ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಧಾನಿ ಮೋದಿಯವರ ಕಲ್ಯಾಣ ರಾಜ್ಯದ ಕನಸಿಗೆ ಎಲ್ಲರೂ ಬೆಂಬಲ ಕೊಟ್ಟಾಗ ಮಾತ್ರ ವಿಕಸಿತ ಭಾರತ ಆಗುತ್ತದೆ. ಅದಕ್ಕೆ ಎಲ್ಲ ವರ್ಗದ ಜನರು ಬೆಂಬಲ ಕೊಡಬೇಕು. ಸಂವಿಧಾನ ವಿರೋಧಿ ಕಾಂಗ್ರೆಸ್ ಅನ್ನು ಎಲ್ಲರೂ ತಿರಸ್ಕರಿಸಬೇಕು. ಸಂವಿಧಾನಕ್ಕೆ ನಮ್ಮ ಬೆಂಬಲ ಎಂದು ಸಂಕಲ್ಪ ಮಾಡಬೇಕು. ಸಂವಿಧಾನ ರಕ್ಷಣೆ ಕ್ರಾಂತಿಯಾಗಲಿ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದಲ್ಲಿ ಶನಿವಾರ ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಸಂಸ್ಥೆ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದ ಸಂಸ್ಕೃತಿಯಲ್ಲಿ ಪ್ರಾಯಶ್ಚಿತ ಎನ್ನುವ ಪದ ಇದೆ. ಯಾರು ಪಾಪ ಮಾಡುತ್ತಾರೋ ಅವರು ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ಡಾ.ಅಂಬೇಡ್ಕರ್ ಅವರಿಗೆ ಯಾರು ಅನ್ಯಾಯ ಮಾಡಿದರು ಎಂದು ಎಳೆಎಳೆಯಾಗಿ ಬಿಡಿಸಿದರು.
ಆಗ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ ಅಂಬೇಡ್ಕರ್ ರವರನ್ನು ಸಂವಿಧಾನ ರಚನಾ ಸಮಿತಿಯಲ್ಲಿಯೇ ಬರದಂತೆ ನೋಡಿದರು. ಅಂಬೇಡ್ಕರ್ರನ್ನು ಚುನಾವಣೆಯಲ್ಲಿ ಸೋಲಿಸಿದರು. ಅಂಬೇಡ್ಕರ್ ಅವರು ದಲಿತ ಸಮುದಾಯದ ಸರ್ವ ಸಮ್ಮತ ನಾಯಕರಾಗಿದ್ದರು. ಅದೇ ಕಾರಣಕ್ಕೆ ಅವರನ್ನು ಸಂವಿಧಾನ ರಚನಾ ಸಮಿತಿಯಿಂದ ಹೊರಗಿಡುವ ಪ್ರಯತ್ನ ಮಾಡಿದ್ದರು. ಪೂನಾ ಫ್ಯಾಕ್ಟ್ ಅಂತ ಒಪ್ಪಂದ ಆಗಿತ್ತು. ಅಂಬೇಡ್ಕರ್ ಅವರು ಎಸ್ಸಿ ಸಮುದಾಯದ ಧ್ವನಿಯಾಗಿ ನಿಂತಿದ್ದರು. ಫೂನಾ ಫ್ಯಾಕ್ಸ್ ಕುರಿತು ಗಾಂಧಿಜಿ ಜೊತೆ ಚರ್ಚಿಸಿ ದಲಿತರಿಗೆ ಮೀಸಲಾತಿ ವ್ಯವಸ್ಥೆ ಜಾರಿಗೆ ತರುವಲ್ಲಿ ಯಶಸ್ವಿಯಾದರು. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯಲ್ಲಿ ಇರದೇ ಇದ್ದರೆ ಏನಾಗುತ್ತಿತ್ತು ಎಂದು ಪಶ್ನಿಸಿದರು.ಪಶ್ಚಾತಾಪಕ್ಕಾಗಿ ಸಂವಿಧಾನ:
