ಸಾರಾಂಶ
ಕನಕಪುರ: ಮಾನವ ಜನ್ಮ ಶ್ರೇಷ್ಠವಾದದ್ದು, ಜೀವನ ಸಾರ್ಥಕತೆಗೆ ಧರ್ಮದ ಹಾದಿಯಲ್ಲಿ ಆಧ್ಯಾತ್ಮಿಕತೆ ಅಳವಡಿಸಿಕೊಂಡು ಏಕಾಗ್ರೆತೆಯಿಂದ ಸಾಗಿದಾಗ ಜೀವನವು ಅಮೂಲ್ಯವಾಗಿರುತ್ತದೆ ಎಂದು ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.
ಭಾನುವಾರ ಕೋಟೆ ಶ್ರೀರಾಮ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು, ಸ್ವ-ಸಹಾಯ ಸಂಘಗಳಿಂದ ಆಯೋಜಿಸಿದ್ದ ಸಹಸ್ರ ಬಿಲ್ವಾರ್ಚನೆ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಮನುಷ್ಯ ಸಂಘ ಜೀವಿಯಾಗಿದ್ದು, ಧಾರ್ಮಿಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಬಿಲ್ವಾರ್ಚನೆಯಿಂದ ಮನುಷ್ಯನ ಪಾಪ ನಿವಾರಣೆಯಾಗಲಿದೆ. ಕೋಟಿ ಪುಣ್ಯಕ್ಕೆ ಸಮನಾದ ಈ ಪೂಜೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಧರ್ಮಸ್ಥಳವು ಡಾ.ವೀರೇಂದ್ರ ಹೆಗಡೆಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕಷ್ಟೇ ಸೀಮಿತಿವಾಗಿರದೇ ಗ್ರಾಮಾಭ್ಯುದಯ, ಆರ್ಥಿಕ ಸಬಲತೆ, ಕೃಷಿ, ಸಾಮಾಜಿಕ ಕ್ಷೇತ್ರ, ಜನರ ಜೀವನಮಟ್ಟ ಸುಧಾರಣೆ ಸೇರಿ ಹಲವು ಸಮಾಜಮುಖಿ ಚಿಂತನೆಗಳೊಂದಿಗೆ ಕಾರ್ಯಕ್ರಮ ನಿರ್ವಹಿಸುತ್ತಿದ್ದಾರೆ. ಸ್ವ-ಸಹಾಯ ಸಂಘಗಳಿಂದ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ಸಂಘಟನೆ ಪ್ರೇರಣೆಯಾಗಿದೆ. ಲಕ್ಷಾಂತರ ಮಂದಿ ಹೆಣ್ಣು ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಜಯಕರಶೆಟ್ಟಿ ಮಾತನಾಡಿ, ಸಾಮೂಹಿಕ ಬಿಲ್ವಾರ್ಚನೆ ಪೂಜೆಯು ಮನುಷ್ಯನ ಶಾಂತಿ- ನೆಮ್ಮದಿಯ ಸಂಕೇತವಾಗಿರುವುದರಿಂದ ಇದನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬೀದಿ ವ್ಯಾಪಾರಿಗಳಿಗೆ ಕೌಟುಂಬಿಕ ಜೀವನ ನಿರ್ವಹಣೆ ದೇಗುಲ, ಶಾಲಾ ಕಟ್ಟಡ, ಮೈದಾನ, ಆರೋಗ್ಯ ಸೇರಿದಂತೆ ಮದ್ಯವ್ಯಸನ ಬಿಡಿಸುವ ಯೋಜನೆ ಯಂತಹ ಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿವೆ. ಇದರಿಂದ ಲಕ್ಷಾಂತರ ಮಹಿಳೆಯರು ಅಲ್ಲದೆ ನಿರುದ್ಯೋಗಿಗಳು ಸಹ ಉದ್ಯೋಗ ಪಡೆದುಕೊಳ್ಳಲು ಅವಕಾಶ ವಾಗಿದೆ ಎಂದು ಹೇಳಿದರು.
ನಗರಸಭಾಧ್ಯಕ್ಷೆ ಲಕ್ಮಿದೇವಮ್ಮ, ಗ್ರಾಮಾಂತರ ಠಾಣಾ ಸಬ್ಇನ್ಸ್ಪೆಕ್ಟರ್ ರುದ್ರಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ರಾಮಯ್ಯ, ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನೀಲಿರಮೇಶ್, ಪತ್ರಕರ್ತ ಎಂ.ಎನ್.ಸುರೇಶ್ ಸೇರಿದಂತೆ ಸ್ವ-ಸಹಾಯ ಒಕ್ಕೂಟದ ಮಹಿಳಾ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.