ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ವ್ಯಕ್ತಿಯ ಸ್ಪೂರ್ತಿದಾಯಕ ಪ್ರಯಾಣವನ್ನು ಆಧರಿಸಿದೆ. ಶತಮಾನದಿಂದಲೂ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಮತ್ತು ಹೋರಾಟವನ್ನು ನಾವು ಸ್ಮರಿಸಲೇಬೇಕು ಎಂದು ಅಂಬೇಡ್ಕರ್ ವಂಶಜ ರಾಜರತ್ನ ಅಂಬೇಡ್ಕರ್ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ, ಸಿಂದಗಿ ಜೈಭೀಮ ನಗರ ಹಾಗೂ ದಲಿತ ಸಂಘಟನೆಗಳ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಮತ್ತು ಬುದ್ಧವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ವಿಚಾರಧಾರೆ ಪಾಲನೆ ಮಾಡುವವರು ಅವರ ನಿಜವಾದ ಅನುಯಾಯಿಗಳು. ಅವರ ಸಿದ್ದಾಂತವನ್ನು ಅನುಸರಿಸುವ ಮೂಲಕ ಅನುಯಾಯಿಗಳಾಗಬೇಕು. ದಲಿತರು ಯಾರನ್ನೂ ಅವಲಂಭಿಸಬಾರದು ಎಂಬುದು ಅಂಬೇಡ್ಕರ್ ಅವರ ಇಚ್ಚೆಯಾಗಿತ್ತು. ಅದರೀಗ ದಲಿತರು ಹಿತಕಾಯುವ ಸಂವಿಧಾನವನ್ನು ದುರ್ಬಲಗೊಳಿಸಿ, ಸರ್ಕಾರಿ ಸಂಸ್ಥೆಗಳೆಲ್ಲವನ್ನೂ ಹಾನಿ ಮಾಡಲಾಗುತ್ತಿದೆ. ಇದು ಬಾಬಾ ಸಾಹೇಬರಿಗೆ ಮೊದಲೇ ಗೊತ್ತಿತ್ತು. ಹೀಗಾಗಿ ದಲಿತರ ಹಿತಾಸಕ್ತಿ ರಕ್ಷಣೆಗಾಗಿ ಅವರು ಸಂವಿಧಾನವೊಂದನ್ನೇ ಕೊಟ್ಟು ಹೋಗಿಲ್ಲ. ಬುದ್ಧ ಮಾರ್ಗವನ್ನೂ ಬಿಟ್ಟು ಹೋಗಿದ್ದಾರೆ. ಸಂವಿಧಾನ ನಮ್ಮನ್ನು ರಕ್ಷಣೆ ಮಾಡದಿದ್ದರೆ ಇದುವೇ ನಮ್ಮ ರಕ್ಷಣೆಗೆ ಬರಲಿದೆ ಎಂದರು.ಸದ್ಯ ದೇಶದಲ್ಲಿ ಸಂವಿಧಾನ ತಿದ್ದುಪಡಿ ಮೀಸಲಾತಿ ಕಿತ್ತುಕೊಳ್ಳುವ ಹುನ್ನಾರವನ್ನು ಮನುವಾದಿಗಳು ಮಾಡುತ್ತಿದ್ದು, ಈ ಬಗ್ಗೆ ಎಲ್ಲರೂ ಎಚ್ಚರದ ಹೆಜ್ಜೆ ಇಡಬೇಕು. ಅಂಬೇಡ್ಕರ್ ಪಟ್ಟಿರುವ ಶ್ರಮವನ್ನು ನಾವಿಂದು ನೆನಪಿಸಿ ಮುನ್ನಡೆಯಬೇಕಿದೆ. ಅದಕ್ಕೆ ಸಂವಿಧಾನ ಪೀಠಿಕೆಯ ಮಹತ್ವ ಅರಿತು ಅದಕ್ಕೆ ತೊಡಕುಂಟು ಮಾಡುತ್ತಿರುವ ಶಕ್ತಿಯನ್ನು ದೂರವಿರಿಸಬೇಕು ಎಂದು ಎಚ್ಚರಿಸಿದರು.ಶಾಸಕ ಅಶೋಕ ಮನಗೂಳಿ ಮಾತನಾಡಿ, ಅಂಬೇಡ್ಕರ ಅವರ ಹೋರಾಟ, ಅವರು ಹಾಕಿಕೊಟ್ಟ ಸಂವಿಧಾನದಿಂದ ನಾವು ಮಾನವರಾಗಿ ಬಾಳುತ್ತಿದ್ದೇವೆ. ಈ ಭೂಮಿ ಇರುವವರೆಗೂ ಸಂವಿಧಾನ ಉಳಿಯಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಪೂಜಿಸಿ, ಅನುಸರಿಸಿ ಅವರ ತತ್ವಾದಾರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಆಲಮೇಲ ಪಪಂ ಅಧ್ಯಕ್ಷ ಸಾದಿಕ್ ಸುಂಬಡ ಮಾತನಾಡಿದರು. ಸಾನಿಧ್ಯವನ್ನು ಸಿಂದಗಿ ಬುದ್ಧವಿಹಾರ ಧಮ್ಮ ವಿಜಯಾ ಭಂತೆ ಸಂಘಪಾಲ ಬಂತೇಜ ಆಶೀರ್ವಚನ ನೀಡಿದರು. ಪ್ರಶಾಂತ ಸುಣಗಾರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ರಾಜಶೇಖರ ಕೂಚಬಾಳ, ಚಂದ್ರಕಾಂತ ಸಿಂಗೆ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ರಾಕೇಶ ಕಲ್ಲೂರ, ಸಲಿಂ ಪಟೇಲ್ ಮರ್ತೂರ, ಗೊಲ್ಲಾಳಪ್ಪಗೌಡ ಮಾಗಣಗೇರಿ, ಪೀರು ಕೆರೂರ, ಸಂತೋಷ ಪಾಟೀಲ, ಭೀಮು ಬಮ್ಮನಹಳ್ಳಿ, ಯಮನಪ್ಪ ಹೊಸಮನಿ, ಶೈಲಜಾ ಸ್ಥಾವರಮಠ, ಅಂಬಿಕಾ ಪಾಟೀಲ, ಎಸ್.ಎಂ.ಚಿಗರಿ, ಸೈನಾಜ ಮಸಳಿ, ರಾಮು ಅಗ್ನಿ, ಪರಶುರಾಮ ಕಾಂಬಳೆ ಸೇರಿ ಅಂಬೇಡ್ಕರ್ ಅಭಿಮಾನಿಗಳು ಇದ್ದರು.