ಪಿಎಂ ಸ್ವ-ನಿಧಿ ಯೋಜನೆಯಡಿ ಅರ್ಥಿಕ ಅಭಿವೃದ್ಧಿ ಹೊಂದಿ
KannadaprabhaNewsNetwork | Published : Oct 06 2023, 01:12 AM IST
ಪಿಎಂ ಸ್ವ-ನಿಧಿ ಯೋಜನೆಯಡಿ ಅರ್ಥಿಕ ಅಭಿವೃದ್ಧಿ ಹೊಂದಿ
ಸಾರಾಂಶ
ಕೇಂದ್ರ ಸರ್ಕಾರದ ಪಿಎಂ ಸ್ವ-ನಿಧಿಯಿಂದ ಸಮ್ಮಾನ್ ಅನುದಾನದ 8 ಯೋಜನೆಯಡಿ ಪತ್ರಿಕಾ ವಿತರಕರು ನೋಂದಣಿ ಮಾಡಿಸಿಕೊಂಡು ಸಾಲ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಮಾಜಿ ಸಚಿವ ಹಾಗೂ ಸ್ವನಿಧಿ ಸಮ್ಮಾನ್ ಯೋಜನೆಯ ರಾಜ್ಯ ಸಂಚಾಲಕ ಎಸ್.ಎ. ರಾಮದಾಸ್ ತಿಳಿಸಿದರು
ಚಾಮರಾಜನಗರ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಸಭೆ | ಪತ್ರಿಕಾ ವಿತರಕರಿಗೆ ರಾಮದಾಸ್ ಕರೆ ಕನ್ನಡಪ್ರಭ ವಾರ್ತೆ ಚಾಮರಾಜನಗರ ಕೇಂದ್ರ ಸರ್ಕಾರದ ಪಿಎಂ ಸ್ವ-ನಿಧಿಯಿಂದ ಸಮ್ಮಾನ್ ಅನುದಾನದ 8 ಯೋಜನೆಯಡಿ ಪತ್ರಿಕಾ ವಿತರಕರು ನೋಂದಣಿ ಮಾಡಿಸಿಕೊಂಡು ಸಾಲ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಮಾಜಿ ಸಚಿವ ಹಾಗೂ ಸ್ವನಿಧಿ ಸಮ್ಮಾನ್ ಯೋಜನೆಯ ರಾಜ್ಯ ಸಂಚಾಲಕ ಎಸ್.ಎ. ರಾಮದಾಸ್ ತಿಳಿಸಿದರು. ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ನಡೆದ ಪಿ.ಎಂ. ಸ್ವ-ನಿಧಿ ಸಮ್ಮಾನ್ ಯೋಜನೆಯ ಕುರಿತು ಪತ್ರಿಕಾ ಏಜೆಂಟರು ಮತ್ತು ವಿತರಕರನ್ನು ನೋಂದಾಯಿಸಿ, ಕೇಂದ್ರ ಸರ್ಕಾರದ ಯೋಜನೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಪತ್ರಿಕಾ ಏಜೆಂಟರ್ಗಳು, ವಿತರಕರು ಸಹ ಅಸಂಘಟಿತ ಕಾರ್ಮಿಕ ವಲಯಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಇದುವರೆಗೆ ಯಾವುದೇ ಯೋಜನೆಗಳಿಗೆ ಇವರನ್ನು ಪರಿಗಣಿಸುತ್ತಿರಲಿಲ್ಲ. ಆದರೆ, ಮನೆ ಮನೆಗಳಿಗೆ ಪತ್ರಿಕೆಗಳನ್ನು ಮಳೆ, ಗಾಳಿ ಚಳಿ ಎನ್ನದೇ ಮುಂಜಾನೆ ತಲುಪಿಸುವ ಕಾಯಕವನ್ನು ಮಾಡುತ್ತಿರುವವರ ವೃತ್ತಿ ಬದುಕು ಸಹ ಉಜ್ವಲಗೊಳ್ಳಬೇಕು. ಅವರಿಗೆ ಪಿಎಂ ಸ್ವ-ನಿಧಿ ಯೋಜನೆ ಅನ್ವಯವಾಗುವಂತೆ ಮಾಡಲು ಶ್ರಮ ವಹಿಸಿದ್ದೇನೆ’ ಎಂದು ಹೇಳಿದರು. ರಾಜ್ಯಾದ್ಯಂತ ಈ ಯೋಜನೆಯ ಸವಲತ್ತುಗಳನ್ನು ತಲುಪಿಸುವ ಮತ್ತು ಬ್ಯಾಂಕ್, ಆಯಾ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕ ಹೊಂದಿ ಎಲ್ಲರೂ ಸಹ ಈ ಯೋಜನೆಯ ಫಲಾನುಭವಿಗಳಾಗಬೇಕೆಂಬುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿರುವ ಪತ್ರಿಕಾ ವಿತರಕರು, ನಂದಿನಿ ಹಾಲು ಮಾರಾಟಗಾರರು, ಬೀದಿ ಬದಿ ವ್ಯಾಪಾರಿಗಳನ್ನು ಸಂಪರ್ಕ ಮಾಡಿ, ಅವರಿಗೆ ಈ ಯೊಜನೆ ಬಗ್ಗೆ ಮನವರಿಕೆ ಮಾಡಲಾಗುವುದು. ಅ.7 ರಂದು ಎಲ್ಲರೂ ನೊಂದಾಯಿಸುವ ಮೂಲಕ ಮೊದಲ ಹಂತದ 10 ಸಾವಿರ ರು.