ಕಾಪು: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ಆಶ್ರಯದಲ್ಲಿ ಬಂಟಕಲ್ಲು ಕಸಾಪ ಕಾಪು ತಾಲೂಕು ಕಾರ್ಯಾಲಯ ‘ನುಡಿ’ಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಡುಪಿಯ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ವಿದ್ಯಾ ಪ್ರಕಾಶ್ ಅಮ್ಮಣ್ಣಾಯ ಅವರ ‘ಭಕ್ತಿ ಭಾವ ಲಹರಿ’ ಗೀತಾ ಸಂಕಲನವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಅವರು, ಈ ಗೀತಾ ಸಂಕಲನವು ಧ್ವನಿ ಕಾವ್ಯದ ಆತ್ಮ ಎನ್ನುವ ಮಾತಿಗೆ ಪೂರಕವಾಗಿದೆ. ವಿದ್ಯಾ ಇವರ ಕಾವ್ಯ ರಚನೆಗಳಲ್ಲಿ ಭಕ್ತಿ ಭಾವ ತುಂಬಿ ತುಳುಕುವುದರಿಂದ ಸುಶ್ರಾವ್ಯವಾಗಿ ಹಾಡುವ ಕೀರ್ತನೆಗಳಾಗಿವೆ. ಭಜನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸಲು ಸ್ವರ ಸಂಯೋಜನೆ ಮಾಡಿ ಹಾಡಲು ಯೋಗ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಮನೋಹರ್ ಪಿ., ತಾಲೂಕು ಘಟಕದ ಗೌರವ ಸಲಹಾ ಸಮಿತಿ ಜಿಲ್ಲಾ ಪ್ರತಿನಿಧಿ ಕೆ.ದೇವದಾಸ್ ಹೆಬ್ಬಾರ್, ಕಾಪು ತಾಲೂಕು ಘಟಕದ ಗೌ.ಕಾರ್ಯದರ್ಶಿ ನೀಲಾನಂದ ನಾಯ್ಕ್, ತಾಲೂಕು ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್, ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ, ನಿವೃತ್ತ ಉಪನ್ಯಾಸಕ ಕೆ.ಭಾಸ್ಕರ ಕಾಮತ್, ಸತ್ಯಸಾಯಿ ಪ್ರಸಾದ್, ಮಧುಕರ್ ಎಸ್.ಕಲ್ಯಾ, ಜಿನೇಶ್ ಬಲ್ಲಾಳ್ ಕುತ್ಯಾರು, ಸುಂದರ ಟಿ.ಪಾಂಬೂರು ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ವಂದಿಸಿದರು.