ಕೇಂದ್ರ ಸಚಿವರೊಂದಿಗೆ ಮಲೆನಾಡಿನ ಸಮಸ್ಯೆಗಳ ಚರ್ಚೆ: ಎಚ್ಡಿಕೆ
ಕನ್ನಡಪ್ರಭ ವಾರ್ತೆ ಕೊಪ್ಪಅಮ್ಮ ಫೌಂಡೇಶನ್ ನಿಂದ ಕೊಪ್ಪದ ಯಡಗೆರೆ ಸಭಾಭವನದಲ್ಲಿ ಆಯೋಜಿಸಿದ್ದ "ಮಲೆನಾಡ ರೈತರ ಬದುಕಿನ ವಾಸ್ತವ ಚಿತ್ರಣ " ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ತಜ್ಞರೊಂದಿಗೆ ನಡೆದ ಚರ್ಚೆಗಳು ಹಾಗೂ ವಾದಗಳನ್ನು ಸಂಗ್ರಹಿಸಿ ರೂಪಿಸಲಾಗಿದ್ದ ಕೈಹೊತ್ತಿಗೆಯನ್ನು ದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದರು.
ಈ ವೇಳೆ ಕುಮಾರಸ್ವಾಮಿ ಮಾತನಾಡಿ ಪುಸ್ತಕದಲ್ಲಿ ಅತ್ಯುತ್ತಮ ಲೇಖನಗಳು ಬಂದಿವೆ. ನಾನು ಈ ಪುಸ್ತಕವನ್ನು ಸಂಪೂರ್ಣವಾಗಿ ಓದುತ್ತೇನೆ. ಮಲೆನಾಡ ರೈತರ ಬದುಕಿನ ವಾಸ್ತವ ಚಿತ್ರಣ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದ ಎಲ್ಲರನ್ನು ಒಂದು ಬಾರಿ ದೆಹಲಿಗೆ ಕರೆಸಿ, ಅವರೊಂದಿಗೆ ಹಾಗೂ ಕೇಂದ್ರದ ಸಚಿವರೊಂದಿಗೆ ಮಲೆನಾಡಿನ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂಬ ಭರವಸೆ ನೀಡಿದರು.ಅದೇ ಸಂದರ್ಭದಲ್ಲಿ ದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಮಲೆನಾಡ ರೈತರ ಬದುಕಿನ ವಾಸ್ತವ ಚಿತ್ರಣ ವಿಚಾರ ಸಂಕಿರಣದ ಪುಸ್ತಕವನ್ನು ಕುಮಾರಸ್ವಾಮಿ ಅಧಿಕೃತವಾಗಿ ಬಿಡುಗಡೆಗೊಳಿಸಿದರು.ಮಲೆನಾಡ ರೈತರ ಬದುಕಿನ ವಾಸ್ತವ ಚಿತ್ರಣ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ತಜ್ಞರೊಂದಿಗೆ ನಡೆದ ಚರ್ಚೆಗಳು ಸಂಗ್ರಹಿಸಿ ಹೊರತರಲಾದ ಕೈಹೊತ್ತಿಗೆ ಮಾಹಿತಿಯನ್ನು ದೆಹಲಿ ಗೃಹ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್. ಶೆಟ್ಟಿ ವಿವರಿಸಿ ಅರ್ಪಿಸಲಾಯಿತು.
ಕೈಹೊತ್ತಿಗೆ ಬಿಡುಗಡೆ ಕಾರ್ಯಕ್ರಮದ ವೇಳೆ, ಸುಧಾಕರ್ ಎಸ್. ಶೆಟ್ಟಿ ಅವರೊಂದಿಗೆ ಜೆಡಿಎಸ್ ಹಿರಿಯ ನಾಯಕರಾದ ಎಚ್.ಜಿ. ವೆಂಕಟೇಶ್ ಮಂಜುನಾಥ್ ಗಂಡಘಟ್ಟ, ಶೃಂಗೇರಿ ಘಟಕದ ಅಧ್ಯಕ್ಷ ವಿವೇಕಾನಂದ ಭಟ್, ಕಣಿವೆ ವಿನಯ್, ದೀಪಕ್ ಕೊಳೆಲೆ, ವಾಸಪ್ಪ ಕುಂಚೂರು, ಗುರುಪ್ರಸಾದ್ ಭಟ್, ಉದಯ ಸುವರ್ಣ ಸೇರಿದಂತೆ ಭರತ್ ಗಿಣಿಕಲ್ ಹಾಗು ಶಿವಶಂಕರ್ ಗೋರಿಗಂಡಿ ಇತರರಿದ್ದರು.