ಸಾರಾಂಶ
ರಾಣಿಬೆನ್ನೂರು ಕಲಾವಿದರ ಪಾಲಿಗೆ ತವರೂರು ಇದ್ದ ಹಾಗೆ ಎಂದು ಧಾರವಾಡ ರಂಗಾಯಣ ನಿರ್ದೇಶಕ ಹಾಗೂ ರಂಗಭೂಮಿ, ಚಲನಚಿತ್ರ ನಟ ಡಾ. ರಾಜು ತಾಳಿಕೋಟಿ ಹೇಳಿದರು.
ರಾಣಿಬೆನ್ನೂರು: ಪಟ್ಟಣ ಕಲಾವಿದರ ಪಾಲಿಗೆ ತವರೂರು ಇದ್ದ ಹಾಗೆ ಎಂದು ಧಾರವಾಡ ರಂಗಾಯಣ ನಿರ್ದೇಶಕ ಹಾಗೂ ರಂಗಭೂಮಿ, ಚಲನಚಿತ್ರ ನಟ ಡಾ. ರಾಜು ತಾಳಿಕೋಟಿ ಹೇಳಿದರು.
ನಗರದ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಸಂಜೆ ತಾಲೂಕಿನ ಕುಪ್ಪೇಲೂರ ಗ್ರಾಮದ ರಂಗಚೇತನ ಸಂಸ್ಥೆಯ 11ನೇ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ರಂಗ ಸಂಗಮ ವೈಭವ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಗಣ್ಯರಿಗೆ ಅಭಿನಂದನೆ ಹಾಗೂ ರತ್ನ ಮಾಂಗಲ್ಯ ನಾಟಕ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಉತ್ತರ ಕರ್ನಾಟಕ ಭಾಗದಲ್ಲಿ ರಂಗಾಯಣದ ಮೂಲಕ ಕಂದಗಲ್ಲ ಹನುಮಂತರಾಯರ ಪೌರಾಣಿಕ ನಾಟಕಗಳು ಹಾಗೂ ಆತ್ಮ ಚರಿತ್ರೆ ಒಳಗೊಂಡ ರೆಪರೇಟರಿ ನಾಟಕ ಪ್ರದರ್ಶನ ಮಾಡಲು ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು ಇದಕ್ಕೆ ಸರ್ಕಾರ ಕೂಡ ಸಮ್ಮತಿ ನೀಡಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ವಿಕಲಚೇತನರ ಬಾಳಿಗೆ ಬೆಳಕಾಗಿದ್ದ ಪಂಡಿತ ಪುಟ್ಟರಾಜ ಗವಾಯಿಗಳು ರಚಿಸಿದ ನಾಟಕಗಳ ಪ್ರದರ್ಶನ ಮಾಡುವ ಚಿಂತನೆಯಿದೆ. ಕಲಾವಿದರ ಅಗತ್ಯಗಳನ್ನು ಅರಿತು ಅವುಗಳನ್ನು ಸರ್ಕಾರದಿಂದ ಪೂರೈಸಲು ಶ್ರಮಿಸುವೆ ಎಂದರು.ಇದೇ ಸಂದರ್ಭದಲ್ಲಿ ಪ್ರೇಕ್ಷಕರ ಆಗ್ರಹದ ಮೇರೆಗೆ ಕಲಿಯುಗ ಕುಡುಕ ನಾಟಕದ ಸಂಭಾಷಣೆ ಹೇಳಿ ಎಲ್ಲರನ್ನು ರಂಜಿಸಿದರು.
ಬಿಎಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಮಾತನಾಡಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ, ಮಾಜಿ ಅಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ಹಾವೇರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ದೀಕ್ಷಿತ್ ಗ್ಯಾಸ್ ಏಜೆನ್ಸಿ ಮಾಲೀಕ ಪವನ ದೀಕ್ಷಿತ್, ಸಮಾಜ ಸೇವಕ ಮಂಜಯ್ಯ ಚಾವಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಕೆ.ಸಿ. ನಾಗರಜ್ಜಿ, ರಂಗ ಚೇತನ ಸಂಸ್ಥೆಯ ಗಣೇಶ ಗುಡಗುಡಿ, ದಾವಣಗೆರಿ ಎ.ಎ. ಅಕಾಡೆಮಿ ನಿರ್ದೇಶಕ ಅಣ್ಣೇಶ ಕೆ.ಎಚ್., ದಾವಣಗೆರಿ ದಕ್ಷಿಣ ವಲಯ ಸಂಚಾರಿ ಪಿಎಸ್ಐ ಡಿ.ಎಚ್.ನಿರ್ಮಲ, ಶಿವಕುಮಾರ ಜಾಧವ, ಕೆ.ಎಸ್.ನಾಗರಾಜ ಮತ್ತಿತರರಿದ್ದರು.