ಗಳ ಸಾಲ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕ ಎಸ್.ಎ. ರಾಮದಾಸ್ ಅವರನ್ನು ಜಿಲ್ಲಾ ಒಕ್ಕೂಟದ ಪರವಾಗಿ ಶಾಲು ಹೊದಿಸಿ, ಹಾರ ಹಾಕಿ, ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು. ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಜಿ. ನಾರಾಯಣ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಜಿ. ನಾಗಶ್ರೀಪ್ರತಾಪ್, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಸಿ. ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಎನ್. ಅಕ್ಷಯ್, ಗೌರವ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ದೇಮಹಳ್ಳಿ ಶಿವಕುಮಾರ್, ಸಹ ಕಾರ್ಯದರ್ಶಿ ಶಿವಲಿಂಗಮೂರ್ತಿ, ನಿರ್ದೇಶಕರಾದ ರೇಣುಕೇಶ್, ಎಂ. ಲಿಂಗಪ್ಪ, ನವೀನ್, ಬದನಗುಪ್ಪೆ ಮಲ್ಲಣ್ಣ, ಶೇಖರಪ್ಪ, ಬಸವರಾಜು, ಶಿವಣ್ಣ, ರಾಜಣ್ಣ, ಸಿದ್ದು ಇದ್ದರು. 10 ಲಕ್ಷ ರು.ವರೆಗೆ ಸಾಲ ಪ್ರಧಾನ ಮಂತ್ರಿಗಳು 8 ಅಂಶಗಳನ್ನು ಒಳಗೊಂಡು ಯೋಜನೆಯನ್ನು ಜಾರಿ ಮಾಡಿದ್ದು, ಪಿಎಂ ಸ್ವ-ನಿಧಿ ಸಮ್ಮಾನ್ ಯೋಜನೆಯಲ್ಲಿ 10 ಸಾವಿರ ರು.ನಿಂದ 10 ಲಕ್ಷ ರು.ವರೆಗೆ ಸಾಲ ಸೌಲಭ್ಯ ದೊರೆಯುತ್ತದೆ. ಅಲ್ಲದೇ, ಪಿಂಚಣಿ ಯೋಜನೆ, ಮಕ್ಕಳ ಮದುವೆಗಾಗಿ ಸಹಾಯಧನ. ಹೆರಿಗೆ ಭತ್ಯೆ, ಮಕ್ಕಳ ಪಾಲನೆ ಪೋಷಣೆ ಭತ್ಯೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಯೋಜನೆ, ಅಪಘಾತ ವಿಮೆ, ಅಂಗವೈಕಲ್ಯತೆಗೆ ಒಳಗಾದರೆ ಚಿಕತ್ಸೆ ವೆಚ್ಚ ಒಳಗೊಂಡ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿ ಮಾಡಿದ್ದಾರೆ ಎಂದು ರಾಮದಾಸ್ ಹೇಳಿದರು. ಚಾಮರಾಜನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ನಡೆದ ಪಿ.ಎಂ. ಸ್ವ-ನಿಧಿ ಸಮ್ಮಾನ್ ಯೋಜನೆಯ ಕುರಿತು ಮಾಜಿ ಸಚಿವ ಹಾಗೂ ಸ್ವನಿಧಿ ಸಮ್ಮಾನ್ ಯೋಜನೆಯ ರಾಜ್ಯ ಸಂಚಾಲಕ ಎಸ್.ಎ.ರಾಮದಾಸ್ ಪತ್ರಿಕಾ ಏಜೆಂಟರು ಮತ್ತು ವಿತರಕರನ್ನು ಭೇಟಿ ಮಾಡಿ ಚರ್ಚಿಸಿದರು.