ರಂಗಾಯಣ: 3 ದಿನಗಳ ‘ನಾಟಕ ಅವಲೋಕನ ಕಾರ್ಯಾಗಾರ’

| Published : Oct 23 2024, 12:31 AM IST

ರಂಗಾಯಣ: 3 ದಿನಗಳ ‘ನಾಟಕ ಅವಲೋಕನ ಕಾರ್ಯಾಗಾರ’
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ತಲೆಮಾರಿನ ಯುವಕರು ನಾಟಕ ಪ್ರದರ್ಶನಗಳನ್ನು ಆಸ್ವಾದಿಸಿ, ಆ ಪ್ರದರ್ಶನಗಳ ಬಗ್ಗೆ ವಿಶ್ಲೇಷಿಸಿ, ಅದರ ಒಳನೋಟಗಳನ್ನು ಅಕ್ಷರ ರೂಪದಲ್ಲಿ, ವೀಡಿಯೋ ರೂಪದಲ್ಲಿ ವಿಮರ್ಶಿಸುವ ದಿಸೆಯಲ್ಲಿ ಸೃಜನಶೀಲ ಬರಹಗಾರರನ್ನು ಗುರುತಿಸಿ ಅವರಿಗೆ ನಾಟಕದ ಬಗ್ಗೆ ತಿಳಿಸಿಕೊಡಲು ರಂಗಾಯಣವು ‘ನಾಟಕ ಅವಲೋಕನ ಕಾರ್ಯಾಗಾರ’ ಹಮ್ಮಿಕೊಂಡಿದೆ ಎಂದು ರಂಗಾಯಣದ ನಿರ್ದೇಶಕ ಪ್ರಸನ್ನ ಡಿ. ಸಾಗರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಹೊಸ ತಲೆಮಾರಿನ ಯುವಕರು ನಾಟಕ ಪ್ರದರ್ಶನಗಳನ್ನು ಆಸ್ವಾದಿಸಿ, ಆ ಪ್ರದರ್ಶನಗಳ ಬಗ್ಗೆ ವಿಶ್ಲೇಷಿಸಿ, ಅದರ ಒಳನೋಟಗಳನ್ನು ಅಕ್ಷರ ರೂಪದಲ್ಲಿ, ವೀಡಿಯೋ ರೂಪದಲ್ಲಿ ವಿಮರ್ಶಿಸುವ ದಿಸೆಯಲ್ಲಿ ಸೃಜನಶೀಲ ಬರಹಗಾರರನ್ನು ಗುರುತಿಸಿ ಅವರಿಗೆ ನಾಟಕದ ಬಗ್ಗೆ ತಿಳಿಸಿಕೊಡಲು ರಂಗಾಯಣವು ‘ನಾಟಕ ಅವಲೋಕನ ಕಾರ್ಯಾಗಾರ’ ಹಮ್ಮಿಕೊಂಡಿದೆ ಎಂದು ರಂಗಾಯಣದ ನಿರ್ದೇಶಕ ಪ್ರಸನ್ನ ಡಿ. ಸಾಗರ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೊಸ ಪ್ರೇಕ್ಷಕರು ರಂಗಭೂಮಿಯೆಡೆಗೆ ಬರುವುದೇ ವಿರಳವಾಗಿರುವ ಈ ಸಂದರ್ಭದಲ್ಲಿ ನಾಟಕ ಪ್ರದರ್ಶನಗಳನ್ನು ಹೊಸ ತಲೆಮಾರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.