ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷರಾದ ಕುರುವಂಕ ಕ್ಷೇತ್ರದ ದೇವರಾಜು (ಬೋರೆಗೌಡ) ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣ, ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಇಲಾಖೆ ಚುನಾವಣೆ ನಿಗದಿಗೊಳಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಡಿ.ಕಾಳೇನಹಳ್ಳಿ ಕ್ಷೇತ್ರದಿಂದ ನಿರ್ದೇಶಕನಾಗಿ ಆಯ್ಕೆಯಾಗಿದ್ದ ಡಿ.ಸಿ.ರಂಗಸ್ವಾಮಿ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಧಿಕಾರಿ ಡಿ.ಲೀಲಾರವರು ಡಿ.ಸಿ.ರಂಗಸ್ವಾಮಿಯವರ ಆಯ್ಕೆಯನ್ನು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕು ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿ.ಕಾಳೇನಹಳ್ಳಿ ಕ್ಷೇತ್ರದ ನಿರ್ದೇಶಕ ಡಿ. ಸಿ. ರಂಗಸ್ವಾಮಿಯವರು ಅವಿರೋಧವಾಗಿ ಆಯ್ಕೆಯಾದರು.

ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷರಾದ ಕುರುವಂಕ ಕ್ಷೇತ್ರದ ದೇವರಾಜು (ಬೋರೆಗೌಡ) ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣ, ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಇಲಾಖೆ ಶನಿವಾರದಂದು ಚುನಾವಣೆ ನಿಗದಿಗೊಳಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಡಿ.ಕಾಳೇನಹಳ್ಳಿ ಕ್ಷೇತ್ರದಿಂದ ನಿರ್ದೇಶಕನಾಗಿ ಆಯ್ಕೆಯಾಗಿದ್ದ ಡಿ.ಸಿ.ರಂಗಸ್ವಾಮಿ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಧಿಕಾರಿ ಡಿ.ಲೀಲಾರವರು ಡಿ.ಸಿ.ರಂಗಸ್ವಾಮಿಯವರ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷರನ್ನು ಸಹಕರ ಸಂಘದ ಉಪಾಧ್ಯಕ್ಷ ಸುರೇಶ್(ಬಾಳೆಮಂಡಿ) ಸೇರಿದಂತೆ ಎಲ್ಲ ನಿರ್ದೇಶಕರು, ಅವರ ಬೆಂಬಲಿಗರು, ಹಿತೈಷಿಗಳು ಹಾರ ಹಾಕಿ, ಸಿಹಿ ತಿನ್ನಿಸಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷರಾದ ಡಿ.ಸಿ.ರಂಗಸ್ವಾಮಿ, ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಹಿಂದೆ ಅಧ್ಯಕ್ಷರಾಗಿದ್ದವರೆಲ್ಲ ಸಂಘವನ್ನು ಅಭಿವೃದ್ಧಿಯತ್ತ ಮುನ್ನಡೆಸಿದ್ದಾರೆ. ಅವರೆಲ್ಲರ ಮಾರ್ಗದರ್ಶನ, ಸಲಹೆಯನ್ನು ಪಡೆದು ಸಂಘವನ್ನು ನಡೆಸಿಕೊಂಡು ಹೋಗುವುದರ ಜೊತೆಗೆ ನಮ್ಮ ನಾಯಕರಾದ ಬಾಲಕೃಷ್ಣರವರಿಂದ ಹೆಚ್ಚಿನ ಅನುದಾನ ತಂದು ರೈತರಿಗೆ ಮತ್ತಷ್ಟು ಸಾಲ ನೀಡುವ ಮೂಲಕ ಅವರ ಆರ್ಥಿಕತೆಯನ್ನು ಬಲಗೊಳಿಸಲಾಗುವುದೆಂದರು.

ಕಸಬಾ ಸೊಸೈಟಿಯಲ್ಲಿ ೭.೯೮ ಕೋಟಿ ಬೆಳೆ ಸಾಲ ನೀಡಲಾಗಿದೆ. ಹೈನುಗಾರಿಕೆಗೆ ೬.೭೦ ಲಕ್ಷ, ಮಧ್ಯಮಾವಧಿ ಸಾಲವಾಗಿ ೧.೨೧ ಕೋಟಿ ನೀಡಲಾಗಿದೆ. ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ೧೧೦೧ ರೈತರಿಗೆ ೪.೩೦ಕೋಟಿ ರು. ಸಾಲ ಮನ್ನಾದ ಪ್ರಯೋಜನ ಲಭಿಸಿದೆ. ರೈತರಿಗೆ ಹತ್ತಿರವಾದ ಕಾರ್ಯವನ್ನು ಮಾಡುವ ಮೂಲಕ ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನ ಕರುಣಿಸಿರುವ ಕ್ಷೇತ್ರದ ಶಾಸಕ ಸಿ.ಎನ.ಬಾಲಕೃಷ್ಣರವರು, ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡರಿಗೆ ಕೀರ್ತಿ ತರುವುದಾಗಿ ತಿಳಿಸಿದರು.

ಈ ವೇಳೆ ಇದ್ದ ಸೊಸೈಟಿ ನಿರ್ದೇಶಕರುಗಳಾದ ಸುರೇಶ್ ಬಾಳೆಮಂಡಿ, ಕೆ.ಎಸ್.ಮಂಜಪ್ಪ, ಕೆ.ಎನ್.ಬೋರೇಗೌಡ, ಎಂ.ವಿ.ನಂಜುಂಡಸ್ವಾಮಿ, ಬಿ.ಕೆ.ಲತಾ, ಜಿ.ಕೆ.ಮಧು, ಸುನಂದ, ಕಾವೇರಮ್ಮ, ಗೋವಿಂದಯ್ಯ ಸೇರಿ ಮುಖಂಡರಾದ ಆನಂದ್ ಕಾಳೇನಹಳ್ಳಿ, ಎಲೆಕ್ಟ್ರಿಕ್ ಗೋಪಾಲ್, ಮೊಗಣ್ಣ, ವೆಂಕಟೇಶ್, ವಸಂತ್, ಬಳದರೆ ಜಗದೀಶ್, ಶಂಭುಲಿಂಗೇಗೌಡ ಸೇರಿ ಸಿಇಒ ರಮೇಶ್‌ಕುಮಾರ್, ಸಿಬ್ಬಂದಿಯಾದ ಲೋಕೇಶ್, ಮಣಿ, ಗಿರೀಶ್ ಸೇರಿ ಇತರರು ಅಧ್ಯಕ್ಷರನ್ನು ಅಭಿನಂದಿಸಿದರು.