ಅಂಬೇಡ್ಕರ್ ಅವರಿಗೆ ಅನ್ಯಾಯವಾದರೆ ಸಂವಿಧಾನಕ್ಕೆ ಅನ್ಯಾಯವಾದಂತೆ. ಅದಕ್ಕೆ ಈಗ ಕಾಂಗ್ರೆಸ್ನವರು ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. 2024ರ ಲೋಕಸಭೆ ಚುನಾವಣೆ ನಂತರ ಸಂವಿಧಾನ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅವರ ವೋಟ್ ಬ್ಯಾಂಕ್ ಆಗಿ ಎಸ್ಸಿ, ಎಸ್ಟಿ ಸಮುದಾಯ ಉಳಿದಿಲ್ಲ ಅನ್ನುವ ಆತಂಕ ಶುರುವಾಗಿದೆ. ಅದಕ್ಕೆ ಅವರು ಈಗ ಸಂವಿಧಾನ ಹಿಡಿದುಕೊಂಡು ಓಡಾಡುತ್ತಿದ್ದಾರೆ. ನಮ್ಮ ಪಧಾನಿಯವರು ಸಂವಿಧಾನಕ್ಕೆ ನಮಿಸಿ ಅಧಿಕಾರ ಸ್ವೀಕರಿಸಿದರು. ನಮ್ಮ ಆಚಾರ, ವಿಚಾರ, ನಡೆಯಲ್ಲಿ ಸಂವಿಧಾನ ಇದೆ. ಕಾಂಗ್ರೆಸ್ಸಿಗರ ಆಚಾರದಲ್ಲಿ ಸಂವಿಧಾನ ಪಾಲನೆ ಇಲ್ಲ. ಅದಕ್ಕಾಗಿ ಅವರು ಪಶ್ಚಾತಾಪಕ್ಕಾಗಿ ಈಗ ಸಂವಿಧಾನ ಪ್ರತಿ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಎಂದು ಸಂಸದರು ಹೇಳಿದರು.ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದ್ದರೆ, ಅದಕ್ಕೆ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಕಾರಣ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟಿದ್ದ ಇಂದಿರಾ ಗಾಂಧಿಯನ್ನು ದೇಶದ ಜನರು ಹೀನಾಯವಾಗಿ ಸೋಲಿಸಿದರು. ಸಂವಿಧಾನದ ಮೂಲ ಆಶಯ ಬದಲು ಮಾಡಲು ಮುಂದಾದಾಗ ಸುಪ್ರೀಂ ಕೋರ್ಟ್ ಕೇಶವಾನಂದ ಭಾರ್ತಿ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸಂವಿಧಾನದ ಮೂಲ ಆಶಯ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು. ಒಂದು ದಿನ ತಡವಾಗಿದ್ದರೆ, ಇಂದಿರಾ ಗಾಂಧಿ ರಾಜೀನಾಮೆ ಕೊಡಬೇಕಿತ್ತು. ಅವರ ವಿರುದ್ಧ ಆದೇಶ ಬಂದಾಗ ರಾತ್ರೋ ರಾತ್ರಿ ತುರ್ತು ಪರಿಸ್ಥಿತಿ ಹೇರಿದರು. ಕಾಂಗ್ರೆಸ್ಸಿಗರು ಅಲ್ಪ ಸಂಖ್ಯಾತರ ಬಗ್ಗೆ ಬಹಳ ಮಾತನಾಡುತ್ತಾರೆ. ಅಲ್ಪಸಂಖ್ಯಾತರು ಮತ್ತು ಎಸ್ಸಿ, ಎಸ್ಟಿ ಸಮುದಾಯಕ್ಕೆ ಕಾಂಗ್ರೆಸ್ ದೊಡ್ಡ ಅನ್ಯಾಯ ಮಾಡಿದೆ. ಶಾಭಾನು ಪ್ರಕರಣದಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅದನ್ನು ಮೊದಲು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಒಪ್ಪಿದ್ದರು. ಆದರೆ, ಮುಸ್ಲಿಂ ಧರ್ಮ ಗುರುಗಳು ಬಂದು ನಾವು ಷರಿಯತ್ ಕಾನೂನು ಪಾಲನೆ ಮಾಡುತ್ತೇವೆ. ನೀವು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿದರೆ, ನಾವು ಒಪ್ಪುವುದಿಲ್ಲ ಎಂದು ಬೆದರಿಕೆ ಹಾಕಿದರು. ರಾಜೀವ್ ಗಾಂಧಿ ಅದನ್ನು ಒಪ್ಪಿ ಸುಪ್ರೀಂ ಆದೇಶ ಪಾಲನೆ ಮಾಡಲಿಲ್ಲ ಎಂದರು.