ಯುವಕರ ಬರವಣಿಗೆಗಳಿಗೆ ಇನ್ನೂ ಹೆಚ್ಚು ಬಲ ಕೊಡುವುದೇ ಈ ಕಾರ್ಯಾಗಾರದ ಉದ್ದೇಶ. ಆ ಕಾರಣದಿಂದಾಗಿ ಅ. 24ರಿಂದ 26ರವರೆಗೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಶಿವಮೊಗ್ಗದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ನಾಟಕ ಅವಲೋಕನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಕರ್ನಾಟಕದ ರಂಗಭೂಮಿಯಲ್ಲಿ ನುರಿತ ರಂಗಕರ್ಮಿಗಳು, ರಂಗ ವಿಮರ್ಶಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು ನಾಟಕ ಓದು, ನಾಟಕ ನೋಡುವ ಕ್ರಮ, ರಂಗನೋಟ, ನಾಟ್ಯಧರ್ಮಿ, ರಂಗ ಅವಲೋಕನ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಕಾರ್ಯಾಗಾರವನ್ನು ಅ.24 ರಂದು ಬೆಳಗ್ಗೆ 10ಕ್ಕೆ ಹಿರಿಯ ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ ವಹಿಸುವರು. ಅತಿಥಿಗಳಾಗಿ ರಂಗಕರ್ಮಿಗಳು ಹಾಗೂ ಕಲಾವಿದರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಕೊಟ್ರಪ್ಪ ಹಿರೇಮಾಗಡಿ ಆಗಮಿಸುವರು ಎಂದು ಮಾಹಿತಿ ನೀಡಿದರು.ಅ.26 ರಂದು ಸಂಜೆ 5.30 ಕ್ಕೆ ಸಮಾರೋಪ ನಡೆಯಲಿದ್ದು, ಕಾರ್ಕಳದ ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ ಸಮಾರೋಪ ನುಡಿಗಳನ್ನಾಡಲಿದ್ದಾರೆ. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮಗಳಲ್ಲಿ ರಂಗಾಯಣ ಆಡಳಿತಾಧಿಕಾರಿ ಡಾ.ಎ.ಸಿ. ಶೈಲಜಾ, ನಾಟಕ ಅವಲೋಕನ ಕಾರ್ಯಾಗಾರದ ನಿರ್ದೇಶಕ ಪ್ರೊ. ಮೇಟಿ ಮಲ್ಲಿಕಾರ್ಜುನ, ಕಾರ್ಯಾಗಾರದ ಸಂಚಾಲಕ ಡಾ. ಜಿ.ಆರ್‌. ಲವ ಪಾಲ್ಗೊಳ್ಳುವರು ಎಂದು ವಿವರಿಸಿದರು.

ವಿಚಾರ ಮಂಡನೆ ಮತ್ತು ಸಂವಾದ:

ಅ.24ರಂದು ಬೆಳಗ್ಗೆ 11 ರಿಂದ ‘ನಾಟಕದ ಪ್ರವೇಶ ಮತ್ತು ಸಂವಿಧಾನ’ ವಿಚಾರ ಕುರಿತ ಸಂಪನ್ಮೂಲ ವ್ಯಕ್ತಿಗಳಾಗಿ ರಂಗನಿರ್ದೇಶಕ, ನಾಟಕಗಾರರಾದ ನಟರಾಜ್ ಹೊನ್ನವಳ್ಳಿ ಪಾಲ್ಗೊಳ್ಳುವರು. 