಶನ ಆಗಬೇಕು. ಅದಕ್ಕಾಗಿ ನಾನು ಈಗಾಗಲೆ ಶಾಸಕರಿಗೆ ಮತ್ತು ನಗರಸಭೆ ಅಧ್ಯಕ್ಷರಿಗೆ ಹೇಳಿದ್ದೇನೆ. ಮೂರ್ತಿ ಸ್ಥಾಪನೆಗಾಗಿ ಎರಡು ಸ್ಥಳ ಗುರುತಿಸಲಾಗಿದೆ ಒಂದು ನಗರ ಸಭೆಯ ಸ್ಥಳ ಇನ್ನೊಂದು ಎಲ್.ಐ.ಸಿ ಆಫೀಸ್ ಹತ್ತಿರದ ಸ್ಥಳ ತೋರಿಸಿದ್ದಾರೆ. ಇದರಲ್ಲಿ ಯಾವುದಾದರೂ ಜಾಗ ನಿಗದಿ ಮಾಡಿ,ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಮುಂದಿನ ಜಯಂತಿಯನ್ನು ಮೂರ್ತಿ ಸಮೇತ ಆಚರಣೆ ಮಾಡುವಂತೆ ಕಾರ್ಯ ಮಾಡೋಣ. ಕನಕಗಿರಿ ಮತ್ತು ಕಾರಟಗಿ ತಾಲೂಕುಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡುವುದಕ್ಕಾಗಿ ಎರಡು ತಾಲೂಕುಗಳಿಗೆ ತಲಾ ₹2ಕೋಟಿ ನೀಡಿದ್ದೇನೆ ಎಂದು ಹೇಳಿದರು.
ಎಂ.ಎಲ್.ಸಿ ಹೇಮಲತಾ ನಾಯಕ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದಿಂದ ನಾವು ಸಾಕಷ್ಟು ಪ್ರತಿ-ಭ್ರಾತೃತ್ವ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಮಹತ್ವದ ಗ್ರಂಥ ನೀಡಿದ ಕೀರ್ತಿ ನಮ್ಮ ವಾಲ್ಮೀಕಿ ಸಮಾಜಕ್ಕೆ ಸಲ್ಲುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಅಧ್ಯಕ್ಷ ಅಮ್ಜದ ಪಟೇಲ್ ಸಿ ಮಾತನಾಡಿ, ಮಹರ್ಷಿ ವಾಲ್ಮೀಕಿ ನ್ಯಾಯ, ಧರ್ಮ ಮತ್ತು ಮಾನವೀಯತೆಯ ಮಮಕಾರ ತಿಳಿಸುವ ಒಂದು ಮಹತ್ವದ ಗ್ರಂಥ ಎಂದರು.
ವಿಶೇಷ ಉಪನ್ಯಾಸ ನೀಡಿದ ಡಾ. ಗವಿಸಿದ್ದಪ್ಪ ಮುತ್ತಾಳ ರಾಮಾಯಣದಲ್ಲಿನ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಒಂದು ಸಾರ್ಥಕತೆ ಸಿಗುತ್ತದೆ ಎಂದರು.ಈ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪದವಿ ಹಾಗೂ ಕ್ರೀಡೆ ಸೇರಿದಂತೆ ಮುಂತಾದ ಕಾರ್ಯಗಳಲ್ಲಿ ಸಾಧನೆ ಮಾಡಿದ ಪರಿಶಿಷ್ಟ ಪಂಗಡ ಸಮಾಜದ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ಪ್ರತಿ ವರ್ಷ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಪರಿಶಿಷ್ಟ ಪಂಗಡದವರ ಸಾಮಾಜಿಕ ಕಾರ್ಯ ಗುರುತಿಸಿ ನೀಡುವ ₹50 ಸಾವಿರ ನಗದು ಮತ್ತು ಗೌರವ ಸನ್ಮಾನಕ್ಕೆ ಸರಸ್ವತಿ ನಾಯಕ ಭಾಜನರಾದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಡ್ಡಿ ಶ್ರೀನಿವಾಸ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೋಗಲದ, ಕೊಪ್ಪಳ ತಹಸೀಲ್ದಾರ ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲಾ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಹಾಗೂ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ, ಧರ್ಮದರ್ಶಿ ರಾಮಣ್ಣ ಕಲ್ಲನವರ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಹನುಮಂತಪ್ಪ ನಾಯಕ ಇತರರಿದ್ದರು.ಮೆರವಣಿಗೆ:
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಕೊಪ್ಪಳ ನಗರದ ಸಿರಸಪ್ಪಯ್ಯನ ಮಠದಿಂದ ಸಾಹಿತ್ಯ ಭವನದವರೆಗೆ ನಡೆಯುವ ಮೆರವಣಿಗೆಗೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಗಂಗಪ್ಪ ಸೊಗಲದ ಸೇರಿದಂತೆ ಇತರೆ ಅಧಿಕಾರಿಗಳು, ಜನಪ್ರತಿನಿಧಿಗಳಿದ್ದರು.