ಸಾರಾಂಶ
ಮುಂಡಗೋಡ:೧೨ನೇ ಶತಮಾನದ ಶರಣರೆಲ್ಲ ಕಾಯಕ ಯೋಗಿಗಳಾಗಿ ನಾಡು ಹಾಗೂ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರನ್ನು ಜಾತಿಗೆ ಸೀಮಿತಗೊಳಿಸದೆ ಅವರ ತತ್ವಾದರ್ಶ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಎದುರಿನ ಶ್ರೀಸಿದ್ದರಾಮೇಶ್ವರ ಗದ್ದುಗೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಶಿವಯೋಗಿ ಶ್ರೀಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಸವಣ್ಣನವರ ತತ್ವ ಪ್ರತಿಪಾದಕರಾದ ಅನೇಕ ಶರಣರ ವಚನಗಳ ಆಧಾರದ ಮೇಲೆ ಡಾ. ಬಿ.ಆರ್. ಅಂಬೇಡ್ಕರ್ ಸಮಾಜದ ಆಶೋತ್ತರ ಈಡೇರಿಸುವಂತಹ ಸಂವಿಧಾನ ರಚಿಸಿದ್ದಾರೆ. ಸಂವಿಧಾನ ಆಧಾರದ ಮೇಲೆ ಜಾತಿ-ಜಾತಿಗಳ ನಡುವೆ ಇರುವ ಕಂದಕ ದೂರ ಮಾಡಿ ದೇಶ ಹಾಗೂ ಜಗತ್ತಿನಲ್ಲಿರುವುದು ಮಾನವ ಕುಲ ಒಂದೇ ಎಂಬುವುದನ್ನು ಪ್ರತಿಪಾದಿಸಲಾಗಿದೆ. ಬಸವಣ್ಣನವರ ಕಾಲದಲ್ಲಿಯೇ ಕುಲ-ಕುಲವೆಂದು ಬಡಿದಾಡದಿರು ಎಂದು ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದ ಅವರು, ಎಷ್ಟೇ ದೊಡ್ಡ ಮನೆ ಕಟ್ಟಿದರೂ ಕೂಡ ಅದಕ್ಕೆ ಭೋವಿ ಸಮಾಜದ ಅಡಿಪಾಯ ಬಹುಮುಖ್ಯವಾಗಿದೆ ಎಂದರು.ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಸಮಾಜದ ಒಳಿತಿಗಾಗಿ ಹೋರಾಡಿದ ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸೂಕ್ತವಲ್ಲ. ಭೋವಿ ಸಮಾಜ ಕೂಡ ಇಂದು ಯಾವುದೇ ರೀತಿ ಹಿಂದೆ ಉಳಿದಿಲ್ಲ. ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ ಎಂದು ಬಣ್ಣಸಿದರು. ಅತ್ತಿವೇರಿ ಬಸವಧಾಮದ ಶ್ರೀಮಾತೇ ಬಸವೇಶ್ವರಿ ಆಶೀರ್ವಚನ ನೀಡಿದರು. ತಹಸೀಲ್ದಾರ್ ಶಂಕರ ಗೌಡಿ, ಮುಂಡಗೋಡ ಸಿಪಿಐ ಭರಮಪ್ಪ ಲೋಕಾಪುರ, ತಾಪಂ ಇಒ ಟಿ.ವೈ. ದಾಸನಕೊಪ್ಪ, ರವಿಗೌಡ ಪಾಟೀಲ, ಶ್ರೀಕಾಂತ ಸಾನು, ಡಿಎಸ್ಎಸ್ ರಾಜ್ಯ ಸಂಚಾಲಕ ಎಸ್. ಫಕ್ಕೀರಪ್ಪ, ಚಿದಾನಂದ ಹರಿಜನ, ಹನುಮಂತಪ್ಪ ಆರೇಗೊಪ್ಪ, ಅಶೋಕ ಚಲವಾದಿ, ರವಿ ಹಾವೇರಿ ಉಪಸ್ಥಿತರಿದ್ದರು.