12.30 ರಿಂದ 1ರವರೆಗೆ ಶಿಬಿರಾರ್ಥಿಗಳೊಂದಿಗೆ ಸಂವಾದ. ಮಧ್ಯಾಹ್ನ 2 ರಿಂದ 3.30 ರವರೆಗೆ ‘ರಂಗ ಪಠ್ಯಗಳ ವಿಶ್ಲೇಷಣೆ ಹಾಗೂ ವಿಸ್ತರಣೆ’ ಕುರಿತು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಾಹಕ ಕಾಲೇಜಿನ ಪ್ರೊ.ಟಿ. ಅವಿನಾಶ್ ಸಂಪನ್ಮೂಲ ವ್ಯಕ್ತಿಗಳಾಗಿ ವಿಚಾರ ಮಂಡಿಸುವರು. ಮಧ್ಯಾಹ್ನ 3.45 ರಿಂದ ಸಂಜೆ 6ರವರೆಗೆ ಗುಣಮುಖ ನಾಟಕ ಪ್ರದರ್ಶನ ಮತ್ತು ಸಂವಾದವನ್ನು ಪ್ರೊ. ಮೇಟಿ ಮಲ್ಲಿಕಾರ್ಜುನ ನಡೆಸಿಕೊಡುವರು ಎಂದು ತಿಳಿಸಿದರು. ಅ.25ರಂದು ಬೆಳಗ್ಗೆ 10 ರಿಂದ 10.30 ಗುಣಮುಖ ನಾಟಕದ ಕುರಿತು ಮಾತುಕತೆ. 10.40 ರಿಂದ 12.15ರವರೆಗೆ ಬರಹಗಾರ್ತಿ ಪ್ರೀತಿ ನಾಗರಾಜ್‌ರಿಂದ ನಾಟಕ ವಿಶ್ಲೇಷಣೆ, ವಿಮರ್ಶಾತ್ಮಕ ನೋಟ. ಮಧ್ಯಾಹ್ನ 2 ರಿಂದ 3.30 ರವರೆಗೆ ಹಿರಿಯ ರಂಗಕರ್ಮಿ ಹಾಗೂ ರಂಗಾಯನ ಶಿವಮೊಗ್ಗದ ಮಾಜಿ ನಿರ್ದೇಶಕ ಇಕ್ಬಾಲ್‌ರಿಂದ ನಾಟಕದ ಕಟ್ಟುವಿಕೆಯಲ್ಲಿ ನಿರ್ದೇಶಕ ಹಾಗೂ ನೇಪಥ್ಯ ಕುರಿತು ವಿಷಯ ಮಂಡನೆ, 3.45 ರಿಂದ ಸಂಜೆ 6 ಗಂಟೆವರೆಗೆ ಅಗ್ನಿ ಮತ್ತು ಮಳೆ ನಾಟಕ ಪ್ರದರ್ಶನ ಕುರಿತು ಸಂವಾದ ಇರಲಿದೆ ಎಂದರು. ಅ. 26-10-2024 ಬೆಳಗ್ಗೆ 10.45 ರಿಂದ ಮಧ್ಯಾಹ್ನ 12.15 ರವರೆಗೆ ನಾಟಕದ ವಿಶ್ಲೇಷಣೆಯಲ್ಲಿ ಬಹು ಮಾಧ್ಯಮಕಗಳ ಬಳಕೆ ಕುರಿತು ಬೆಂಗಳೂರಿನ ವರ್ಡ್ವೈಸ್ ಲಾಂಗ್ವೇಜ್ ಲ್ಯಾಬ್ಸ್‌ನ ಸಿಇಒ ಅವಿನಾಶ್ ಹೆಗ್ಗೋಡು ವಿಚಾರ ಮಂಡನೆ ಮಾಡುವರು. ಮಧ್ಯಾಹ್ನ 2 ರಿಂದ 3.30 ರವರೆಗೆ ನಾಟಕದ ವಿಷಯ ವಸ್ತುವಿನ ಗ್ರಹಿಕೆ ಕುರಿತು ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ವೆಂಕಟರಮಣ ವಿಚಾರ ಮಂಡಿಸುವರು. ಈ ಎಲ್ಲ ಕಾರ್ಯಕ್ರಮಗಳನ್ನು ಪ್ರೊ. ಮೇಟಿ ಮಲ್ಲಿಕಾರ್ಜುನ ನಡೆಸಿಕೊಡುವರು ಎಂದು ತಿಳಿಸಿದರು.ಗೋಷ್ಟಿಯಲ್ಲಿ ರಂಗಾಯಣ ಆಡಳಿತಾಧಿಕಾರಿ ಡಾ.ಎ.ಸಿ. ಶೈಲಜಾ , ಡಾ.ಜಿ.ಆರ್‌. ಲವ ಉಪಸ್ಥಿತರಿದ್ದರು.