ಸಾರಾಂಶ
ಕನಕಗಿರಿ: ನಂಬಿ ಕೆಟ್ಟವರಿಲ್ಲವೂ ಗುರುಗಳ ನಂಬದೆ ಕೆಡುವರುಂಟೋ ಎನ್ನುವ ದಾಸರ ಕೀರ್ತನೆ ಕಲಿಯುಗದಲ್ಲಿ ಗುರುರಾಯರು ಭಕ್ತರನ್ನು ಕಾಮಧೇನು, ಕಲ್ಪವೃಕ್ಷವಾಗಿ ಸಲುಹುತ್ತಿದ್ದಾರೆ ಎಂದು ಪಂಡಿತ ಶ್ರೀಪಾದ ಕುಲಕರ್ಣಿ ಹೇಳಿದರು.
ತಾಲೂಕಿನ ನವಲಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಭೋಗಾಪುರೇಶ ದೇವಸ್ಥಾನದಲ್ಲಿ ರಾಘವೇಂದ್ರಸ್ವಾಮಿಗಳ 354ನೇ ಪೂರ್ವಾರಾಧನೆಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.ರಾಯರ ಅಕ್ಷರ ಮಾಲಿಕೆಯಲ್ಲಿ ಮನುಷ್ಯನ ಜೀವನವನ್ನೆ ಬದಲಾಯಸುವ ಶಕ್ತಿ ಇದೆ. 51 ಮಾಲಿಕೆಗಳು ತನ್ನದೆ ಆದ ವೈಜ್ಞಾನಿಕತೆ ಹೊಂದಿವೆ. ಇಂದಿನ ಯುವ ಸಮೂಹ ರಾಯರನ್ನು ಹೆಚ್ಚು ಆರಾಧಿಸುತ್ತಿರುವುದು ಗಮನಾರ್ಹ ಎಂದು ಸ್ಮರಿಸಿದರು.
ಪೂರ್ವಾರಾಧನೆ ನಿಮಿತ್ತ ಬೋಗಾಪುರೇಶ (ಪ್ರಾಣ ದೇವರು)ನಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಕನಕಗಿರಿಯ ಪ್ರತಾಪರಾಯ ಹಾಗೂ ಶ್ರೀ ರಾಘವೇಂದ್ರಸ್ವಾಮಿ ಭಜನಾ ಮಂಡಳಿಯವರ ಭಜನೆ ಕಾರ್ಯಕ್ರಮ ಮನಸೂರೆಗೊಂಡಿತು.ದೇವಸ್ಥಾನ ಪ್ರಾಂಗಣದಲ್ಲಿ ರಾಯರ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಸೇವಾಕರ್ತರಾದ ವಾದಿರಾಜ ದಿಗ್ಗಾವಿ, ಮಧು ಗುಡೂರು, ಗುರುರಾಜ ಸೌದಿ ಹಾಗೂ ಜಿಲ್ಲಾ ಅತ್ಯುತ್ತಮ ವರದಿಗಾರ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪ್ರಲ್ಹಾದರೆಡ್ಡಿ ಮಾದಿನಾಳ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಶ್ರೀನಾಥಾಚಾರ ಪೂಜಾರ, ಶ್ರೀರಾಮ ಷಡಕ್ಷರಿ, ಶ್ರೀನಿವಾಸಾಚಾರ ಪೂಜಾರ ನವಲಿ, ಮುರಳೀಧರಾಚಾರ್ ನವಲಿ, ರಘು ಗುಡೂರು, ಸುದರ್ಶನ ಕುಲಕರ್ಣಿ, ವಿಜಯ ಗುಂಡೂರು, ಪ್ರದೀಪ ಸೌದಿ, ಪವನ ಸೌದಿ, ರಾಘು ನವಲಿ, ಲಕ್ಷ್ಮಣ ಬೆಳ್ಳುಬ್ಬಿ, ಕಲಾವಿದರಾದ ತೊಂಡೆಪ್ಪ ಕುಂಡೇರ, ಸುರೇಶರೆಡ್ಡಿ ಮಹಲಿನಮನಿ, ಪಂಪಾಪತಿ ತುಪ್ಪದ, ಭೀಮರಾವ್ ಮರಾಠಿ, ಕಲೀಲಸಾಬ್, ವಿನಯ ಪತ್ತಾರ, ಭೀಮರೆಡ್ಡಿ ಓಣಿಮನಿ, ಅಂಬೋಜಿರಾವ್ ಬೊಂದಾಡೆ, ಸುರೇಶಪ್ಪ ಬೊಂದಾಡೆ ಸೇರಿದಂತೆ ಇತರರಿದ್ದರು. ಗುರುರಾಜ್ ಬೆಳ್ಳುಬ್ಬಿ ನಿರೂಪಿಸಿ, ವಂದಿಸಿದರು.