ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಆಶ್ರಯದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಮತ್ತು ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರದ ಸಹಭಾಗಿತ್ವದಲ್ಲಿ ಜಿಲ್ಲೆ ಅಸಂಘಟಿತ ಗ್ಯಾರೇಜು ಕಾರ್ಮಿಕರ ನೋಂದಣಿ ಶಿಬಿರವನ್ನು ಸೆ.22ರಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಮಂಜುನಾಥ್ ಮಣಿಪಾಲ ಮಾಹಿತಿ ನೀಡಿದರು.ರಾಜ್ಯ ಸರ್ಕಾರವು ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿರುವ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿಯನ್ನು ಸ್ಥಾಪನೆ ಮಾಡಿದೆ. ಅದರ ಸದಸ್ಯರಾಗಲು ಜಿಲ್ಲೆಯ ಎಲ್ಲ ಗ್ಯಾರೇಜ್ ಕಾರ್ಮಿಕರನ್ನು ಗುರುತಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಶಿಬಿರವನ್ನು ಉದ್ಘಾಟಿಸಿದ್ದಾರೆ. ಮಂಡಳಿ ಸ್ಥಾಪನೆ ಆಗುವಂತೆ ವಿಶೇಷ ಪ್ರಯತ್ನ ಮಾಡಿದ ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ಭಾಗವಹಿಸಿದ್ದಾರೆ.ಜಿಲ್ಲೆಯಲ್ಲಿ ಸುಮಾರು 3,000 ಗ್ಯಾರೇಜು ಮಾಲಕರು ಹಾಗೂ ಕಾರ್ಮಿಕರು ಪ್ರಸ್ತುತ ಕೆಲಸ ಮಾಡುತ್ತಿದ್ದು, ಸರ್ಕಾರಿ ದಾಖಲೆಗಳು ಅಥವಾ ಇತರ ಯಾವ ದಾಖಲೆಗಳಲ್ಲಿಯೂ ಅವರ ನೋಂದಣಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಗ್ಯಾರೇಜು ಕಾರ್ಮಿಕರ ನೋಂದಣಿ ಮಾಡಿ ಕಾರ್ಮಿಕ ಇಲಾಖೆಗೆ ಅವರ ಸಂಪೂರ್ಣ ಮಾಹಿತಿಗಳನ್ನು ದಾಖಲೆ ಸಹಿತ ನೀಡುವ ಹಾಗೂ ಈ ಮೂಲಕ ಸರ್ಕಾರದಿಂದ ದೊರಕುವ ಸೌಲಭ್ಯತೆಗಳನ್ನು ಅವರಿಗೆ ತಲುಪಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸುತ್ತಿದ್ದೇವೆ. ಎಲ್ಲ ಗ್ಯಾರೇಜು ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕು. ಯಾವುದೇ ನೋದಣಿ ಶುಲ್ಕ ಇರುವುದಿಲ್ಲ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆ ಅಧ್ಯಕ್ಷ ರೋಶನ್ ಕರ್ಕಡ, ಪ್ರಮುಖರಾದ ಸಂತೋಷ್ ಕುಮಾರ್, ವಿಲ್ಸನ್ ಅಂಚನ್, ಉದಯ್ ಕಿರಣ್, ನಾರಾಯಣ ಆಚಾರ್ ಕುಂದಾಪುರ, ಕೆ.ಪ್ರಭಾಕರ್, ನವೀನ್ ಉದ್ಯಾವರ, ರಾಜೇಶ್ ಜತ್ತನ್, ಮಹೇಶ್ ಉಪಸ್ಥಿತರಿದ್ದರು.