ಕನ್ನಡಪ್ರಭ ವಾರ್ತೆ ಹೊಸಪೇಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ರಾಜ್ಯದ ಬಡವರ ಉದ್ಧಾರ ಮಾಡಿದೆ. ಕಾಂಗ್ರೆಸ್‌ ನುಡಿದಂತೆ ನಡೆದಿದೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌ ಹೇಳಿದರು.

ನಗರದ ಚಿತ್ತವಾಡ್ಗಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಪರ ಮಂಗಳವಾರ ರೋಡ್‌ ಶೋ ನಡೆಸಿ ಮಾತನಾಡಿದರು.

ಕೇಂದ್ರ ಸರ್ಕಾರ ಜನ ಕಲ್ಯಾಣ ನಡೆಸುತ್ತಿಲ್ಲ. ಬರೀ ಶ್ರೀಮಂತರ ಪರ ನಿಂತಿದೆ. ಕಾರ್ಪೋರೇಟ್‌ ವಲಯದವರಿಗೆ ಲಾಭ ಮಾಡಿಕೊಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಈ ಐದು ಗ್ಯಾರಂಟಿಗಳ ಜೊತೆಗೆ ಇನ್ನೂ 25 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಬಡ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರು. ನೀಡಲಿದೆ. ಯುವಕರಿಗೆ ಉದ್ಯೋಗ ಗ್ಯಾರಂಟಿ ನೀಡಲಿದೆ. ರೈತರ, ಕಾರ್ಮಿಕರ ಕಲ್ಯಾಣಕ್ಕೆ ಒತ್ತು ನೀಡಲಾಗುವುದು ಎಂದರು.

ಬಡವರಿಗೆ ಮನೆ ನೀಡಲು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸ್ತು ಎಂದಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಮನೆ ನಿರ್ಮಾಣ ನಿಂತಿದೆ. ಈ ಮನೆಗಳ ನಿರ್ಮಾಣಕ್ಕೆ ಒತ್ತು ನೀಡಲು ಸಿದ್ದರಾಮಯ್ಯನವರು ನೂರಾರು ಕೋಟಿ ರು. ಮಂಜೂರಾತಿ ನೀಡಿದ್ದಾರೆ. ಉಳಿದ ಮನೆಗಳನ್ನು ಕೂಡ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು. ಬಡವರು ಸ್ವಂತ ಮನೆ ಕಟ್ಟಿಕೊಳ್ಳಲು ಕ್ರಮವಹಿಸಲಾಗುವುದು ಎಂದರು.


ಶಾಸಕ ಎಚ್.ಆರ್. ಗವಿಯಪ್ಪ, ಲೋಕಸಭಾ ಅಭ್ಯರ್ಥಿ ಈ. ತುಕಾರಾಂ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಇದ್ದರು.