ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರನ್ನೊಳಗೊಂಡ ಸಮೃದ್ಧ ಭಾರತವನ್ನು ಸಂವಿಧಾನದ ಶಕ್ತಿಯ ಜೊತೆ ನಿರ್ಮಿಸೋಣ ಎಂದು ತಹಸೀಲ್ದಾರ್ ಜಿ. ಮಂಜುನಾಥ್
ಬಂಟ್ವಾಳ: ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರನ್ನೊಳಗೊಂಡ ಸಮೃದ್ಧ ಭಾರತವನ್ನು ಸಂವಿಧಾನದ ಶಕ್ತಿಯ ಜೊತೆ ನಿರ್ಮಿಸೋಣ ಎಂದು ತಹಸೀಲ್ದಾರ್ ಜಿ. ಮಂಜುನಾಥ್ ಹೇಳಿದರು. ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಬಿ.ಸಿ. ರೋಡಿನ ಆಡಳಿತ ಸೌಧದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಆಚರಣೆಯ ಧ್ವಜಾರೋಹಣ ನೆರವೇರಿಸಿದ ಅವರು, ದೇಶದ ಶಾಂತಿ-ಸೌಹಾರ್ದತೆ ಹಾಗೂ ಭ್ರಾತೃತ್ವವನ್ನು ಕಾಪಾಡಿಕೊಂಡು ಬಂದಾಗ ನಿಜವಾದ ಗಣರಾಜ್ಯವನ್ನು ಕಾಪಾಡಿಕೊಂಡಂತಾಗುತ್ತದೆ. ದೇಶದ ಏಳಿಗೆಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದ ಅವರು, ಸರ್ಕಾರ ಮತ್ತು ಜನತೆಯ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ಯು. ರಾಜೇಶ್ ನಾಯಕ್ ಅವರು ಜನತೆಗೆ 77ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.ಗಣರಾಜ್ಯೋತ್ಸವ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ಕಾವಳಕಟ್ಟೆ ಶಾಲಾ ವಿದ್ಯಾರ್ಥಿನಿ ವಂದನಾ, ಸಂವಿಧಾನದ ಆಶಯಗಳ ಸಾಕಾರ ಪ್ರತಿಯೊಬ್ಬರ ಧ್ಯೇಯ ಆಗಬೇಕು ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಯೋಧ ಕ್ಯಾ. ಧನಂಜಯ ಅವರು ಗಣರಾಜ್ಯಕ್ಕೆ ದೊಡ್ಡ ಸವಾಲಾಗಿರುವುದು ಸಮಾಜದಲ್ಲಿ ಆಳವಾಗಿ ಬೇರೂರಿರುವ ಡ್ರಗ್ಸ್ ಮಾಫಿಯಾ. ಈ ಬಗ್ಗೆ ವಿದ್ಯಾರ್ಥಿ ಸಮೂಹ ಜಾಗರೂಕರಾಗುವ ಜೊತೆಗೆ ಶಿಕ್ಷಕರು, ಪೋಷಕರು ಹಾಗೂ ಸಮಾಜ ಗಂಭೀರವಾಗಿ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಬುಡಾ ಅಧ್ಯಕ್ಷ ಬೇಬಿ ಕುಂದರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು. ಇದೇ ವೇಳೆ ಮಾಜಿ ಸೈನಿಕರಾದ ಕ್ಯಾ. ಧನಂಜಯ, ಹೆನ್ರಿ ರೋಡ್ರಿಗಸ್, ರಂಗನಾಥ ರೈ, ಮಾಧವ ಕುಲಾಲ್ ಮಾಣಿ, ಮೋಹನ್ ಗೌಡ ಅವರನ್ನು ಸನ್ಮಾನಿಸಲಾಯಿತು.
ಕಬಡ್ಡಿ, ಕರಾಟೆ, ವೈಟ್ ಲಿಫ್ಟ್, ಡಿಸ್ಕ್ ತ್ರೋ, ಈಜು ಮೊದಲಾದ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಪ್ರೀತೇಶ್ ವಿಟ್ಲ, ಚೈತನ್ಯಾ ಸಾಲೆತ್ತೂರು, ಕೀರ್ತಿ ಕುಕ್ಕಿಲ, ಹೇಮಂತ್ ತೆಂಕ ಕಜೆಕಾರು, ಶಮೀರ್ ಅಬ್ದುಲ್ಲ, ಸಾನ್ವಿ ಕೆ, ಕೃತಿ ನೆಟ್ಲ, ಅನಘ್ರ್ಯ ಬರಿಮಾರು, ಅನನ್ಯ ಬರಿಮಾರು ಹಾಗೂ ಜಾವೆಲಿನ್ ಮತ್ತು ಡಿಸ್ಕ್ ತ್ರೋ ವಿಭಾಗದಲ್ಲಿ ಸಾಧನೆಗೈದ ಶಿಕ್ಷಕಿ ಭಾಗೀರಥಿ ರೈ ಅವರನ್ನು ಗೌರವಿಸಲಾಯಿತು. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆಗಳಲ್ಲಿ ಟಾಪರ್ ಗಳಾದ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹ ಧನ ವಿತರಿಸಲಾಯಿತು. ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ವಂದಿಸಿದರು. ಶಿಕ್ಷಕ ಗೋಪಾಕೃಷ್ಣ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಎಸ್ ವಿಎಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರೈತ ಗೀತೆ ಹಾಗೂ ನಾಡಗೀತೆ ಹಾಡಿದರು.ಇದಕ್ಕೂ ಮೊದಲು ಪೊಲೀಸ್, ಗೃಹ ರಕ್ಷಕ ದಳ, ಮಾಜಿ ಸೈನಿಕರು, ವಿವಿಧ ಶಾಲೆಗಳ ಸ್ಕೌಟ್ಸ್, ಗೈಡ್ಸ್ ಮೊದಲಾದ ತಂಡಗಳಿಂದ ಪಥ ಸಂಚಲನ ಹಾಗೂ ಅತಿಥಿಗಳಿಂದ ಗೌರವ ವಂದನೆ ಸ್ವೀಕಾರ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.