ಪುನರ್ಬಲನ ತರಗತಿಗಳನ್ನು ಮೇ ೨೯ರಿಂದ ಆರಂಭಿಸಿ

| Published : May 19 2024, 01:50 AM IST

ಸಾರಾಂಶ

ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಪುನರ್ಬಲನ ತರಗತಿಗಳನ್ನು ಮೇ ೧೫ರ ಬದಲು ಮೇ ೨೯ರಿಂದ ಆರಂಭಿಸುವಂತೆ ಒತ್ತಾಯಿಸಿ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಹರಿಹರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹರಿಹರ

ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಪುನರ್ಬಲನ ತರಗತಿಗಳನ್ನು ಮೇ ೧೫ರ ಬದಲು ಮೇ ೨೯ರಿಂದ ಆರಂಭಿಸುವಂತೆ ಒತ್ತಾಯಿಸಿ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ್ ಮಾತನಾಡಿ, ಪುನರ್ಬಲನ ತರಗತಿಗಳನ್ನು ತೆಗೆದುಕೊಳ್ಳಲು ಸಹ ಶಿಕ್ಷಕರು ಶಾಲಾ ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶಿಸಿರುವುದು ಗಮನಕ್ಕೆ ಬಂದಿದೆ. ಈ ವಿಚಾರವು ಶಿಕ್ಷಕರ ಸಮುದಾಯದಲ್ಲಿ ತೀವ್ರ ಅಸಮಾಧಾನ, ಆಕ್ರೋಶಕ್ಕೂ ಅವಕಾಶ ಮಾಡಿಕೊಟ್ಟಿದೆ ಎಂದರು.

ಶಿಕ್ಷಣ ಇಲಾಖೆ ರಜಾಸಹಿತ ಇಲಾಖೆ ಆಗಿದ್ದರೂ ಸಹಶಿಕ್ಷಕರು ರಜೆ ಅವಧಿಯಲ್ಲಿ ಏಪ್ರಿಲ್ ತಿಂಗಳು ಬಹುತೇಕ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಳಿಸಿರುತ್ತಾರೆ. ಅಲ್ಲದೇ, ಚುನಾವಣಾ ಕರ್ತವ್ಯಗಳು ಚೆಕ್ ಪೋಸ್ಟ್, ಸೆಕ್ಟರ್, ಮಾಸ್ಟರ್ ಟ್ರೈನರ್ ಐಎಲ್ಒ ನಿಯೋಜನೆ ಹೀಗೆ ಹಲವಾರು ನಿಯೋಜನೆ ಕರ್ತವ್ಯಗಳಲ್ಲಿಯೂ ರಜಾ ಅವಧಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.

ಮಾತ್ರವಲ್ಲದೇ, ಶೈಕ್ಷಣಿಕ ಅವಧಿಯಲ್ಲಿಯೂ ಶಿಕ್ಷಕರು ಪಾಠ ಬೋಧನೆ ಪರೀಕ್ಷೆಗಳ ಆಯೋಜನೆ ಪ್ರತಿದಿನ ವಿಶೇಷ ತರಗತಿ, ಗುಂಪು ಅಧ್ಯಯನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗಮನ ನೀಡುವುದು. ಪಾಸಿಂಗ್ ಪ್ಯಾಕೇಜ್ ಅಭ್ಯಾಸ ಮಾಡಿಸುವುದು, ಮಕ್ಕಳ ಮನೆ ಭೇಟಿ, ಪೋಷಕರ ಸಭೆಗಳು, ಪೋಷಕರ ಹಾಗೂ ತಾಯಂದಿರ ಸಭೆಗಳು, ವಿಷಯವಾರು ತಜ್ಞರಿಂದ ತರಬೇತಿಗಳ್ಳನ್ನು ಕೈಗೊಳ್ಳುತ್ತೇವೆ ಎಂದರು.

ವಿದ್ಯಾಥಿಗಳು ಉತ್ತೀರ್ಣರಾಗಲು ಸಹಶಿಕ್ಷಕರು ಪ್ರಯತ್ನ ಪಟ್ಟಿದ್ದರೂ ಶಿಕ್ಷಕರ ಮೇಲೆ ಸ್ವಲ್ಪವೂ ಗೌರವ, ಮಾನವೀಯತೆ ಇಲ್ಲ ಎಂಬುದು ಈ ಆದೇಶ ದಿಂದ ಎದ್ದು ಕಾಣುತ್ತದೆ. ಉತ್ತಮ ಶಿಕ್ಷಣ ನೀಡುವ ಮನಸ್ಥಿತಿಯಲ್ಲಿರುವ ಶಿಕ್ಷಕರ ಹೃದಯವನ್ನು ಕದಡುತ್ತಿದ್ದು, ಇಂತಹ ಆದೇಶಗಳು ಬಹುತೇಕ ಶಿಕ್ಷಕರು ಭ್ರಮನಿರಸನಗೊಂಡು ಸ್ವಯಂ ನಿವೃತ್ತಿಗೆ ಆಲೋಚನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಹೇಳಿದರು.

ಮನವಿ ಸಲ್ಲಿಸುವ ಈ ವೇಳೆ ತಾಲೂಕು ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ. ಧನ್ಯಕುಮಾರ್, ರಾಜ್ಯ ಪರಿಷತ್ತು ಸದಸ್ಯ ಡಿ.ಎಂ. ಮಂಜುನಾಥಯ್ಯ, ಜಿಲ್ಲಾ ಪ್ರತಿನಿಧಿ ಎಂ.ಇ. ಲಿಂಗರಾಜ್, ಮುಖ್ಯೋಪಾಧ್ಯಾಯರ ಸಂಘದ ಬಿ.ರೇವಣ ನಾಯ್ಕ್ ಇದ್ದರು.

- - -

ಬಾಕ್ಸ್ ಮಾನಸಿಕ ಒತ್ತಡ: ಶಿಕ್ಷಕರಲ್ಲಿ ಅಸಮಾಧಾನ ನಿರಂತರ ಮಾನಸಿಕ ಒತ್ತಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಇಒ, ಡಿಡಿಪಿಐ ಮೂಲಕ ಶಿಕ್ಷಕರನ್ನು ರಜಾ ಅವಧಿಯಲ್ಲಿಯೂ ಒತ್ತಾಯಪೂರ್ವಕವಾಗಿ ಕರ್ತವ್ಯಕ್ಕೆ ಹಾಜರಾಗಲು ಹೇಳುತ್ತಿರುವುದು ಸಹ ಶಿಕ್ಷಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಈಶಪ್ಪ ಬೂದಿಹಾಳ್‌ ತಿಳಿಸಿದರು. ಈ ಹಿನ್ನೆಲೆ ಮೇ ೧೫ರ ಬದಲು ಎಸ್‌ಎಸ್‌ಎಲ್‌ಸಿ ಪುನರ್ಬಲನ ತರಗತಿಗಳನ್ನು ಮೇ ೨೯ರಿಂದ ಜೂನ್ ೦೬ ರವರೆಗೆ ೧೦ ದಿನಗಳ ಅವಧಿಗೆ ಆಯೋಜಿಸುವುದು ಮತ್ತು ಶಿಕ್ಷಣ ಇಲಾಖೆಯನ್ನು ರಜಾರಹಿತ ಇಲಾಖೆ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.

- - -

-೧೮ಎಚ್‌ಆರ್‌ಆರ್೨:

ಪುನರ್ಬಲನ ತರಗತಿಗಳನ್ನು ಮೇ ೨೯ರಿಂದ ಆರಂಭಿಸುವಂತೆ ಒತ್ತಾಯಿಸಿ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.