ಸಾರಾಂಶ
- ಬಾಡಿಗೆ ಪಡೆದವರಿಂದ ಹೆಚ್ಚಿನ ದರಕ್ಕೆ ಒಳಬಾಡಿಗೆ: ಆರೋಪ - - - ಕನ್ನಡಪ್ರಭ ವಾರ್ತೆ ಹರಿಹರ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿರುವ ವಾಣಿಜ್ಯ ಮಳಿಗೆಗಳ ಕರಾರು ಅವಧಿ ಮುಗಿದಿದ್ದು, ತಕ್ಷಣ ಮರುಹರಾಜು ನಡೆಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯಿಂದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜ್ ಅವರಿಗೆ ಬುಧವಾರ ವಿಧಾನಸೌಧದಲ್ಲಿ ಮನವಿ ಸಲ್ಲಿಸಲಾಯಿತು.
ಸಂಘಟನೆ ರಾಜ್ಯಾಧ್ಯಕ್ಷ ಡಾ. ಬಿ.ಎನ್. ಜಗದೀಶ್ ಮಾತನಾಡಿ, ಹರಿಹರದ ಮಹಾತ್ಮ ಗಾಂಧಿ ಕ್ರೀಡಾಂಗಣ ಮುಂಭಾಗದಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಿಸಲಾಗಿರುವ 50 ಮಳಿಗೆಗಳ ಕರಾರು ಅವಧಿ ಮುಗಿದು ವರ್ಷಗಳೇ ಕಳೆದಿವೆ. ಆದರೆ ಇದುವರೆಗೆ ಮರುಹರಾಜು ನಡೆದಿಲ್ಲ ಎಂದು ಕಿಡಿಕಾರಿದರು.ಮಳಿಗೆ ಬಾಡಿಗೆ ಪಡೆದವರು ಇತರರಿಗೆ ಹೆಚ್ಚಿನ ದರಕ್ಕೆ ಒಳಬಾಡಿಗೆ ನೀಡಿದ್ದಾರೆ. ಅಲ್ಲದೇ, ಕ್ರೀಡಾಂಗಣದ ಮಳಿಗೆಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅನೇಕರು ತಾವು ನಡೆಸುತ್ತಿರುವ ವ್ಯಾಪಾರಕ್ಕೆ ಪರವಾನಗಿ ಪಡೆದಿಲ್ಲ. ತಕ್ಷಣ ಅವುಗಳನ್ನು ಖಾಲಿ ಮಾಡಿಸಿ, ಮರುಹರಾಜು ಮಾಡಬೇಕು ಎಂದು ಸಂಘಟನೆ 152 ದಿನಗಳಿಂದ ನಿರಂತರ ಧರಣಿ ನಡೆಸುತ್ತಿದೆ. ಇದುವರೆಗೆ ಅಧಿಕಾರಿಗಳು ಸ್ಪಂದಿಸಿಲ್ಲ. ತಕ್ಷಣ ಮಳಿಗೆಗಳ ತೆರವು ಹಾಗೂ ನಿಯಮಾನುಸಾರ ಮರುಹರಾಜು ಮಾಡಿಸಬೇಕು ಎಂದರು.
ಮನವಿಗೆ ಸ್ಪಂದಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ, ತಕ್ಷಣವೇ ಸಂಬಂಧಪಟ್ಟ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಆಯುಕ್ತ ಆರ್. ಚೇತನ್ ಅವರಿಗೆ ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು.ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಜತ್ ಗಗನ್ ರಾಜು, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ, ಹಾಗೂ ಕಲಬುರ್ಗಿ ಜಿಲ್ಲಾ ಅಧ್ಯಕ್ಷ, ಮಲ್ಲಿಕಾರ್ಜುನ್ ಸಾರವಾಡ ಹರಿಹರ ತಾಲೂಕು ಅಧ್ಯಕ್ಷ ಎಸ್. ಗೋವಿಂದ್, ಪ್ರಧಾನ ಕಾರ್ಯದರ್ಶಿ ಸಿ.ಎಚ್. ಸುನೀಲ್ ಕುಮಾರ್ ಉಪಸ್ಥಿತರಿದ್ದರು.
- - - -05ಎಚ್ಆರ್ಆರ್01.ಜೆಪಿಜಿ:ಹರಿಹರದ ಮಹಾತ್ಮ ಗಾಂಧಿ ಕ್ರೀಡಾಂಗಣದ ವಾಣಿಜ್ಯ ಮಳಿಗೆಗಳ ಮರುಹರಾಜು ನಡೆಸಲು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯಿಂದ ಸಿಎಂ ರಾಜಕೀಯ ಕಾರ್ಯದರ್ಶಿ ಡಾ. ಕೆ.ಗೋವಿಂದರಾಜ್ ಅವರಿಗೆ ಬುಧವಾರ ವಿಧಾನಸೌಧದಲ್ಲಿ ಮನವಿ ಸಲ್ಲಿಸಲಾಯಿತು.