ರಾಣಿಬೆನ್ನೂರಲ್ಲಿ ನಗೆಯಾಡದ ರತಿ-ಮನ್ಮಥರು, ಯಾರಿಗೂ ದಕ್ಕದ ಬಹುಮಾನ!

| Published : Mar 28 2024, 12:47 AM IST

ರಾಣಿಬೆನ್ನೂರಲ್ಲಿ ನಗೆಯಾಡದ ರತಿ-ಮನ್ಮಥರು, ಯಾರಿಗೂ ದಕ್ಕದ ಬಹುಮಾನ!
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರು ನಗರದ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಹೋಳಿ ಹಬ್ಬದ ಪ್ರಯುಕ್ತ ಕುಳ್ಳಿರಿಸಿದ್ದ ಜೀವಂತ ರತಿ ಮನ್ಮಥರನ್ನು ನಗಿಸಲು ಈ ವರ್ಷವೂ ಯಾರಿಂದಲೂ ಸಾಧ್ಯವಾಗಿಲ್ಲ. ಆರು ಲಕ್ಷ ರು. ಬಹುಮಾನ ಗೆಲ್ಲಲು ಯಾರಿಂದಲೂ ಆಗಿಲ್ಲ.

ರಾಣಿಬೆನ್ನೂರು: ಇಲ್ಲಿನ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಹೋಳಿ ಹಬ್ಬದ ಪ್ರಯುಕ್ತ ನಗರದ ಶ್ರೀ ರಾಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಭೀಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಶಕ್ತಿ ಯುವಕ ಸಂಘ ಹಾಗೂ ಜೆಬಿಸಿಸಿ ಯುವಕ ಮಂಡಳಿ ವತಿಯಿಂದ ಕುಳ್ಳರಿಸಿದ್ದ ಜೀವಂತ ರತಿ ಮನ್ಮಥರು ಈ ಬಾರಿಯೂ ನಗು ಚಿಮ್ಮಿಸದೇ ತಮ್ಮ ದಾಖಲೆಯನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದ್ದಾರೆ.

ನಗಿಸಲು ಹೋದವರೆ ನಗೆಪಾಟಲಿಗೆ ಈಡಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಯಾರಿಗೂ ಹೋಳಿ ಬಂಪರ್ ಬಹುಮಾನದ ಮೊತ್ತ ಆರು ಲಕ್ಷ ರು. ದಕ್ಕಲಿಲ್ಲ.

ಈ ಹಿಂದಿನ 65 ವರ್ಷಗಳಂತೆ ಈ ವರ್ಷವೂ ಓಕುಳಿ ಮುನ್ನಾದಿನವಾದ ಮಂಗಳವಾರ ರಾತ್ರಿ (ಮಾ. 26) ರಾತ್ರಿ 7.30ಕ್ಕೆ ಜೀವಂತ ರತಿ ಮನ್ಮಥ ಪಾತ್ರಧಾರಿಗಳನ್ನು ಕುಳ್ಳರಿಸಲಾಗಿತ್ತು. ಅವರನ್ನು ನಗಿಸಲೆಂದು ವಿವಿಧ ಪ್ರದೇಶಗಳ ಹಲವಾರು ಜನರು ಮುಂಚಿತವಾಗಿಯೇ ಇಲ್ಲಿಗೆ ಬಂದು ಜಮಾಯಿಸಿದ್ದರು. ಯಾರು ಎಷ್ಟೆ ಪ್ರಯತ್ನಿಸಿದರೂ ರತಿ-ಮನ್ಮಥರು ನಗುವಿನ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ಗಂಭೀರವದನರಾಗಿ ಆಸೀನರಾಗಿದ್ದರು. ನಗಿಸಲು ಹೋದವರು ಪೇಚಿಕೆ ಸಿಗುತ್ತಿದ್ದರು. ಒಂದು ಸಲ ನಕ್ಕ ಬಿಡ್ರಪ್ಪಾ ಬೇಕಾರ ಬಹುಮಾನದ ರೊಕ್ಕ (₹6 ಲಕ್ಷ) ಪೂರ್ತಿ ನಿಮಗ್ ಕೊಡ್ತೇನಿ ಎಂದು ಕೆಲವರು ಆಮಿಷವೊಡ್ಡುವ ಪ್ರಯತ್ನ ಮಾಡಿದರು. ಮಹಿಳೆಯರು ಕೂಡ ಅವರನ್ನು ನಗಿಸಲು ಇನ್ನಿಲ್ಲದ ಪ್ರಯತ್ನ ನಡೆಸಿ ವಿಫಲರಾದರು.

ಬಂದೋಬಸ್ತ್: ರತಿ-ಮನ್ಮಥರ ವೀಕ್ಷಣೆಗೆ ಬರುವ ಜನರನ್ನು ನಿಯಂತ್ರಿಸುವ ಸಲುವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗೆ ವೀಕ್ಷಣೆಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟಿನಲ್ಲಿ ನಗರದಲ್ಲಿ ಜೀವಂತ ರತಿ ಮನ್ಮಥರು ತಮ್ಮ ಮೌನದ ಶಪಥ ಈ ಬಾರಿಯು ಮುಂದುವರಿಯಿತು.