ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಕ್ರಮಕ್ಕೆ ವರದಿ: ತಂಜಿಲ್ಲಾ

| Published : Jun 16 2025, 07:07 AM IST / Updated: Jun 16 2025, 07:08 AM IST

ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಕ್ರಮಕ್ಕೆ ವರದಿ: ತಂಜಿಲ್ಲಾ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಅಕ್ಕಿ ಗಿರಣಿಗಳು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮೇಲಾಧಿಕಾರಿಗೆ ವರದಿ ಮಾಡಲಾಗುವುದು ಎಂದು ಜಿಲ್ಲಾ ಪರಿಸರ ಉಪ ಅಧಿಕಾರಿ ತಂಜಿಲ್ಲಾ ಗಿರಣಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಮಲೇಬೆನ್ನೂರು: ಪಟ್ಟಣದ ಅಕ್ಕಿ ಗಿರಣಿಗಳು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮೇಲಾಧಿಕಾರಿಗೆ ವರದಿ ಮಾಡಲಾಗುವುದು ಎಂದು ಜಿಲ್ಲಾ ಪರಿಸರ ಉಪ ಅಧಿಕಾರಿ ತಂಜಿಲ್ಲಾ ಗಿರಣಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಅಕ್ಕಿಗಿರಣಿ ಮತ್ತು ಅವಲಕ್ಕಿ ಗಿರಣಿಗಳ ಧೂಳು, ಬೂದಿಯಿಂದ ಸಾರ್ವಜನಿಕರಿಗೆ ತೊಂದರೆಯಾದ ಕಾರಣ ಜನತೆ ದೂರು ನೀಡಿದ್ದಕ್ಕಾಗಿ ಪರಸಭೆಯಲ್ಲಿ ಕರೆದ ಅಕ್ಕಿಗಿರಣಿ ಮತ್ತು ಅವಲಕ್ಕಿ ಗಿರಣಿ ಮಾಲೀಕರ ಸಭೆಯಲ್ಲಿ ಮಾತನಾಡಿದರು.

ಗಿರಣಿಗಳ ಧೂಳಿನ ವಿಡಿಯೋಗಳು ಬಂದಿದ್ದು ಪರಿಶೀಲಿಸಿದಾಗ ಲೋಪಗಳು ಕಂಡು ಬಂದಿದೆ. ನೋಟಿಸ್‌ಗೆ ಯಾರಿಂದಲೂ ವರದಿ ಬಂದಿಲ್ಲ, ಈಗಲೂ ದೂರು ಬಂದಿವೆ. ಗಿರಣಿ ಮಾಲೀಕರು ಧೂಳು ಹೊರಬರದಂತೆ ತಕ್ಷಣ ಕ್ರಮತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ವಾರ್ಡ್ ೫, ೧೨, ೧೩, ೧೪, ೧೮ ರಲ್ಲಿ ನಾಗರಿಕರು ಮಿಲ್ ಬೂದಿಗಳಿಂದ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳ ಊಟದ ತಟ್ಟೆಯಲ್ಲಿ ಬೂದಿ ಬೀಳುತ್ತಿದೆ ಎಂದು ದಂಡಿ ತಿಪ್ಪೇಸ್ವಾಮಿ. ರೋಜಾ, ಸುಧಾ, ಮೊಹಮ್ಮದ್, ಚಮನ್ ದೂರಿದರು.

ಮಿಲ್ ಮಾಲಿಕರಾದ ಬಸವರಾಜಪ್ಪ, ಮಲ್ಲಿಕಾರ್ಜುನ್, ರುದ್ರೇಶ್ ಸಮಸ್ಯೆ ಆಲಿಸಿದ ನಂತರ ಮಾತನಾಡಿ, ಬೂದಿ ತಡೆಯಲು ಕ್ರಮ ತೆಗೆದುಕೊಂಡಿದ್ದೇವೆ. ಮಳೆಗಾಲದಲ್ಲಿ ಭಾರೀ ಗಾಳಿ ಬೀಸುವುದರಿಂದ ಈ ತೊಂದರೆಯಾಗಬಹುದು, ತಜ್ಞರನ್ನು ಕರೆಸಿ ಮಾತನಾಡುತ್ತೇವೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೇಳಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಪುರಸಭಾ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ರೈಸ್‌ಮಿಲ್‌ಗಳಿಂದ ಮಲೇಬೆನ್ನೂರು ಪಟ್ಟಣಕ್ಕೆ ಉತ್ತಮ ಹೆಸರು ಬಂದಿದೆ. ಬೂದಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಮಿಲ್ ಮಾಲೀಕರಿಗೆ ಸೂಚಿಸಿದರು.

ಪುರಸಭಾ ಸದಸ್ಯರಾದ ಗೌಡ್ರ ಮಂಜಣ್ಣ, ಲೋಕೇಶ್, ಶಿವು, ಮತ್ತಿತರರು ಈ ಬಗ್ಗೆ ಅನಿಸಿಕೆ ಹಂಚಿಕೊಂಡರು.

ಮುಖ್ಯಾಧಿಕಾರಿ ಜಯಲಕ್ಷ್ಮಿ, ಪರಿಸರ ಅಧಿಕಾರಿಗಳು ಇದ್ದರು.