ಅಂಬೇಡ್ಕರ್ ಅವರು ಮುಸ್ಲಿಂಮರಿಗೆ ಹೇಗೆ ಪತ್ಯೇಕ ಕಾನೂನಿದೆಯೋ ಅದೇ ರೀತಿ ಹಿಂದೂಗಳಿಗೂ ಪ್ರತ್ಯೇಕ ಕಾನೂನು ಇರಬೇಕು ಎಂದು ಹೇಳಿದರು. ಅದಕ್ಕಾಗಿ ರಾಜೀನಾಮೆ ನೀಡಿದರು. ರಾಹುಲ್ ಗಾಂಧಿಯವರು ಈಗ ಜಾತಿ ಗಣತಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಎಂ.ಎನ್ ರಾಯ್ ಅವರು ನಮ್ಮ ತಂದೆಯ ಗುರುಗಳು, ಅವರು 1934ರಲ್ಲಿ ಸಂವಿಧಾನ ರಚನಾ ಸಮಿತಿ ಆಗಬೇಕು ಅಂತ ಹೇಳಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಅನಾಮಧೇಯ ಹೋರಾಟಗಾರಿದ್ದರೋ, ಸಂವಿಧಾನ ರಚನೆಯಲ್ಲಿಯೂ ಅನಾಮಧೇಯ ಚಿಂತಕರಿದ್ದರು ಎಂದು ಬೊಮ್ಮಾಯಿ ಅವರು ತಿಳಿಸಿದರು.ಸಂವಿಧಾನದಲ್ಲಿ ಬಸವ ತತ್ವ:
ನಮ್ಮದು ಬಸವಣ್ಣನವರ ನಾಡು, ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪ, ಸಂವಿಧಾನದಲ್ಲಿಯೂ ಬಸವಣ್ಣನವರ ತತ್ವಗಳಿವೆ. ಸಮಾನತೆ, ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ ಇವೆಲ್ಲ ಸಂವಿಧಾನದಲ್ಲಿವೆ. ಕೇಂದ್ರದ ಅಧಿಕಾರ ದುರುಪಯೋಗ ಪಡೆಸಿಕೊಂಡು ರಾಜ್ಯಗಳ ಅಧಿಕಾರ ಮೊಟಕುಗೊಳಿಸುವ ಕೆಲಸ ಮಾಡಿದ್ದು ಕಾಂಗ್ರೆಸ್, ಚುನಾಯಿತ ಸರ್ಕಾರ ಇಲ್ಲದಿರುವಾಗಲೇ ಕಾಂಗ್ರೆಸ್ ರಾಜ್ಯಗಳ ಅಧಿಕಾರ ಮೊಟಕುಗೊಳಿಸಿತ್ತು. ನಮ್ಮ ತಂದೆಯವರ ಸರ್ಕಾರವನ್ನು ಕಾಂಗ್ರೆಸ್ ತೆಗೆದು ಹಾಕಿತ್ತು. ನಮ್ಮ ತಂದೆಯವರು ಸುಮ್ಮನೆ ಕೂಡಲಿಲ್ಲ. ಆಗ ಸುಪ್ರೀಂ ಕೋರ್ಟ್ ನ್ಯಾಯವಾದಿ ರಾಮ್ಜೆನ್ಮಲಾನಿ ಅವರು ಈ ಪ್ರಕರಣದಲ್ಲಿ ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು. ಆದರೆ, ನಮ್ಮ ತಂದೆಯವರು ಈ ಪ್ರಕರಣವನ್ನು ನನಗಾಗಿ ಹೋರಾಟ ಮಾಡುವುದಿಲ್ಲ. ಪ್ರಜಾಪಭುತ್ತದ ಉಳಿವಿಗಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿ ಕೋರ್ಟ್ಲ್ಲಿ ವಾದ ಮಾಡಿ ಕೇಸ್ ಗೆದ್ದರು.ಕಾಂಗ್ರೆಸ್ಗೆ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇಲ್ಲ. ಸಂವಿಧಾನದ ಬಗ್ಗೆ ಕಾಂಗ್ರೆಸ್ ಮಾತನಾಡುವುದು ದೆವ್ವದ ಬಾಯಿಯಲ್ಲಿ ಭಗವದ್ಗೀತೆ ಹೇಳಿದಂತೆ. ಜಯಪ್ರಕಾಶ್ ನಾರಾಯಣ ಅವರ ಸಂಪೂರ್ಣ ಕ್ರಾಂತಿ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ಎಂದೇ ಬಿಂಬಿತವಾಗಿದೆ. ಈಗಲೂ ಸಂವಿಧಾನದ ಬಗ್ಗೆ ಯಾಕೆ ಮಾತನಾಡುತ್ತೇವೆ ಎಂದರೆ, ಮುಂದಿನ ಪೀಳಿಗೆಗೆ ಸಂವಿಧಾನದ ಬಗ್ಗೆ ತಿಳಿಸಬೇಕಿದೆ. ಸಂವಿಧಾನ ಇದ್ದರೆ ಮಾತ್ರ ನಾವು ಎಲ್ಲರೂ ಮುಕ್ತವಾಗಿ ಇರಲು ಸಾಧ್ಯ. ಚೈನಾ ದೇಶ ನಮಗಿಂತ ಆರ್ಥಿಕವಾಗಿ ಪ್ರಬಲವಾಗಿದೆ. ಆದರೆ, ಸ್ವಾತಂತ್ರ್ಯ ಇಲ್ಲ. ಮಾತನಾಡುವ ಹಕ್ಕಿಲ್ಲ. ಸಂವಿಧಾನ ರಕ್ಷಣೆಯನ್ನು ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಶ್ಚಾತಾಪ ಪಡುವ ಸಮಯ ಬರುತ್ತದೆ. ಈ ಸಂದೇಶವನ್ನು ಎಲ್ಲರ ಮನೆಗಳಿಗೂ ತಲುಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುಳೇದಗುಡ್ಡ ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಎನ್.ಮಹೇಶ್, ಪುಸ್ತಕ ಲೇಖಕ ವಿಕಾಸ್ ಕುಮಾರ್, ಶಾಸಕ ಸಿದ್ದು ಸವದಿ, ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.