’ಸ್ವೀಪ್’ ಸಮಿತಿ ಹಾಗೂ ಜಿಲ್ಲಾಡಳಿತದಿಂದ ಎಸ್ಐಆರ್ ಜಾಗೃತಿಗೆ ರಂಗೋಲಿ ಸ್ಪರ್ಧೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮತದಾರ ಪಟ್ಟಿ ತೀವ್ರ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಡಿ ಮತದಾರರು ತಮ್ಮ ಎನುಮರೇಷನ್ ಫಾರಂ ( ಗಣತಿ ನಮೂನೆ) ಅರ್ಜಿಗಳನ್ನು ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಬಿಎಲ್ಒಗಳಿಗೆ ವಾಪಾಸ್ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಕೋರಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ’ಸ್ವೀಪ್’ ಸಮಿತಿ ಹಾಗೂ ಜಿಲ್ಲಾಡಳಿತದಿಂದ ಎಸ್ಐಆರ್ ಜಾಗೃತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆ ವೀಕ್ಷಿಸಿ ಮಾತನಾಡಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಜೂ.30 ರಿಂದ ಪ್ರಾರಂಭಗೊಂಡಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಹತ್ತಿರವಿರುವುದರಿಂದ ಇನ್ನೂ ಸುಮಾರು ಶೇ.10 ರಷ್ಟು ಬರಬೇಕಿರುವ ಗಣತಿ ನಮೂನೆಗಳನ್ನು ಮತದಾರರು ಶೀಘ್ರವೇ ನೀಡಬೇಕು.ಜಿಲ್ಲೆಯಲ್ಲಿ ಇದುವರೆಗೆ ಶೇ.87 ರಷ್ಟು ಗಣತಿ ನಮೂನೆಗಳು ವಾಪಸ್ ಸಂಗ್ರಹಿಸಿ, ಡಿಜಿಟಲೈಸ್ ಮಾಡಿ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿದೆ. ಶೇ.6ರಷ್ಟು ‘ಎಎಸ್ಟಿಡಿ’ ಡ್ರಾಫ್ಟ್ ಗುರುತಿಸಲಾಗಿದೆ. ಇನ್ನು ಶೇ.7ರಿಂದ 8ರಷ್ಟು ಕಾರ್ಯ ಬಾಕಿಯಿದೆ ಎಂದರು.ಸಾರ್ವಜನಿಕರಿಗೆ ಎಸ್ಐಆರ್ ಕುರಿತು ಅರಿವು ಮೂಡಿಸಲು ಜಿಪಂ ಸಿಇಒ ನೇತೃತ್ವದಲ್ಲಿ ಸ್ವೀಪ್ ಸಮಿತಿಯಿಂದ ರಂಗೋಲಿ ಸ್ಪರ್ಧೆ ಆಯೋಜಿಸ ಲಾಗಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ನಿರ್ಮಿತಿ ಕೇಂದ್ರದ ಅಧಿಕಾರಿ ಗಂಗಾಧರ್
ಇದ್ದರು.
----ಬಾಕ್ಸ್----
ಜಂಟಿ ‘ಗ್ರೌಂಡ್ ಟ್ರೂಥಿಂಗ್’ ಸರ್ವೇ: ಡಿಸಿಕಡೂರು, ಸಖರಾಯಪಟ್ಟಣ, ಲಕ್ಕವಳ್ಳಿ, ಬೀರೂರು ಸೇರಿದಂತೆ ವಿವಿಧ ಭಾಗಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ರೈತರ ಜಮೀನುಗಳನ್ನು ಪರಿಶೀಲಿಸಿದೆ. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜಂಟಿ ತಂಡ ಬೆಳೆ ಒಣಗುತ್ತಿರುವ ಮತ್ತು ಬಿತ್ತನೆಯಾಗದ ಜಮೀನುಗಳಿಗೆ ನೇರವಾಗಿ ತೆರಳಿ ‘ಗ್ರೌಂಡ್ ಟ್ರೂಥಿಂಗ್’ ಸರ್ವೇ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದರು.
ಜಿಲ್ಲೆಯ ಮಳೆ ಕೊರತೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಅಂಕಿ-ಅಂಶಗಳಂತೆ ಶೇ.೪೪ರಷ್ಟು ಮಳೆ ಕೊರತೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಟಾಸ್ಕ್ ಫೋರ್ಸ್ ಅನುದಾನದಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ೩೦ ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನಿದ್ದು, ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರಗಳು ಹಾಗೂ ಕಡೂರು-ಬೀರೂರು ಭಾಗದಲ್ಲಿ ಮೇವು ಬಿತ್ತನೆಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.ಕಡೂರು ಸೇರಿದಂತೆ ಹೆಚ್ಚು ಮಳೆ ಅಭಾವವಿರುವ ತಾಲೂಕುಗಳ ಮಾಹಿತಿ ಸರ್ಕಾರಕ್ಕೆ ತಲುಪಿದೆ. ರಾಜ್ಯಮಟ್ಟದಲ್ಲಿ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಸಂಪುಟ ಉಪಸಮಿತಿ ನಿಯಮಾವಳಿಗಳಂತೆ ಪರಿಶೀಲಿಸಿ ಬರಪೀಡಿತ ಪ್ರದೇಶ ಘೋಷಣೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ವಿವರಿಸಿದರು.