ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ ಪಠ್ಯಕ್ರಮವನ್ನು ನಿಯಮ ಬಾಹಿರವಾಗಿ ಕಡಿಮೆ ಮಾಡಿರುವ ವಿಷಯಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ ಸದಸ್ಯರು ಮಂಗಳವಾರ ಮೌಲ್ಯಮಾಪನ ಬಹಿಷ್ಕರಿಸಿ ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.ಸೋಮವಾರದಿಂದ ಸ್ಥಳೀಯ ಮರಾಠ ಮಂಡಳ ಪದವಿ ಕಾಲೇಜಿನಲ್ಲಿ ಪದವಿ ಮೌಲ್ಯಮಾಪನ ಕೇಂದ್ರದಲ್ಲಿ ಮುಷ್ಕರ ಆರಂಭಿಸಲಾಗಿದ್ದು, ಮೊದಲಿನಿಂದಲೂ ವಾಣಿಜ್ಯಶಾಸ್ತ್ರದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಅಧ್ಯಯನ ವಿಷಯವಾಗಿ ಬೋಧಿಸಲಾಗುತ್ತಿದೆ. ಅರ್ಥಶಾಸ್ತ್ರ ವಿಷಯವು ವಾಣಿಜ್ಯ ವಿಭಾಗದ ತಾಯಿಬೇರು ಇದ್ದಂತೆ. ಆದರೆ ವಾಣಿಜ್ಯಶಾಸ್ತ್ರ ವಿಭಾಗದ ಕೆಲವರ ಕುತಂತ್ರದಿಂದ ಅಕ್ರಮವಾಗಿ ಅರ್ಥಶಾಸ್ತ್ರ ಶೀರ್ಷಿಕೆ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಅರ್ಥಶಾಸ್ತ್ರ ಅನುದಾನಿತ ಹಾಗೂ ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರದ ಕೊರತೆ ಆಗುವಂತೆ ಮಾಡಲಾಗಿದೆ. ಇದರಿಂದ ನೂರಾರು ಉಪನ್ಯಾಸಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳು ಆಗುತ್ತಾರೆ. ವಾಣಿಜ್ಯ ಶಾಸ್ತ್ರದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಅಂತರ್ ಶಾಸ್ತ್ರೀಯ (ಇಂಟರ್ ಡಿಸಿಪ್ಲಿನರಿ) ಅಧ್ಯಯನವಾಗಿ ಕಡ್ಡಾಯವಾಗಿ ಕಲಿಸಬೇಕಾಗುತ್ತದೆ. ಆದರೆ, ಅರ್ಥಶಾಸ್ತ್ರ ವಿಷಯವನ್ನೊಳಗೊಂಡ ಪಠ್ಯ ಕಲಿಸಲು ಉಪನ್ಯಾಸಕರಿಗೆ ನಿರಾಕರಿಸಲಾಗುತ್ತಿದೆ. ರಾಜ್ಯಾದ್ಯಂತ ಕೆಲವು ವಿವಿಗಳಲ್ಲಿ ಈ ಸಮಸ್ಯೆ ಇದೆ. ಆದ್ದರಿಂದ ನಾವು ಮೌಲ್ಯಮಾಪನ ಬಹಿಷ್ಕರಿಸುತ್ತೇವೆ ಎಂದು ಉಪನ್ಯಾಸಕರು ತಿಳಿಸಿದರು.ಕಾಂಗ್ರೆಸ್ ಕಚೇರಿಯಲ್ಲಿ ಧರಣಿ:ನಂತರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಅವರನ್ನು ಭೇಟಿಯಾದ ವೇದಿಕೆಯ ಸದಸ್ಯರು ಕಾಂಗ್ರೆಸ್ ಕಚೇರಿಯಲ್ಲಿ ಧರಣಿ ನಡೆಸಿ ವಿವಿ ಕುಲಪತಿಗಳಿಗೆ ಕೂಡಲೇ ಅರ್ಥಶಾಸ್ತ್ರ ವಿಷಯವನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಗಣಪತಿ ಸಂಗೋಟಿ, ಮಲ್ಲಿಕಾರ್ಜುನ್ ಉಗಲವಾಟ, ರಾಜು ಕಪಾಲಿ, ಪ್ರಮೋದ್ ಜಾಧವ, ಎಸ್.ವೈ. ಗಟ್ಟಿ, ಅಜಿತ್ ಕೋಳಿ, ಜಯಶ್ರೀ ಅಂಚಿನಮನಿ, ಪ್ರಶಾಂತ್ ಮುಗಳಿ, ಮಲ್ಲಿಕಾರ್ಜುನ ರಾಂಪುರ, ಹನುಮಂತಪ್ಪ ಚುಳುಕಿ ಇತರರು ಇದ್ದರು.