ಬಾಳೆಹೊನ್ನೂರುಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಹಿಂದೂ ಸಂಸ್ಕೃತಿ ಹಾಗೂ ಇಸ್ಲಾಂ ಧರ್ಮದ ಬಗ್ಗೆ ನೀಡಿದ ಹೇಳಿಕೆಗೆ ವೀರಶೈವ ಪಂಚ ಪೀಠಗಳ ಒಕ್ಕೂಟ ವ್ಯವಸ್ಥೆ ಸಂಚಾಲಕರೂ ಆದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಸಂಯಮದಿಂದ ಮಾತನಾಡಲಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಹಿಂದೂ ಸಂಸ್ಕೃತಿ ಹಾಗೂ ಇಸ್ಲಾಂ ಧರ್ಮದ ಬಗ್ಗೆ ನೀಡಿದ ಹೇಳಿಕೆಗೆ ವೀರಶೈವ ಪಂಚ ಪೀಠಗಳ ಒಕ್ಕೂಟ ವ್ಯವಸ್ಥೆ ಸಂಚಾಲಕರೂ ಆದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಚಿವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಪ್ರಜ್ಞಾವಂತ ಉನ್ನತ ಶಿಕ್ಷಣ ಸಚಿವರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸಂಯಮದಿಂದ ಮಾತನಾಡಬೇಕು ಎಂದು ಬುಧವಾರ ರಂಭಾಪುರಿ ಪೀಠದಲ್ಲಿ ಸುದ್ದಿಗಾರರಿಗೆ ಹೇಳಿದರು.

ಯಾವುದೇ ಧರ್ಮವನ್ನು ಗೌರವಿಸುವುದು ತಪ್ಪಲ್ಲ. ಆದರೆ ಒಂದು ಧರ್ಮ ಮತ್ತೊಂದು ಧರ್ಮದೊಂದಿಗೆ ಹೋಲಿಸಿ ಶ್ರೇಷ್ಠತೆ ಮಾನ ದಂಡದಲ್ಲಿ ಮಾತನಾಡುವುದು ಸಮಾಜದಲ್ಲಿ ಅನಗತ್ಯ ಮತ್ತು ಭಾವನಾತ್ಮಕ ಗೊಂದಲಕ್ಕೆ ಕಾರಣ. ಭಾರತದ ವೈಶಿಷ್ಠ್ಯವೇ ಸರ್ವ ಧರ್ಮ ಸಮಭಾವ, ಪರಸ್ಪರ ಗೌರವ, ಸಹಬಾಳ್ವೆಯಿಂದ ಇರುವುದು. ಸರ್ವೇ ಜನಾಃ ಸುಖಿನೋ ಭವಂತು ಎಂಬ ವಿಶಾಲ ಮಾನವೀಯ ದೃಷ್ಟಿಕೋನ ಪ್ರತಿಪಾದಿಸಿದೆ.

ಹಿಂದೂ ಸಂಸ್ಕೃತಿ ಕುರಿತು ಮಾತನಾಡುವಾಗ ಅದರ ಪ್ರಾಚೀನತೆ, ವೈಚಾರಿಕ ಶ್ರೀಮಂತಿಕೆ ಹಾಗೂ ಮಾನವೀಯ ಮೌಲ್ಯ, ಸಹಿಷ್ಣುತೆಯನ್ನು ಗೌರವದಿಂದ ಕಾಣುವುದು. ಹೇಳಿಕೆ ವಿರೋಧಿಸುವ ನೆಪದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಮಾತನಾಡುವುದೂ ಸರಿಯಲ್ಲ.

ವಿರೋಧ ಇರಬೇಕಾದುದು ಅವರ ಹೇಳಿಕೆ ಬಗ್ಗೆ ಹೊರತು, ಯಾವುದೇ ಸಮುದಾಯದ ವಿರುದ್ಧ ಅಲ್ಲ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿದ್ಯಾರ್ಥಿಗಳು ಮತ್ತು ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿದ್ದಾರೆ. ಅವರ ಹೇಳಿಕೆಗಳು ಸಮಾಜದಲ್ಲಿ ಏಕತೆ ಶಾಂತಿ ಪರಸ್ಪರ ಗೌರವ ಬೆಳೆಸು ವಂತಿರಬೇಕು.

ಯಾವುದೇ ಧರ್ಮವನ್ನು ಮತ್ತೊಂದು ಧರ್ಮಕ್ಕಿಂತ ಮೇಲಾಗಿ ಅಥವಾ ಕೀಳಾಗಿ ಕಾಣುವುದಕ್ಕಿಂತ ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವ ನಿಲುವು ಸ್ಪಷ್ಟಪಡಿಸಬೇಕು.

ಅವರವರ ಧರ್ಮ ಅವರಿಗೆ ಶ್ರೇಷ್ಠ. ಹಿಂದೂ ಸಂಸ್ಕೃತಿ ಗೌರವ ಎತ್ತಿ ಹಿಡಿಯುವುದು ಮತ್ತೊಂದು ಧರ್ಮದ ವಿರೋಧವಲ್ಲ. ಅದೇ ರೀತಿ ಇತರ ಧರ್ಮವನ್ನು ಗೌರವಿಸುವುದು ಹಿಂದೂ ಸಂಸ್ಕೃತಿಯನ್ನು ಕೀಳಾಗಿ ಕಾಣುವುದಲ್ಲ. ಧರ್ಮಗಳ ನಡುವೆ ಸಂಘರ್ಷವಲ್ಲ. ಧರ್ಮಗಳ ನಡುವೆ ಸಂವಾದ ಬೇಕು. ಸಮುದಾಯಗಳ ನಡುವೆ ದ್ವೇಷವಲ್ಲ. ಪರಸ್ಪರ ಗೌರವ ಬೇಕು. ಸಚಿವರಿಂದ ವಿಭಜನೆಯ ಮಾತಲ್ಲ. ಸಮಾಜ ಒಗ್ಗೂಡಿಸುವ ಮಾತು ನಿರೀಕ್ಷಿಸುತ್ತೇವೆ ಎಂದು ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶೀ ಜಗದ್ಗುರುಗಳ ಪರವಾಗಿ ಶ್ರೀ ರಂಭಾಪುರಿ ಜಗದ್ಗುರು ತಿಳಿಸಿದ್ದಾರೆ.೦೨ಬಿಹೆಚ್‌ಆರ್ ೭: ರಂಭಾಪುರಿ ಶ್ರೀ