ಭಟ್ಕಳ: ತಾಲೂಕಿನ ಬೆಳಕೆಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಿರಸಿಯ ಸ್ಕೊಡ್ವೆಸ್ ಸಂಸ್ಥೆ ಹಾಗೂ ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ಸಹಯೋಗದಲ್ಲಿ ಎಂಡೋಸಲ್ಫಾನ್ ಬಾಧಿತ ಮಕ್ಕಳ ಆಶಾಕಿರಣ ಯೋಜನೆ ಮತ್ತು ಎಂಡೋಸಲ್ಫಾನ್ ಮಕ್ಕಳಿಗೆ ವಿವಿಧ ಪರಿಕರ ವಿತರಣಾ ಸಮಾರಂಭವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಂಕರ ರಾವ್ ಉದ್ಘಾಟಿಸಿದರು.
ಆನಂತರ ಮಾತನಾಡಿದ ಅವರು, ಎಂಡೋಸಲ್ಫಾನ್ ಬಾಧಿತರಾದವರಿಗೆ ಪುನಶ್ಚೇತನದ ಅಗತ್ಯವಿದೆ. ಆ ನಿಟ್ಟಿನಲ್ಲಿ ಸ್ಕೊಡ್ವೆಸ್ ಸಹಯೋಗದಲ್ಲಿ ಆಶಾಕಿರಣ ಯೋಜನೆ ಅನುಷ್ಠಾನಕ್ಕೆ ತಂದಿದ್ದಾರೆ. ಇದೊಂದು ಪುಣ್ಯ ಕಾರ್ಯವಾಗಿದೆ. ಎಂಡೋಸಲ್ಫಾನ್ ಪೀಡಿತರಿಗೆ ಸರ್ಕಾರ ₹2 ಸಾವಿರ, ₹4 ಸಾವಿರ ಮಾಸಾಶನ, ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ, ಬಸ್ ಪ್ರಯಾಣ ವೆಚ್ಚ, ಸಲಕರಣೆಗಳನ್ನು ಒದಗಿಸುತ್ತಿದೆ. ಎಂಡೋಸಲ್ಫಾನ್ ಪೀಡಿತರಿಗಾಗಿಯೇ ಸರ್ಕಾರ ಜಿಲ್ಲೆಯಲ್ಲಿ 3 ಶಾಲೆ ಆರಂಭಿಸಲು ನಿರ್ಧರಿಸಿದೆ. ಅದರಂತೆ ಎಂಡೋಸಲ್ಫಾನ್ ಪೀಡಿತರ ಆರೈಕೆಗಾಗಿ ಮಂಕಿಯಲ್ಲಿ ₹20 ಕೋಟಿ ವೆಚ್ಚದ ಎಂಡೋಸಲ್ಫಾನ್ ಆರೈಕೆ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಎಂಡೋಸಲ್ಫಾನ್ ಪೀಡಿತರ ಬಗ್ಗೆ ಕಾಳಜಿ ವಹಿಸುವುದು ತೀರಾ ಅಗತ್ಯವಾಗಿದ್ದು, ಇಂತಹ ಕಾರ್ಯಕ್ಕೆ ಆರೋಗ್ಯ ಇಲಾಖೆಯಿಂದಲೂ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.ಸ್ಕೊಡ್ವೆಸ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ವೆಂಕಟೇಶ ನಾಯ್ಕ ಮಾತನಾಡಿ, ಭಟ್ಕಳದಲ್ಲಿ 230 ಮಂದಿ ಎಂಡೋಸಲ್ಫಾನ್ ಬಾಧಿತರನ್ನು ಗುರುತಿಸಿ, ಅವರಿಗೆ ಆಶಾಕಿರಣ ಯೋಜನೆಯಡಿ ಸೌಲಭ್ಯ ವಿತರಿಸಲಾಗುತ್ತದೆ. ಎರಡು ತಿಂಗಳುಗಳ ಕಾಲ ಬೆಳಕೆಯಲ್ಲೇ 230 ಮಂದಿ ಎಂಡೋ ಸಲ್ಫಾನ್ ಬಾಧಿತರಿಗೆ ಸೂಕ್ತ ಚಿಕಿತ್ಸೆ, ಫಿಸಿಯೋಥರಪಿ ಮಾಡಲಾಗುತ್ತದೆ. ಅವರನ್ನು ಮನೆಯಿಂದ ಸಂಚಾರಿ ಘಟಕದ ಮೂಲಕ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗುತ್ತದೆ. ಸಚಿವ ಮಂಕಾಳ ವೈದ್ಯ ಅವರು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಾಧಿತರ ಬಗ್ಗೆ ಸರ್ವೆ ಮಾಡಿಸಿರುವುದು ಅವರನ್ನು ಗುರುತಿಸಿ ಚಿಕಿತ್ಸೆ ಮತ್ತು ವಿವಿಧ ಸೌಲಭ್ಯ ಕೊಡಲು ಅನುಕೂಲವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬೆಳಕೆ ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ ನಾಯ್ಕ ಮಾತನಾಡಿ, ಬೆಳಕೆಯಲ್ಲಿ ಎಂಡೋಸಲ್ಫಾನ್ ಬಾಧಿತರಿಗೆ ಎರಡು ತಿಂಗಳು ಕಾಲ ಚಿಕಿತ್ಸೆ ಮತ್ತು ವಿವಿಧ ಸೌಲಭ್ಯ ಒದಗಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟಿನ ಸದಸ್ಯ ಜಯರಾಮನ್, ಸಹಾಯಕ ಆಯುಕ್ತ ಕಚೇರಿಯ ತಹಸೀಲ್ದಾರ್ ಪ್ರವೀಣ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಿಯಾ, ತೋಟಗಾರಿಕೆ ಅಧಿಕಾರಿ ಶ್ರವಣಕುಮಾರ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪೂರ್ಣಿಮಾ ಮೊಗೇರ, ಬೆಳಕೆಯ ಹೈಸ್ಕೂಲ್ ಮುಖ್ಯಶಿಕ್ಷಕಿ ಶಾಲಿನಿ ನಾಯ್ಕ ಮುಂತಾದವರಿದ್ದರು. ಸ್ಕೊಡ್ವೆಸ್ ಸಂಸ್ಥೆಯ ಸಂಪರ್ಕ ಅಧಿಕಾರಿ ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಎಂಡೋಸಲ್ಫಾನ್ ಬಾಧಿತ ವಿದ್ಯಾರ್ಥಿ ಸಾಹಿಲ್ ಪ್ರಾರ್ಥಿಸಿದರು. ಎಂಡೋಸಲ್ಫಾನ್ ಬಾಧಿತರಿಗೆ ವಿವಿಧ ಪರಿಕರ ನೀಡಲಾಯಿತು.