ಸಾರಾಂಶ
ರಾಣಿಬೆನ್ನೂರು: ರಾಣಿಬೆನ್ನೂರು ಹಿಂದೆ ಮುಂಬೈ ಕರ್ನಾಟಕ ಮತ್ತು ಮದ್ರಾಸ್ ಪ್ರಸಿಡೆನ್ಸಿಯ ಸಂಪರ್ಕ ಕೊಂಡಿಯಾಗಿತ್ತು ಎಂದು ಇತಿಹಾಸ ಸಂಶೋಧಕ ಪ್ರಮೋದ ನಲವಾಗಲ ಹೇಳಿದರು.ನಗರದ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ 89ನೇ ವರ್ಷದ ನಾಡಹಬ್ಬದ ಹತ್ತನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮದ್ರಾಸ್ ಪ್ರೆಸಿಡೆನ್ಸಿ ವ್ಯಾಪ್ತಿಯ ಕನ್ನಡ ಭಾಷೆ ಮಾತನಾಡುವ ಭಾಗದಲ್ಲಿ ಸಮಯವನ್ನು ಘಂಟೆಯಲ್ಲಿ ಉಲ್ಲೇಖಿಸಿದರೆ ಮುಂಬೈ ಕರ್ನಾಟಕ ಭಾಗದಲ್ಲಿ ಮರಾಠಿ ಶಬ್ದ ತಾಸು (ತಮಟೆ) ಮೂಲಕ ಗುರುತಿಸುವ ಪರಿಪಾಟವಿತ್ತು. ಒಂದು ಸಮಯದಲ್ಲಿ ಕರ್ನಾಟಕ ಸಂಘವು ಅಮೂಲ್ಯ ಪುಸ್ತಕ ಭಂಡಾರ ಹೊಂದಿತ್ತು ಮತ್ತು ಇಲ್ಲಿನ ನಾಟ್ಯಶಾಖೆ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದು ಉತ್ಕೃಷ್ಟ ನಾಟಕಗಳನ್ನು ಆಡುತ್ತಿದ್ದರು ಎಂದರು. ಹಿರಿಯ ಪತ್ರಕರ್ತ ಮನೋಹರ ಮಲ್ಲಾಡದ, ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಮತ್ತು ನಟ-ನಿರ್ದೇಶಕ ಸುಶಾಂತ ಕುಲಕರ್ಣಿ ಅತಿಥಿಗಳಾಗಿ ಆಗಮಿಸಿದ್ದರು. ಸಮಾರಂಭದಲ್ಲಿ ಹುಬ್ಬಳಿಯ ಸುಶಾಂತ ಡಾನ್ಸ್ ಅಕ್ಯಾಡೆಮಿಯ ವಿದ್ಯಾರ್ಥಿಗಳಿಂದ ನಡೆದ ಪಾಶ್ಚಾತ್ಯ ನೃತ್ಯ ಕಾರ್ಯಕ್ರಮ ಯುವಕರನ್ನು ರಂಜಿಸಿತು. ಹಳೆಯ ಚಿತ್ರಗೀತೆಗಳಿಗೆ ನೃತ್ಯ ಸಂಯೋಜನೆ ಮಾಡಿದ್ದು ವಿಶೇಷವಾಗಿತ್ತು.ಸಂದೀಪ ದಿಕ್ಷೀತ್, ಲಕ್ಷ್ಮಿ ಅಡಕಿ, ನಳಿನಿ ನಾಡಿಗೇರ, ಶ್ರೀನಿವಾಸ ಏಕಬೋಟೆ, ಸುನೀಲ ಮೆಹರವಾಡೆ, ಮೇಘನಾ ನಾಡಿಗೇರ ಮತ್ತಿತರರಿದ್ದರು.