ವಿವಿಧ ವಾರ್ಡ್‌ಗಳ 9 ಶುದ್ಧ ನೀರಿನ ಘಟಕಗಳ ದುರಸ್ತಿ

| Published : Mar 19 2025, 12:33 AM IST

ಸಾರಾಂಶ

ನಗರದ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿನ ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಿ, ಸಾರ್ವಜನಿಕ ಸೇವೆಗೆ ಚಾಲನೆ ನೀಡಲಾಗಿದೆ ಎಂದು ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹೇಳಿದ್ದಾರೆ.

- ತುರ್ತು ಅಭಿವೃದ್ಧಿ ಕಾಮಗಾರಿಗಳ ಪರಿಶೀಲಿಸಿ ನಗರಸಭೆ ಅಧ್ಯಕ್ಷೆ ಕವಿತಾ ಹೇಳಿಕೆ- - - ಕನ್ನಡಪ್ರಭ ವಾರ್ತೆ ಹರಿಹರ

ನಗರದ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿನ ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಿ, ಸಾರ್ವಜನಿಕ ಸೇವೆಗೆ ಚಾಲನೆ ನೀಡಲಾಗಿದೆ ಎಂದು ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹೇಳಿದರು.

ಗ್ರಾಮದೇವತೆ ಹಬ್ಬದ ನಿಮಿತ್ತ ಕೈಗೊಂಡಿರುವ ತುರ್ತು ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಕಳೆದ ಹಲವು ತಿಂಗಳಿಂದ ನಗರದ ವಿವಿಧ ವಾರ್ಡ್‌ಗಳಲ್ಲಿರುವ ಶುದ್ಧ ನೀರು ಘಟಕಗಳು ಚಾಲನೆ ಇಲ್ಲದೇ ಬಂದ್ ಆಗಿದ್ದವು. ಗ್ರಾಮ ದೇವತೆ ಹಬ್ಬಕ್ಕೆ ಸಾರ್ವಜನಿಕರಿಗೆ ನೀರಿನ ತೊಂದರೆ ಆಗಬಾರದು ಎಂಬ ಸದುದ್ದೇಶದಿಂದ ₹25 ಲಕ್ಷ ವೆಚ್ಚದಲ್ಲಿ 13 ಘಟಕಗಳ ತುರ್ತು ದುರಸ್ತಿಗಾಗಿ ಟೆಂಡರ್ ಕರೆಯಲಾಗಿದೆ. ಈಗಾಗಲೇ ಸುಮಾರು 9 ಶುದ್ಧ ನೀರು ಘಟಕಗಳನ್ನು ದುರಸ್ತಿ ಮಾಡಿಸಿ, ಜನಸೇವೆಗೆ ಸಮರ್ಪಿಸಲಾಗಿದೆ ಎಂದರು.

ನಗರದ ವಿವಿಧ ವಾರ್ಡುಗಳಲ್ಲಿರುವ ಕಿರುನೀರು ಸರಬರಾಜು ಕೊಳವೆಬಾವಿ ಮೋಟಾರ್ ಹಾಗೂ ವಿದ್ಯುತ್ ಪರಿಕರಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಸುಮಾರು ಅಂದಾಜು ₹3 ಲಕ್ಷ ವೆಚ್ಚದಲ್ಲಿ ಪ್ರತಿ ವಾರ್ಡ್‌ಗೆ 3ರಿಂದ 4 ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಗ್ರಾಮದೇವತೆ ಹಬ್ಬ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೀರಿನ ತೊಂದರೆ ಆಗದಂತೆ ನಗರಸಭೆ ಅಗತ್ಯ ಎಚ್ಚರಿಕೆ ವಹಿಸುತ್ತಿದೆ ಎಂದು ಹೇಳಿದರು.

ರಾಣೆಬೆನ್ನೂರು ತಾಲೂಕು ತುಂಗಭದ್ರಾ ನದಿ ದಡದಲ್ಲಿರುವ ಹರಿಹರ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹೆಸ್ಕಾಂ ಎಂಜಿನಿಯರ್ ಲಕ್ಷ್ಮಣ್ ಅವರೊಂದಿಗೆ ಮಾತನಾಡಿದರು. ಹರಿಹರ ಜಾತ್ರೆ ಕಾರಣ ಐದು ದಿನಗಳ ಕಾಲ ಕೌಲತ್ತು ಗ್ರಾಮದ ಸುತ್ತಮುತ್ತ ವಿದ್ಯುತ್ ಸರಬರಾಜು ಕಡಿತ ಮಾಡಬಾರದು ಎಂದು ಮನವರಿಕೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ನಗರಸಭಾ ಸದಸ್ಯ ಎ.ವಾಮನಮೂರ್ತಿ, ವಿರೂಪಾಕ್ಷಿ, ಲಕ್ಷ್ಮೀ ಮೋಹನ್, ಷಹಜಾದ್ ಸನಾವುಲ್ಲಾ ಮತ್ತು ನಗರಸಭೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಇತರರಿದ್ದರು.

- - -

ಕೋಟ್‌ ರಾಘವೇಂದ್ರ ಮಠ ಸಮೀಪದ 24*7 ಜಲಸಿರಿ ನೀರಿನ ಘಟಕಕ್ಕೆ ಭೇಟಿ ನೀಡಿ, ನೀರಿನ ಶುದ್ಧೀಕರಣ ಘಟಕ ವ್ಯವಸ್ಥೆ ಪರಿಶೀಲನೆ ನಡೆಸಲಾಗಿದೆ. ಪ್ರತಿ ವಾರ್ಡಿಗೂ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇವಸ್ಥಾನ ರಸ್ತೆ ಹಾಗೂ ಮೆಟ್ಟಿಲು ಹೊಳೆಯ ರಸ್ತೆ, ಮಹಜೇನಹಳ್ಳಿ ದೇವಸ್ಥಾನ ಬಳಿ ತುರ್ತು ಕ್ರಮಗಳ ಬಗ್ಗೆ ಮಾಹಿತಿ ಪಡೆದು, ಕಾಮಗಾರಿ ಮುಗಿಸಬೇಕು

- ಕವಿತಾ ಮಾರುತಿ ಬೇಡರ್, ನಗರಸಭಾಧ್ಯಕ್ಷೆ - - -

-16ಎಚ್.ಆರ್.ಆರ್ 05(2):

ಹರಿಹರದಲ್ಲಿ ಗ್ರಾಮ ದೇವತೆ ಹಬ್ಬದ ನಿಮಿತ್ತ ನಗರಸಭೆ ಕೈಗೊಂಡಿರುವ ತುರ್ತು ಕಾಮಗಾರಿಗಳನ್ನು ನಗರಸಭಾ ಅಧ್ಯಕ್ಷ ಕವಿತಾ ಮಾರುತಿ ಬೇಡರ್ ಪರಿಶೀಲನೆ ನಡೆಸಿದರು.