ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ನಮ್ಮ ರಾಜ್ಯದಲ್ಲಿ ಬಲಾಢ್ಯ ಮುಖ್ಯಮಂತ್ರಿ ಇದ್ದಾರೆ. ಈ ಹಿಂದೆ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಇವರೆ "ನಮ್ಮ ನೀರು, ನಮ್ಮ ಹಕ್ಕು " ಎಂಬ ಘೋಷವಾಕ್ಯದೊಂದಿಗೆ ಪಾದಯಾತ್ರೆ ಮಾಡಿದ್ದರು. ಇದೀಗ ಅವರೇ ಯಾವುದೇ ಜಲಾಶಯದಿಂದಲೂ ಕುಡಿಯುವ ನೀರು ಹೊರತುಪಡಿಸಿ ಕೃಷಿಗೆ ನೀರು ಬಿಡುಗಡೆ ಮಾಡಬಾರದೆಂದು ಆದೇಶ ಮಾಡಿದ್ದಾರೆ. ‘ನಮ್ಮ ನೀರು ನಮ್ಮ ಹಕ್ಕು’ ಎನ್ನುವ ನಿಮ್ಮ ಧ್ವನಿಗೆ ನಾವು ಬೆಂಬಲವಾಗಿ ನಿಂತುಕೊಳ್ಳುತ್ತೇವೆ. ನೀರು ಬಿಟ್ಟು ವಾಟರ್‌ಮೆನ್ ಆಗಬೇಡಿ ಎಂದು ಎಂಎಲ್ಸಿ ಸಿ.ಟಿ.ರವಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಕುಟುಕಿದರು.

ತಾಲೂಕಿನ ಹರದನಹಳ್ಳಿಯ ಸಮೀಪ ಚನ್ನಮ್ಮನವರ ಉತ್ತರಕ್ರಿಯಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀರು ಬಿಡದೆ ಮುಖ್ಯಮಂತ್ರಿ ಆಗಿ ನಮ್ಮ ಹಕ್ಕನ್ನು ಉಳಿಸಿ. ಆದರೆ, ನಮ್ಮ ರೈತರಿಗೆ ನೀರು ಕೊಡದೆ, ಬೆಂಗಳೂರಿಗೂ ಕೊಡದೆ ತಮಿಳುನಾಡಿಗೆ ನೀರು ಬಿಟ್ಟರೆ ನೀವು ವಾಟರ್‌ಮೆನ್ ಆಗುತ್ತೀರಿ. ನಮ್ಮ ಮುಖ್ಯಮಂತ್ರಿ ಆಗಿ ನಮ್ಮ ಹಕ್ಕನ್ನು ಉಳಿಸಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದರು.

ಪಾಕಿಸ್ತಾನವೇ ಭಾರತದೊಳಗೆ ಸೇರಲಿದೆ

ಚಿಕ್ಕಮಗಳೂರಿಗೆ ಕಾಲಿಡಲು ಬಿಡುವುದಿಲ್ಲ ಎಂಬ ಹೋರಾಟಗಾರರ ಹೇಳಿಕೆ ವಿಚಾರದ ಪ್ರಶ್ನೆಗೆ ಉತ್ತರಿಸಿ, ಭಾರತವನ್ನು ಪಾಕಿಸ್ತಾನ ಮಾಡಬೇಕೆಂದು ಕೆಲವರ ಮನಸ್ಸಿನಲ್ಲಿ ಕನಸು ಇದೆ, ಆ ಕನಸು ನನಸಾಗಲ್ಲ. ಪಾಕಿಸ್ತಾನವೇ ಭಾರತದೊಳಗೆ ಸೇರಲು ಬಹಳ ದಿನ ಬೇಕಾಗಿಲ್ಲ.ಪಿಒಕೆ ಒಳಗೆ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಿದ್ದಾರೆ. ನಾನು ಮಣ್ಣಿನ ಮಗ, ನಮ್ಮ ಕಡೆ ಒಂದು ಗಾದೆ ಮಾತಿದೆ. ಅದನ್ನು ಹೇಳೋ ಆಗಿಲ್ಲ. ಅದ್ಯಾವುದಕ್ಕೋ ಹೆದರಿ ಯಾರಾದರೂ ಸೀರೆ ಉಡೋದು ಬಿಡ್ತಾರಾ. ಹಾಗೇ ನಾನು ಹೆದರಿ ರಾಜಕಾರಣದಲ್ಲಿಲ್ಲ. ಇವ್ಯಾವೋ ಪೊಳ್ಳುಗಳು. ಅವಕ್ಕೆಲ್ಲಾ ಹೆದರಿಕೊಳ್ಳಲು ಆಗುತ್ತಾ. ಮೊನ್ನೆ, ನಿನ್ನೆ, ಇವತ್ತು ಚಿಕ್ಕಮಗಳೂರಿನಲ್ಲಿ ಇದ್ದೆ. ಸಮಸ್ಯೆ ಮಾಡುವವರನ್ನು ಹೆದರಿಸಿ ರಾಜಕಾರಣ ಮಾಡಲು ನನಗೆ ಗೊತ್ತು ಎಂದು ತಿರುಗೇಟು ನೀಡಿದರು. ಬಿಜೆಪಿಯಲ್ಲಿ ಪ್ರಧಾನಮಂತ್ರಿಯನ್ನು ಸಾರ್ವಜನಿಕವಾಗಿ ಟೀಕೆ ಮಾಡಬಹುದು. ಅದೇ ಕಾಂಗ್ರೆಸಿನಲ್ಲಿ ರಾಹುಲ್‌ ಗಾಂಧಿಯನ್ನು ಟೀಕೆ ಮಾಡುವಂತಿಲ್ಲ. ಏಕೆಂದರೆ ಕಾಂಗ್ರೆಸಿನಲ್ಲಿ ರಾಹುಲ್‌ ಗಾಂಧಿಯನ್ನು ಸಂವಿಧಾನಕ್ಕಿಂತ ದೊಡ್ಡ ವ್ಯಕ್ತಿ ಎಂದು ಪರಿಗಣಿಸಿದ್ದಾರೆ. ಕಾಂಗ್ರೆಸಿಗರು ರಾಹುಲ್‌ಗಾಂಧಿ ಟೀಕೆ ಮಾಡಿದರೆ ಅವರ ಮನೆ ಬಾಗಿಲಿಗೆ ನೋಟಸ್ ಬರುತ್ತದೆ. ಸಂವಿಧಾನದ ಅಡಿಯಲ್ಲಿ ಭಾರತದ ೧೪೦ ಕೋಟಿ ಜನರು ಸಮಾನರು. ಆದರೆ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಉಚ್ಚರಿಸಿದನ್ನು ಪುನರ್ ಉಚ್ಚರಿಸುವ ಕರ್ಮ ಕಾಂಗ್ರೆಸಿಗರದ್ದು. ಅವರು ಕಾಗೆ ಬೆಳ್ಳಗೆ ಇದೆ ಎಂದರೆ, ದೇಶದಲ್ಲಿರುವ ಎಲ್ಲಾ ಕಾಂಗ್ರೆಸ್ಸಿಗರು ಕಾಗೆ ಬೆಳ್ಳಗಿದೆ ಅಂತಾರೆ, ಅದು ಅವರ ಕರ್ಮ ಎಂದು ಲೇವಡಿ ಮಾಡಿದರು.