ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕೋಲ್ಕತ್ತಾದ ಆರ್.ಜಿ.ಕರ್ ಮೆಡಿಕಲ್ ಕಾಲೇಜಿನ ದ್ವಿತೀಯ ವರ್ಷದ ಸ್ನಾತೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಖಂಡನೀಯ. ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ವಿಷಯವಾಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಾ.ಎಚ್.ವಿ. ರಂಗಸ್ವಾಮಿ ವಿಷಾದಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಘಟನೆಯನ್ನು ಅವಲೋಕಿಸಿದಾಗ ಎಲ್ಲಾ ವರ್ಗದ ಮಹಿಳೆಯರಿಗೆ ಸುರಕ್ಷತೆಯ ಕೊರತೆ ಇದೆ ಎಂಬುದು ಸಾಬೀತಾಗುತ್ತದೆ. ಸರಕಾರ ಕೂಡಲೇ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನಗಳು ಮರುಕಳುಹಿಸದಂತೆ ಎಚ್ಚರಿಕೆ ವಹಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.ವೈದ್ಯಕೀಯ ಶಿಕ್ಷಣ ಪಡೆಯುವುದು ಹುಡುಗಾಟದ ವಿಷಯವಲ್ಲ. ಸಾಕಷ್ಟು ಶ್ರಮವಹಿಸಿ ಈ ವೃತ್ತಿಯನ್ನು ಆರಿಸಿಕೊಂಡು ಬಂದಿರುತ್ತಾರೆ. ಜೀವ ಉಳಿಸುವ ವೈದ್ಯರ ಸ್ಥಿತಿಯೇ ಈಗಾದರೆ, ಜನಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ಮೂಡುತ್ತದೆ. ಅಲ್ಲದೆ ವೈದ್ಯರ ಮೇಲಿನ ಹಲ್ಲೆ, ದೌರ್ಜನ್ಯ, ದಬ್ಬಾಳಿಕೆ ಹಾಗೂ ತಮ್ಮದಲ್ಲದೆ ತಪ್ಪಿಗೆ ವೈದ್ಯರು ಹಲ್ಲೆಗಳಿಗೆ ಗುರಿಯಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬರುವ ಹೆಣ್ಣು ಮಕ್ಕಳ ಸಂಖ್ಯೆ ಸಹ ಕುಸಿದಿದೆ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಸರಕಾರ ಕೂಡಲೇ ಸೂಕ್ತ ತನಿಖೆ ನಡೆಸಿ,ತಪಿತಸ್ಥರನ್ನು ಪತ್ತೆ ಹೆಚ್ಚಿ ಉಗ್ರವಾದ ಶಿಕ್ಷೆಗೆ ಗುರಿ ಪಡಿಸಬೇಕು. ಇದಕ್ಕಾಗಿ ಸೂಕ್ತ ಕಾಯ್ದೆಯೊಂದನ್ನು ಜಾರಿಗೆ ತರಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಬಾ.ಹ.ರಮಾಕುಮಾರಿ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಮನ ಪರಿವರ್ತನೆಯಾಗಬೇಕಿದೆ.ಆಗಸ್ಟ್ 8ರ ಘಟನೆ ಲಿಂಗತಾರತಮ್ಮದ ಪ್ರತೀಕವಾಗಿದೆ. ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗದ ಹೊರತು ಇಂತಹ ಘಟನೆಗಳ ನಿಲ್ಲಲ್ಲು ಸಾಧ್ಯವಿಲ್ಲ. ಹಾಗಾಗಿ ಶಾಲೆಗಳಲ್ಲಿ, ಮನೆಯಲ್ಲಿಯೇ ಹೆಣ್ಣು, ಗಂಡನ್ನು ನೋಡುವ ದೃಷ್ಟಿಕೋನದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ.ಈ ಘಟನೆಯ ವಿರುದ್ದ ಎಲ್ಲರೂ ಹೋರಾಟಕ್ಕೆ ಇಳಿದು ಆಳುವ ಸರಕಾರಗಳಿಗೆ ಪ್ರತಿರೋಧದ ದ್ವನಿ ತಟ್ಟುವಂತೆ ಮಾಡಬೇಕೆಂದರು.ಸುದ್ದಿಗೋಷ್ಠಿಯ ನಂತರ ನಗರದ ಟೌನ್ಹಾಲ್ ವೃತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ, ಆಕೆಯ ಸಾವಿಗೆ ಸಂಪಾತ ಸೂಚಿಸಿ ಮೇಣದ ಬತ್ತಿ ಹಚ್ಚಲಾಯಿತು.ಐಎಂಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಮಹೇಶ್,ಡಾ.ಡಿ.ಹನುಮಕ್ಕ, ಐಎಂಎ ಮಹಿಳಾ ಘಟಕದ ಡಾ.ಅನಿತಾ ಬಿಗೌಡ, ಡಾ.ಶೃತಿ.ಕೆ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.