ಶಾಂತಿ, ಸಂಸ್ಕೃತಿ ನೆಲೆಗೊಳಿಸಲು ಶ್ರಮಿಸಿದ ರೇಣುಕಾಚಾರ್ಯರು: ಗುಡೆಕೋಟೆ ನಾಗರಾಜ

| Published : Mar 13 2025, 12:53 AM IST

ಸಾರಾಂಶ

ಮಾನವನನ್ನು ಮಹಾದೇವನನ್ನಾಗಿಸುವ ಮಾರ್ಗವನ್ನು ಬೋಧಿಸಿದವರು ಶ್ರೀರೇಣುಕಾಚಾರ್ಯರು.

ಕನ್ನಡಪ್ರಭ ವಾರ್ತೆ ಸಂಡೂರು

ಮಾನವನನ್ನು ಮಹಾದೇವನನ್ನಾಗಿಸುವ ಮಾರ್ಗವನ್ನು ಬೋಧಿಸಿದವರು ಶ್ರೀರೇಣುಕಾಚಾರ್ಯರು ಎಂದು ವಕೀಲ ಗುಡೆಕೋಟೆ ನಾಗರಾಜ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಕುಲ ಶಾಂತಿಯುತವಾಗಿ ಬದುಕನ್ನು ಸಾಗಿಸಲು ಸಂಸ್ಕಾರ ಅಗತ್ಯ. ಜನತೆಗೆ ಇಂತಹ ಸಂಸ್ಕಾರ ನೀಡಿ, ಸಮಾಜದಲ್ಲಿ ಸಮಾನತೆಯನ್ನು ಸಾರಿದರು ಹಾಗೂ ದೇಶದಲ್ಲಿ ಶಾಂತಿ, ಸಂಸ್ಕೃತಿಯನ್ನು ನೆಲೆಗೊಳಿಸಲು ಶ್ರೀರೇಣುಕಾಚಾರ್ಯರು ಶ್ರಮಿಸಿದರು ಎಂದರು.

ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ವೀರಶೈವ ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ಎಲ್ಲಾ ಸಮಾಜದಲ್ಲಿ ಬಡವರಿದ್ದಾರೆ. ಬೇಡಜಂಗಮ ಸಮಾಜವು ಆರ್ಥಿಕವಾಗಿ ಹಿಂದುಳಿದಿದೆ. ಬೇಡುವ ಜಂಗಮರೆ ಬೇಡ ಜಂಗಮರು. ಭಕ್ತರ ಬೆಂಬಲ ಬೇಡಜಂಗಮರಿಗಿದೆ. ಬೇಡಜಂಗಮರು ತಮ್ಮ ಹಕ್ಕು ಹಾಗೂ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಸಂಘಟಿತರಾಗಿ ಹೋರಾಟ ನಡೆಸಬೇಕಿದೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಎಚ್.ಎಂ. ಮಂಜುನಾಥ, ಸಮಾಜದವರು ಸಂಘಟಿತರಾಗದಿದ್ದಲ್ಲಿ ಶೋಷಣೆ, ತುಳಿತಕ್ಕೆ ಒಳಗಾಗಬೇಕಾಗುತ್ತದೆ. ವೀರಶೈವ ಮಹಾಸಭಾದ ಗ್ರಾಮ, ನಗರ, ಯುವ ಹಾಗೂ ಮಹಿಳಾ ಘಟಕಗಳನ್ನು ರಚನೆ ಮಾಡಬೇಕಿದೆ. ವೀರಶೈವ ಮಠಗಳು ಎಲ್ಲಾ ವರ್ಗಗಳ ಜನತೆಗೆ ಅನ್ನ ಹಾಗೂ ಅಕ್ಷರದಾಸೋಹವನ್ನು ಕಲ್ಪಿಸಿವೆ. ವೀರಶೈವ ಧರ್ಮದ ಅನುಯಾಯಿಗಳು, ಧರ್ಮ ಹಾಗೂ ಸಂಸ್ಕೃತಿಯನ್ನು ಕಡೆಗಣಿಸದೆ, ಅವುಗಳನ್ನು ಅನುಸರಿಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕಿದೆ ಎಂದರು.

ಶಿರಸ್ತೇದಾರ ಕೆ.ಎಂ. ಶಿವಕುಮಾರ್ ಶ್ರೀರೇಣುಕಾಚಾರ್ಯರ ಆದರ್ಶಗಳನ್ನು ಎಲ್ಲರೂ ಪಾಲಿಸೋಣ ಎಂದರು.

ತಹಶೀಲ್ದಾರ್ ಜಿ. ಅನಿಲ್‌ಕುಮಾರ್‌ ಶ್ರೀರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಂ.ಚರಂತಯ್ಯನವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೆ.ಎಂ. ಶರಣಬಸವ ಶಾಸ್ತ್ರಿ ಹಾಗೂ ಎಚ್.ಎಂ. ರವಿಸ್ವಾಮಿಯವರು ಪೂಜಾ ಕಾರ್ಯ ನೆರವೇರಿಸಿದರು.

ಮುಖಂಡರಾದ ಗಡಂಬ್ಲಿಚನ್ನಪ್ಪ, ಎಚ್.ಎಂ. ಮಂಗಳಮ್ಮ, ಎಂ.ಶಾಂತಮ್ಮ, ಎಂ.ವಿ. ಹಿರೇಮಠ, ವಿ.ಜೆ. ಶ್ರೀಪಾದಸ್ವಾಮಿ, ಎಚ್.ಎಂ. ಮಂಜುನಾಥ, ಎ.ಎಂ.ಪಿ ಕೊಟ್ರೇಶ, ಎ.ಎಂ.ಪಿ.ಧನುಂಜಯ, ಕೆ.ಎಂ. ವಿನಾಯಕ, ಬಿ.ಎಂ. ಬಸವರಾಜ, ಬಿ.ಎಂ. ಮಹಾಂತೇಶ್, ಬಿ.ಎಂ. ನಾಗರಾಜಸ್ವಾಮಿ, ಎಂ.ನಾಗರಾಜ, ಸಿ.ಎಂ. ನಾಗಭೂಷಣ, ಬಿ.ಎಂ. ಉಜ್ಜಿನಯ್ಯ, ಕೆ.ಎಂ. ಕೊಟ್ರಸ್ವಾಮಿ, ಎಚ್.ಎಂ. ಮಹಾಂತೇಶ್, ಎಚ್.ಎಂ. ಗುರುಬಸವರಾಜ, ಬಿ.ಎಂ. ಸೋಮಶೇಖರ್, ಬಿ.ಎಂ. ನಾಗಯ್ಯ, ಎನ್.ಎಂ. ಚಂದ್ರಶೇಖರಸ್ವಾಮಿ, ಬಿ.ಎಂ. ನಾಗರಾಜಯ್ಯ ಮುಂತಾದವರಿದ್ದರು.